ಮೈಸೂರು ದಸರೆ ಆನೆಗಳಿಗೆ ಶಿಬಿರಗಳಲ್ಲಿ ವಿಶೇಷ ತಯಾರಿ
ಮೈಸೂರು, ಆಗಸ್ಟ್ 1: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕ್ಯಾಪ್ಟನ್ ಅರ್ಜುನ ಸೇರಿದಂತೆ 15 ಆನೆಗಳು ಈ ಬಾರಿ ಭಾಗವಹಿಸಲಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು, ಬಳ್ಳೆ, ಕೊಡಗಿನ ದುಬಾರೆ, ಕೆ.ಗುಡಿ ಶಿಬಿರಗಳಲ್ಲಿ ಆನೆಗಳಿಗೆ ಮಹಾಮಜ್ಜನ, ಭಾರಿ ಭೋಜನ ಹಾಗೂ ವಿಶೇಷ ತಯಾರಿ ನಡೆಯುತ್ತಿದೆ.
ಸತತ ನಾಲ್ಕನೇ ಬಾರಿಗೆ ಅಂಬಾರಿ ಹೊರಲು ಸಿದ್ಧನಾಗಿರುವ ಅರ್ಜುನನಿಗೆ (57) ಎಚ್.ಡಿ. ಕೋಟೆ ತಾಲ್ಲೂಕಿನ ಕೇರಳದ ಗಡಿಯಂಚಿನ ಬಳ್ಳೆ ಶಿಬಿರದಲ್ಲೂ, 13 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ (59), ಅಭಿಮನ್ಯು (51), ವರಲಕ್ಷ್ಮಿ(61), ಗೋಪಾಲ ಸ್ವಾಮಿ(35), ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಭೀಮ(17), ಕೃಷ್ಣ (56), ದ್ರೋಣ(35) ಆನೆಗಳು ಮತ್ತಿ ಗೋಡು ಶಿಬಿರದಲ್ಲೂ,

ಕಾವೇರಿ(39), ವಿಕ್ರಮ(44), ಗೋಪಿ(35), ಹರ್ಷ (50), ಪ್ರಶಾಂತ (61), ವಿಜಯ (60) ಕೊಡಗಿನ ದುಬಾರೆ ಕ್ಯಾಂಪಿನಲ್ಲಿ ಹಾಗೂ ಗಜೇಂದ್ರ (62) ಕೆ.ಗುಡಿ ಶಿಬಿರದಲ್ಲಿ ನಿತ್ಯವೂ ವಿಶೇಷ ತಯಾರಿ ನೀಡಲಾಗುತ್ತಿದೆ. ಆಗಸ್ಟ್ 14ಕ್ಕೆ ವೀರನಹೊಸಳ್ಳಿಯಲ್ಲಿ ಗಜಪಯಣ ನಡೆಯಲಿದ್ದು, ಮೈಸೂರಿಗೆ ಗಜಪಡೆ ತೆರಳಲಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಗಜಪಡೆಗೆ ಪುಷ್ಕಳ ಭೋಜನ
ಶಿಬಿರದಲ್ಲಿ ಎಂದಿನಂತೆ ನೀಡಲಾಗುವ ರಾಗಿ ಮುದ್ದೆ ಜೊತೆಗೆ ಪೌಷ್ಟಿಕಾಂಶಯುಕ್ತ ಗೋದಿ ಹುಡಿ, ಕುಸಲಕ್ಕಿಯನ್ನು ಬೇಯಿಸಿ, ಉಂಡೆ ಮಾಡಿ ನೀಡಲಾಗುತ್ತಿದೆ. ಅಲ್ಲದೆ ಭತ್ತದ ಕುಸುರೆಯನ್ನೂ ಕೊಡಲಾಗುವುದು. ಪಶುವೈದ್ಯರಾದ ಉಮಾಶಂಕರ್, ನಾಗರಾಜ್ ನಿತ್ಯ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದಾರೆ.

ಬಳ್ಳೆ ಶಿಬಿರದಲ್ಲಿ ಆರ್ಎಫ್ ಒ ವಿನಯ್ ಹಾಗೂ ಮತ್ತಿಗೋಡು ಶಿಬಿರದಲ್ಲಿ ಆರ್ಎಫ್ ಒ ಕಿರಣ್ ಕುಮಾರ್ ಮಾರ್ಗದರ್ಶನದಲ್ಲಿ ಶಿಬಿರದ ಉಸ್ತುವಾರಿ ಡಿಆರ್ ಎಫ್ ಒ ಜಗದೀಶನಾಯ್ಕ, ಅರಣ್ಯ ರಕ್ಷಕಿ ಶಾರದಮ್ಮ ಕಣ್ಗಾವಲಿನಲ್ಲಿ ಆರೈಕೆ ನಡೆಯುತ್ತಿದೆ.

ಹಬ್ಬದ ವಾತಾವರಣ
ಇಡೀ ಶಿಬಿರದಲ್ಲಿ ಹಬ್ಬದ ವಾತಾವರಣ ಇದೆ. ಮಾವುತರು, ಕಾವಾಡಿಗಳು ದಸರೆ ತಯಾರಿಯಲ್ಲಿ ನಿರತರಾಗಿದ್ದಾರೆ.

ಆನೆಗಳಿಗೆ ನಿತ್ಯ ಎರಡು ಬಾರಿ ಸ್ನಾನ ಮಾಡಿಸಿ, ಕಾಡಿಗೆ ಹೋಗುವ ಮೊದಲು ಹಾಗೂ ನಂತರ ಆಹಾರ ನೀಡುತ್ತಿದ್ದೇವೆ. ದಸರಾದಲ್ಲಿ ಭಾಗವಹಿಸುವ ಆನೆಗಳ ಬಗ್ಗೆ ನಿಗಾ ವಹಿಸಲಾಗಿದೆ. ಈ ಬಾರಿ ಹೊಸದಾಗಿ 3 ಆನೆಗಳು ದಸರಾದಲ್ಲಿ ಭಾಗವಹಿಸಲು ತೆರಳುತ್ತಿವೆ ಎನ್ನುತ್ತಾರೆ ಡಿಆರ್ ಎಫ್ ಒ ಜಗದೀಶ್ ನಾಯ್ಕ್.












Click it and Unblock the Notifications