ಮುದ್ದೆ, ಕೋಳಿಸಾರು ಬಿಟ್ಟು ಬಾದಾಮಿ ತಿನ್ನಲು ಹೊರಟ ಸಿಎಂ
Recommended Video

ಮೈಸೂರು, ಮೇ 5: ಮೈಸೂರಿನಲ್ಲಿ ನಾಟಿ ಕೋಳಿ ಮುದ್ದೆ ಸಾರು ತಿನ್ನುತ್ತಿದ್ದ ಸಿದ್ದರಾಮಯ್ಯ ಇದೀಗ ಬಾದಮಿ ಗೋಡಂಬಿ ತಿನ್ನಲು ತೆರಳಿದ್ದಾರೆ ಹೀಗಂತ ಲೇವಡಿ ಮಾಡಿದವರು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್.
ನಂಜನಗೂಡು ಪಟ್ಟಣದ ಶ್ರೀರಾಂಪುರ ಬಡಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಹರ್ಷವರ್ಧನ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ತನ್ನ ಬದ್ಧ ವೈರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಮತ್ತು ವ್ಯಂಗ್ಯದ ಮಾತನಾಡಿದ ಅವರು ಕೊಲ್ಲಾಪುರದ ಪೈಲ್ವಾನ್ನಂತೆ ಕಚ್ಚೆ ಕಟ್ಟಿಕೊಂಡು ಕುಸ್ತಿ ಕರೆಯುತ್ತಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಹೆದರಿಕೊಂಡು ಬಾದಾಮಿ ಕ್ಷೇತ್ರಕ್ಕೆ ಓಡಿ ಹೋಗಿದ್ದಾರೆ. ಚುನಾವಣೆ ಫಲಿತಾಂಶ ದಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿನೊಂದಿಗೆ ಇನ್ನುಳಿದ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಸರದಿ ಮುಂದುವರೆಯಲಿದೆ ಎಂದರು.
ಭ್ರಷ್ಟ ಹಾಗೂ ಅಪ್ಪಟ ಜಾತಿವಾದಿಯಾಗಿರುವ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ ನಾಯಕರನ್ನು ಹಂತ ಹಂತವಾಗಿ ತುಳಿಯುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಒಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಹುಡುಕುವ ಸ್ಥಿತಿ ಬಂದೊದಗಿದೆ ಎಂದರು.

ಮಾದರಿ ಕ್ಷೇತ್ರವನ್ನಾಗಿಸುವ ಕನಸಿನೊಂದಿಗೆ ಮಹತ್ವಕಾಂಕ್ಷೆ ಯೋಜನೆಗಳಾದ ಬಟಾನಿಕಲ್ ಗಾರ್ಡನ್(ಸಸ್ಯಕಾಶಿ), ತಾಲೂಕು ಕ್ರೀಡಾಂಗಣ, ಹೈಟೆಕ್ ಬಸ್ ನಿಲ್ದಾಣ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ದುರುದ್ದೇಶದಿಂದ ಪೂರ್ಣಗೊಳಿಸಿದೆ ಕಾಂಗ್ರೆಸ್ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಿದೆ ಎಂದು ದೂರಿದರು.
ನಾನು ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳು ಪೂರ್ಣಗೊಳಿಸಲು ಸಿದ್ದರಾಮಯ್ಯ ಇಚ್ಛಾಶಕ್ತಿ ತೋರಲಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ ಹೊಸದಾಗಿ ಕೈಗೊಂಡ ಅಭಿವೃದ್ಧಿ ಯೋಜನೆಯ ನಿದರ್ಶನವಿದ್ದರೆ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ತರಗನಹಳ್ಳಿ ಗ್ರಾಮದ ಕೆಲ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಮುಡಾ ಮಾಜಿ ಅಧ್ಯಕ್ಷ ಬಸವೇಗೌಡ, ಜಿಪಂ ಮಾಜಿ ಅಧ್ಯಕ್ಷ ಡಾ.ಶಿವರಾಂ, ಪ್ರಥಮದರ್ಜೆ ಗುತ್ತಿಗೆದಾರ ಯು.ಎನ್.ಪದ್ಮನಾಭರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯದೇವ್, ನಗರಾಧ್ಯಕ್ಷ ಬಾಲಚಂದ್ರ, ಯುವಾ ಮೋರ್ಚಾ ಅಧ್ಯಕ್ಷ ಶ್ರೀಕಂಠ ಸೇರಿದಂತೆ ಮತ್ತಿತರರಿದ್ದರು.












Click it and Unblock the Notifications