ಶ್ರೀರಾಮ ಸಕ್ಕರೆ ಕಾರ್ಖಾನೆ 40 ವರ್ಷಗಳ ಕಾಲ ಗುತ್ತಿಗೆ ನೀಡಲು ನಿರ್ಧಾರ
ಮೈಸೂರು, ಡಿಸೆಂಬರ್ 9 : ಕೆ.ಆರ್.ನಗರ ತಾಲೂಕಿನಲ್ಲಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವ ಉದ್ದೇಶದಿಂದ ಖಾಸಗಿಯವರಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ 40 ವರ್ಷಗಳ ಅವಧಿಗೆ ನೀಡಲಾಗುವುದು. ಈ ಕುರಿತ ಪ್ರಸ್ತಾವವನ್ನು ಒಪ್ಪಿಗೆಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಮೈಸೂರಲ್ಲಿ 85 ಕಾಲೇಜುಗಳಿದ್ದರೂ ಉದ್ಯೋಗಾವಕಾಶ ಕಡಿಮೆ:ಪ್ರತಾಪ್ ಸಿಂಹ
ಈ ಕುರಿತು ಒಂದು ತಿಂಗಳೊಳಗೆ ಟೆಂಡರ್ ಆಹ್ವಾನಿಸಲಾಗುವುದು. ಈ ಹಿಂದೆ ಎರಡು ಸಲ ಟೆಂಡರ್ ಆಹ್ವಾನಿಸಿದ್ದರೂ ಕಾರ್ಖಾನೆ ನಡೆಸಲು ಯಾರೂ ಮುಂದೆ ಬಂದಿರಲಿಲ್ಲ. ಏಕೆಂದರೆ ಎರಡೂ ಸಲ 30 ವರ್ಷಗಳ ಅವಧಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಆದ್ದರಿಂದ ಈ ಬಾರಿ 40 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ನಿರ್ಧರಿಸಲಾಗಿದೆ ಎಂದರು.
ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 215 ನೌಕರರು ನಿವೃತ್ತರಾಗಿದ್ದಾರೆ. ರೈತರಿಗೆ ಬರಬೇಕಾಗಿದ್ದ 31 ತಿಂಗಳ ಬಾಕಿ ಹಣದಲ್ಲಿ 3.5 ಕೋಟಿ ಹಣವನ್ನು ನೀಡಲಾಗಿದೆ. ಸರಕಾರವೇ ಕಾರ್ಖಾನೆ ನಡೆಸಿದಲ್ಲಿ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿಯವರಿಗೆ ಗುತ್ತಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಮತ್ತು ಕೆ.ಆರ್.ನಗರ ತಾಲೂಕುಗಳು ಈ ಕಾರ್ಖಾನೆಯ ವ್ಯಾಪ್ತಿಗೆ ಬರುತ್ತವೆ. 1250 ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಈ ಕಾರ್ಖಾನೆ ಹೊಂದಿದೆ ಎಂದು ಸಚಿವರು ಹೇಳಿದರು.
ಕೆಆರ್ ಎಸ್ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನ: ಆತಂಕ ಬೇಡ ಎಂದ ಎಚ್ಡಿಕೆ
ಕೆಆರ್ ಎಸ್ ಉದ್ಯಾನವನವನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿರೋಧ ವ್ಯಕ್ತಪಡಿಸುತ್ತಿರುವವರು ಮೊದಲು ಯೋಜನೆಯ ಉದ್ದೇಶವನ್ನು ತಿಳಿದುಕೊಳ್ಳಲಿ ಎಂದರು.
ಕುಮಾರಸ್ವಾಮಿ-ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಮುಖ್ಯಾಂಶಗಳು
ತಜ್ಞರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಎಲ್ಲರೂ ಕುಳಿತು ಚರ್ಚೆ ಮಾಡೋಣ. ಯೋಜನೆಯನ್ನು ವಿರೋಧಿಸುತ್ತಿರುವವರನ್ನೂ ಕರೆಯುತ್ತೇವೆ. ಅವರೂ ಬಂದು ಅಭಿಪ್ರಾಯ ತಿಳಿಸಲಿ ಎಂದು ಉತ್ತರಿಸಿದರು.