ಮಳೆಗೆ ಬಿರುಕುಬಿಟ್ಟ ಕುಕ್ಕರಹಳ್ಳಿ ಕೆರೆ ಏರಿ, ವಾಯುವಿಹಾರಿಗಳಲ್ಲಿ ಆತಂಕ
ಮೈಸೂರು, ಏಪ್ರಿಲ್ 24 : ಮೈಸೂರು ನಗರದ ವಾಯುವಿಹಾರಿಗಳ ನೆಚ್ಚಿನ ತಾಣ ಕುಕ್ಕರಹಳ್ಳಿ ಕೆರೆಯ ಏರಿಯ ಒಂದು ಭಾಗದಲ್ಲಿ ಮಳೆಯಿಂದಾಗಿ ತುಸು ಬಿರುಕು ಬಿಟ್ಟಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಏರಿಕೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆರೆಯಲ್ಲಿ ಬೋಟಿಂಗ್ ಪಾಯಿಂಟ್ ಸಮೀಪದ ಏರಿಯ ಭಾಗದಲ್ಲಿ ಒಂದೆರಡು ಕಡೆ ಸೀಳು ಬಿಟ್ಟಂತಾಗಿದೆ.
ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಕೆರೆಯ ಪ್ರಕೃತಿ ಸೌಂದರ್ಯವನ್ನು ಸವಿಯಲು ತಂಡೋಪ ತಂಡವಾಗಿ ಪ್ರವಾಸಿಗರು ಹಗಲು ಹಾಗೂ ಸಂಜೆ ಆಗಮಿಸಿ ವಿಹರಿಸುತ್ತಾರೆ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಯೋವೃದ್ಧರು, ವಿದ್ಯಾರ್ಥಿಗಳು, ನಾಗರಿಕರು ವ್ಯಾಯಾಮ ವಾಯುವಿಹಾರ ಮಾಡಲು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಸುಮಾರು ಮೊಣಕೈ ಉದ್ದದಷ್ಟು ಸೀಳುಗಳ ಮೇಲೆ ಒತ್ತಡ ಹೆಚ್ಚಾದರೆ ಏರಿಯೇ ಕುಸಿಯಬಹುದು ಎಂಬ ಆತಂಕ ಎದುರಾಗಿದೆ. ಹಾಗಾಗಿ ಕೂಡಲೇ ಕೆರೆ ಏರಿಯ ಮೇಲಿರುವ ಪಾದಚಾರಿ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ .

ಕೆರೆ ಏರಿಯನ್ನು ಕಲ್ಲು ಮಿಶ್ರಿತ ಬಿಳಿ ಮಣ್ಣಿನಿಂದ ನಿರ್ಮಿಸಲಾಗಿದೆ. ಹಳ್ಳಕ್ಕೆ ಕಡ್ಡಿಯನ್ನು ಹಾಕಿ ಅಳತೆ ಮಾಡಿದಾಗ ಮೊಣಕೈಗಿಂತ ಹೆಚ್ಚಿನ ಹಳ್ಳವಿದ್ದು ಈ ಸ್ಥಳದಲ್ಲಿ ಇಳಿಜಾರು ಅಥವಾ ನೀರು ನಿಂತುಕೊಳ್ಳುವ ಮಾದರಿಯಲ್ಲಿ ಬಿರುಕು ಕಾಣಿಸಿಕೊಂಡಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಕ್ಕೆಡೆ ಬೇಡ ಎಂಬ ಮಾತು ಕೇಳಿ ಬರುತ್ತಿದೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ :
ಮೈಸೂರಿನಲ್ಲಿ ಕಳೆದೆರಡು ದಿನಗಳಿಂದ ಸುರಿದ ಹದವಾದ ಮಳೆಯಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಮಳೆ ಇಲ್ಲದೇ ಬರಿದಾಗುತ್ತಿದ್ದ ಕೊಳವೆಬಾವಿಗಳಿಂದ ತೋಟಗಾರಿಕಾ ಬೆಳೆಗಾರರು ಕಂಗಾಲಾಗಿದ್ದರು. ಮಳೆ ಕಾಣದ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಸಲಾಗದೆ ರೈತರು ಪರಿತಪಿಸುತ್ತಿದ್ದರು. ಇವರಿಗೆಲ್ಲ ಸುರಿದ ಮಳೆ ತಂಪು ನೀಡಿದೆ.












Click it and Unblock the Notifications