ಮುಡುಕುತೊರೆ ಜಾತ್ರೆಯಲ್ಲಿ ಏನೇನಿದೆ ಗೊತ್ತಾ?
ಐತಿಹಾಸಿಕ ಮುಡುಕುತೊರೆ ಜಾತ್ರೆ ಆರಂಭಗೊಂಡಿದ್ದು, ಎಲ್ಲೆಡೆ ಸಡಗರ- ಸಂಭ್ರಮ ಮನೆ ಮಾಡಿದೆ. ಜಾತ್ರೆ ಸಂದರ್ಭ ನಡೆಯುವ ಧಾರ್ಮಿಕ ಕಾರ್ಯಗಳು ವಿಶಿಷ್ಟ ಮತ್ತು ವಿಭಿನ್ನವಾಗಿರುತ್ತವೆ.
ಹದಿನೇಳು ದಿನಗಳ ಕಾಲ ನಡೆಯುವ ಜಾತ್ರೆಗೆ ಜನವರಿ 30ರಂದು ಅಂಕುರಾರ್ಪಣೆಯೊಂದಿಗೆ ಧಾರ್ಮಿಕ ಉತ್ಸವಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. 31ರಂದು ಮಂಗಳವಾರ ಧ್ವಜಾರೋಹಣ, ಫೆ.1ರಂದು ಬುಧವಾರ ಚಂದ್ರಮಂಡಲಾರೋಹಣ, 2ರಂದು ಗುರುವಾರ ಅನಂತ ಪೀಠಾರೋಹಣ, 3ರಂದು ಶುಕ್ರವಾರ ಪುಷ್ಪ ಮಂಟಪಾರೋಹಣ, 4ರಂದು ಶನಿವಾರ ವೃಷಭಾರೋಹಣ, 5ರಂದು ಭಾನುವಾರ ಗಿರಿಜಾಕಲ್ಯಾಣ ಗಜಾರೋಹಣ ಉತ್ಸವಗಳು,[ಸಾಗರ ಮಾರಿಕಾಂಬ ಜಾತ್ರೆ ಫೆಬ್ರವರಿ 14 ರಿಂದ ಆರಂಭ]

ಫೆ.7ರಂದು ಮಂಗಳವಾರ ಚಿತ್ರರಥ, ಶಯನೋತ್ಸವ, 8ರಂದು ಬುಧವಾರ ತೀರ್ಥಸ್ನಾನೋತ್ಸವ, ಪಲ್ಲಕ್ಕಿ ಉತ್ಸವ, 10ರಂದು ಶುಕ್ರವಾರ ಮರಿತೆಪ್ಪೋತ್ಸವ, 11ರಂದು ಶನಿವಾರ ಕೈಲಾಸವಾಹನೋತ್ಸವ, 12ರಂದು ಭಾನುವಾರ ಮಂಟಪೋತ್ಸವಗಳು, 13ರಂದು ಸೋಮವಾರ ಗಿರಿಪ್ರದಕ್ಷಿಣೆ ಹಾಗೂ ಫೆ.15ರಂದು ಬುಧವಾರ ಮಹಾಭಿಷೇಕ ಹಾಗೂ ಶೆಟ್ಟರ ಸೇವೆಯೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.
ಇಲ್ಲಿ ಪ್ರತಿ ದಿನವೂ ವಿಶೇಷವಾಗಿರುತ್ತದೆ. ಜಾನುವಾರು ಜಾತ್ರೆ ಹಾಗೂ ಮಲ್ಲಿಕಾರ್ಜುನ ರಥೋತ್ಸವ ವಿಶಿಷ್ಟವಾಗಿದ್ದು, ಸಹಸ್ರಾರು ಮಂದಿ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಯ ಅಂಗವಾಗಿ ಶಯನೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಕೈಲಾಸ ವಾಹನೋತ್ಸವ, ಮಂಟಪೋತ್ಸವಗಳು, ಗಿರಿ ಪ್ರದಕ್ಷಿಣೆ, ಪರ್ವತ ಪರಿಷೆ ಕಾರ್ಯಕ್ರಮಗಳು ವಿಶಿಷ್ಟವಾಗಿರುತ್ತವೆ.[ದಕ್ಷಿಣ ಭಾರತದ ಸೋಮಶೈಲ ಮುಡುಕುತೊರೆಯಲ್ಲಿ ಜಾತ್ರೆ ಸಂಭ್ರಮ!]

ಇನ್ನು ರಥೋತ್ಸವ ದಿನದಂದು ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಜತೆಗೆ , ಸಾಂಪ್ರದಾಯಿಕ ವಿಧಿವಿಧಾನದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಗೊರವರ ಕುಣಿತ, ನಂದಿಕಂಬ, ಪೂಜಾಕುಣಿತ, ಕಂಸಾಳೆ, ಸೋಬಾನೆ, ಜಾಗಟೆ ಸೇವೆ, ತುತ್ತೂರಿ, ಕೊಂಬುಸೇವೆ ಮೊದಲಾದ ಜನಪದೀಯ ತಂಡಗಳು ತಮ್ಮ ಕಲೆಯ ಪ್ರದರ್ಶನದ ಮೂಲಕ ರಥೋತ್ಸವಕ್ಕೆ ಮೆರುಗು ನೀಡುತ್ತವೆ.
ಜಾತ್ರೆಯ ಸಂದರ್ಭದಲ್ಲಿ ತೆಪ್ಪೋತ್ಸವವೂ ವಿಜೃಂಭಣೆಯಿಂದ ನಡೆಯತ್ತದೆ. ಬೆಳಗಿನ ಜಾವ ನಡೆಯುವ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ. ತೆಪ್ಪದ ದಿನ ಗೊರವರು ಗಿರಿಯ ಮೇಲೆ ಕುಣಿಯುವುದು ವಿಶೇಷವಾಗಿರುತ್ತದೆ. ಇದೇ ಸಂದರ್ಭ 'ಕಜ್ಜಾಯದ ಮಣೆ ಬಟ್ಟಲು ಉಡಿಸುತೀವಿ' ಎಂದು ಹರಕೆ ಮಾಡಿಕೊಂಡವರು ತಮ್ಮ ಹರಕೆ ಒಪ್ಪಿಸುತ್ತಾರೆ.[ಚುಂಚನಕಟ್ಟೆ ಜಾತ್ರೇಲಿ ದನಗಳ ಗೋಳು, ರೈತರ ಬಾಳು ಕೇಳೋರಿಲ್ಲ!]
ಅದೇ ದಿನ ಪರ್ವತ ಪರಿಷೆಯ ದಿನಾಂಕವನ್ನು ಹಿರಿಯರ ಸಮ್ಮುಖದಲ್ಲಿ ನಿಗದಿಪಡಿಸಲಾಗುತ್ತದೆ. ಪರ್ವತ ಪರಿಷೆ ಎಂಬುದು ಈ ಜಾತ್ರೆಯ ವೈಶಿಷ್ಟ್ಯದಲ್ಲೊಂದಾಗಿದೆ.

ಪುರಾಣ ಕಥೆಯ ಪ್ರಕಾರ ಪಾರ್ವತಿಯು ಶಿವನ ವಾಹನ ಬಸವನ ಮೇಲೆ ತನ್ನ ತವರು ಮನೆಯಾದ ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಳೆಂದೂ ಆ ನಂಬಿಕೆ ಇಂದಿಗೂ ಜನಮನದಲ್ಲಿದೆ. ಈ ಪರಿಷೆ ಯಾವಾಗ ಆರಂಭವಾಯಿತೆಂಬುವುದು ತಿಳಿದು ಬರುವುದಿಲ್ಲವಾದರೂ ಚಿಕ್ಕದೇವರಾಜ ತನಗೆ ಮಲ್ಲಿಕಾರ್ಜುನನ ಕೃಪೆಯಿಂದ ಒಳ್ಳೆಯದಾದ ಹಿನ್ನೆಲೆಯಲ್ಲಿ ಪರಿಷೆ ಮಾಡಿಸಿದ್ದನೆಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಶಿವರಾತ್ರಿ ಸಂದರ್ಭದಲ್ಲಿ ಬಸವನೊಂದಿಗೆ ಭಕ್ತರು ಪರಿಷೆ ಹೊರಡುತ್ತಾರೆ. ಕಾಲ್ನಡಿಗೆಯಲ್ಲಿಯೇ ಮದ್ದೂರು, ಚನ್ನಪಟ್ಟಣ, ಬೆಂಗಳೂರು, ನಂದ್ಯಾಲ ಮೂಲಕ ಶ್ರೀಶೈಲವನ್ನು ಯುಗಾದಿ ಸಂದರ್ಭ ತಲುಪುತ್ತಾರೆ. ಅಲ್ಲಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ವ್ರತ ತೆಗೆಯಲಾಗುತ್ತದೆ.[ಚಾಮರಾಜನಗರ ದೇಗುಲದಲ್ಲಿ ಎಳನೀರು ದೀಪ, ಗಾಳಿ ಬಂದ್ರೂ ಆರೋದಿಲ್ಲ!]
ಮತ್ತೆ ಒಂದು ತಿಂಗಳಿಗೆ ಕಾಲ್ನಡಿಗೆಯಲ್ಲಿಯೇ ಮುಡುಕುತೊರೆಗೆ ಹಿಂತಿರುಗುತ್ತಾರೆ. ಅಲ್ಲದೆ ಪರಿಷೆ ಯಶಸ್ವಿಯಾದುದಕ್ಕೆ ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಇದನ್ನು ಚಿಕ್ಕ ಜಾತ್ರೆ ಎಂದು ಕರೆಯುತ್ತಾರೆ.
ಪ್ರಕೃತಿ ರಮಣೀಯ ತಾಣವಾಗಿಯೂ ಐತಿಹಾಸಿಕ ಕ್ಷೇತ್ರವಾಗಿಯೂ ಗಮನಸೆಳೆದಿರುವ ಮುಡುಕುತೊರೆಗೆ ಇಲ್ಲಿ ನಡೆಯುವ ವೈಶಿಷ್ಟ್ಯಪೂರ್ಣ ಜಾತ್ರೆ ಇನ್ನಷ್ಟು ಮೆರುಗು ನೀಡುತ್ತಾ ಬಂದಿದೆ.












Click it and Unblock the Notifications