ಮೈಸೂರು ಅರಮನೆಯಲ್ಲಿ ಭದ್ರತಾ ಲೋಪ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು, ಜುಲೈ 2 : ನಗರದ ಅರಮನೆಗೆ ಆಗಮಿಸಿದ್ದ ಕೇರಳ ಮೂಲದ ಸ್ವಾಮೀಜಿ ಒಬ್ಬರನ್ನು ತಮಗೆ ಮೀಸಲಾದ ಆಸನದಲ್ಲಿ ಕೂರಿಸುವ ಮೂಲಕ ಅರಮನೆ ಭದ್ರತಾ ವಿಭಾಗದ ಎಸಿಪಿ ಒಬ್ಬರು ವಿವಾದಕ್ಕೀಡಾಗಿದ್ದು, ಎಸಿಪಿ ಅವರ ವರ್ತನೆ ಕುರಿತು ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಅರಮನೆಯ ಭದ್ರತಾ ವಿಭಾಗದ ಶೈಲೇಂದ್ರ ಅವರೇ ಇದೀಗ ವಿವಾದಕ್ಕೀಡಾಗಿರುವ ಎಸಿಪಿ. ಕಳೆದ ವಾರ ಕೇರಳ ಮೂಲದ ಪಾಲಕ್ಕಾಡ್ ನ ಸ್ನೇಹಂ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿರುವ ಸುನಿಲ್ ದಾಸ್ ಎಂಬುವವರು ಅರಮನೆಗೆ ಭೇಟಿ ನೀಡಿದ್ದರು.
ಮೈಸೂರು ಅರಮನೆ ಫೋಟೋಶೂಟ್ ವಿವಾದ : ಏನು, ಎತ್ತ?
ಈ ವೇಳೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿರುವ ಶೈಲೇಂದ್ರ ಅವರು, ತಮ್ಮ ಕಚೇರಿಗೆ ಕರೆದೊಯ್ದಿದ್ದಾರೆ. ನಂತರ ತಾವು ಕೂರುತ್ತಿದ್ದ ಸ್ಥಳದಲ್ಲಿ ವಿಐಪಿ ಆಸನ ಹಾಕಿಸಿ ಸುನಿಲ್ ದಾಸ್ ಅವರಿಗೆ ಕೂರಲು ಅನುವು ಮಾಡಿಕೊಟ್ಟಿದ್ದಾರೆ.
ಇದೇ ವೇಳೆ ಅವರೊಟ್ಟಿಗೆ ಬಂದಿದ್ದವರನ್ನು ಕೂಡ ಕೊಠಡಿಯಲ್ಲಿ ಕೂರಿಸಿದ್ದಾರೆ. ಈ ಘಟನೆಯನ್ನು ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ ಪೇದೆ ಚಿಕ್ಕಣ್ಣ ಎಂಬವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಅದರ ಛಾಯಾಚಿತ್ರವನ್ನು ಹಿರಿಯ ಅಧಿಕಾರಿಗಳು ಹಾಗೂ ಮತ್ತಿತರರಿಗೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಫೋಟೋಗಳು, ಮಾಧ್ಯಮದವರಿಗೂ ತಲುಪಿವೆ.
ಎಸಿಪಿ ಅವರ ಈ ವರ್ತನೆಗೆ ಸಾರ್ವಜನಿಕರು ಹಾಗೂ ಸಂಘ, ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿದೆ. ಎಸಿಪಿ ಅವರು ತಮ್ಮ ಆಸನದಲ್ಲಿ ಖಾಸಗಿ ವ್ಯಕ್ತಿಯನ್ನು ಕೂರಿಸಿದ ಫೋಟೋವನ್ನು ಮಾಧ್ಯಮದವರಿಗೆ ನೀಡಿದಕ್ಕೆ ಹಾಗೂ ಕೆಲ ಆರೋಪಗಳಿಗೆ ಸಂಬಂಧಿಸಿದಂತೆ ಆಯುಕ್ತರು ಪೇದೆ ಚಿಕ್ಕಣ್ಣ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದು, ತನಿಖೆಗೆ ಸೂಚನೆ ನೀಡಿದ್ದಾರೆ.
ಇಂತಹ ಘಟನೆಗಳು ಅರಮನೆಯಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಅನುಮತಿಯಿಲ್ಲದೆ, ಅನಧಿಕೃತವಾಗಿ ಚಿತ್ರೀಕರಣ ಮಾಡಲು ಕಾಣದ ಕೈಗಳು ಅರಮನೆಯನ್ನು ದುರುಪಯೋಗ ಮಾಡಿಕೊಂಡಿದ್ದರು. ಆಗೊಮ್ಮೆ ಅರಮನೆಯ ಭದ್ರತೆಯ ಲೋಪ ಎದ್ದು ಕಂಡಿತ್ತು.
ಇದೀಗ ಈ ಬೆಳವಣಿಗೆಗಳ ವಿರುದ್ಧ ಕನ್ನಡ ಕ್ರಾಂತಿದಳ ಹಾಗೂ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅರಮನೆಯ ಮುಂಭಾಗ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಮಾತನಾಡಿ, 'ಎಸಿಪಿ ಶೈಲೇಂದ್ರ ಅವರಿಂದ ವಿವರಣೆ ಪಡೆಯಲಾಗುವುದು. ಈಗಾಗಲೇ ಹಲವು ಆರೋಪಗಳನ್ನು ಎದುರಿಸುತ್ತಿರುವ ಕಾನ್ಸ್ಟೆಬಲ್ ಚಿಕ್ಕಣ್ಣ ಇದೀಗ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಹಾಗಾಗಿ, ಅಮಾನತುಪಡಿಸಲಾಗಿದೆ. ಭದ್ರತೆ ಉಲ್ಲಂಘನೆ ಎಲ್ಲಿಯೂ ಆಗಿಲ್ಲ' ಎಂದು ತಿಳಿಸಿದ್ದಾರೆ.