ಸರಕಾರ ನಡೆಸಕ್ಕಾಗಲ್ಲ ಅಂದ್ರೆ ಬಿಟ್ಹೋಗಿ: ಸಿದ್ದರಾಮಯ್ಯ
ಮೈಸೂರು, ಜುಲೈ 29: ರಾಜ್ಯದಲ್ಲಿ ಸರಕಾರ ಸತ್ತು ಹೋಗಿದೆ, ಮಾತೆತ್ತಿದರೆ ಹಿಂದಿನ ಸರಕಾರದ ಹೆಸರೇಳಿ ಸಮರ್ಥನೆ ನೀಡುತ್ತಿದ್ದಾರೆ, ಬೊಮ್ಮಾಯಿಯವರು ಕಾಂಗ್ರೆಸ್ ಕಾಲದಲ್ಲಿ ಕೊಲೆಗಳಾಗಿಲ್ವಾ ಅಂತಾರೆ? ಇದು ಸರಕಾರ ನೀಡುವ ಸಮರ್ಥನೆಯೇ? ಸರಕಾರ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೊಮ್ಮಾಯಿಯವರಿಗೆ ಸರಕಾರ ನಡೆಸಲು ಆಗುತ್ತಿಲ್ಲ, ಹತಾಷರಾಗಿದ್ದಾರೆ, ಸರಕಾರ ನಡೆಸಕ್ಕಾಗೋದಿಲ್ಲ ಅಂದ್ರೆ ಬಿಟ್ಬಿಟ್ ಹೋಗ್ರಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ ಅಂದ್ರೆ, ವಿರೋಧ ಪಕ್ಷದವರ ಮಾತನ್ನು ಕೇಳೋ ಸೌಜನ್ಯ ಇಲ್ಲ ಅಂದರೆ, ಯೂ ಶುಡ್ ರಿಜೈನ್ ಅಂಡ್ ಗೆಟೌಟ್ ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.
ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದರು, ರಾಜ್ಯದಲ್ಲಿ ಸರಕಾರವೇ ಇಲ್ಲ, ಸರಕಾರ ಸತ್ತು ಹೋಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರವೀಣ್ ಕೊಲೆಯಾಯ್ತು, ಮುಖ್ಯಮಂತ್ರಿ ಅಲ್ಲರುವಾಗಲೇ ಮತ್ತೊಂದು ಕೊಲೆಯಾಗಿದೆ. ಇದೆಲ್ಲಾ ಇಂಟಲಿಜನ್ಸ್ ವೈಫಲ್ಯವಲ್ಲವೇ? ಇದು ಸರ್ಕಾರ, ಸಿಎಂ, ಗೃಹ ಸಚಿವರ ವೈಫಲ್ಯ ಅಲ್ವಾ? ಜನ ಭಯದಿಂದ ಬದುಕುತ್ತಿದ್ದಾರೆ, ಮನೆಯಿಂದ ಆಚೆ ಬರಲೂ ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಹಿಂದಿನ ಸರಕಾರ ಎಂದು ದೂರುತ್ತಿದ್ದಾರೆ. ಕೊಲೆಯಾಗಿರುವುದು ಮೂರು ದಿನದ ಹಿಂದೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯ್ತು, ಹಾನಗಲ್ನಲ್ಲಿ, ಧರ್ಮಸ್ಥಳದಲ್ಲಿ , ಈಗ ದಕ್ಷಿಣ ಕನ್ನಡದಲ್ಲಿ ಎರಡು ಕೊಲೆಗಳಾಗಿವೆ. ರಾಜ್ಯದಲ್ಲಿ ಸರಕಾರ ಬದುಕಿದಿಯಾ ಅಥವಾ ಸತ್ತಿದಿಯಾ? ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಸೂದ್, ಫಾಜಿಲ್ ಮನೆಗೇಕೆ ಹೋಗಿಲ್ಲ
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದ ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ. ಆದರೆ ಮಸೂದ್ ಮತ್ತು ಫಾಜಿಲ್ ಅವರ ಮನೆಗಳಿಗೆ ಹೋಗಿಲ್ಲ. ಕೊಲೆಯಾದ ಮುಸ್ಲಿಂ ಯುವಕರ ಮನೆಗಳಿಗೆ ಭೇಟಿ ನೀಡಲಿಲ್ಲ. ಬಾದಾಮಿಯಲ್ಲಿಯೂ ಗಲಾಟೆ ನಡೆದಾಗ ಕೆಲವು ಸಚಿವರು ಇದೇ ರೀತಿ ಮಾಡಿದರು. ಗಾಯವಾದ ತಮ್ಮ ಪಕ್ಷದ ಕಾರ್ಯಕರ್ತರನ್ನು ನೋಡಲು ಹೋಗುತ್ತಾರೆ. ಮುಸ್ಲಿಮರನ್ನು ನೋಡಲು ಹೋಗುವುದಿಲ್ಲ. ಇಂತಹವರು ಸರಕಾರ ನಡೆಸಲು ಯೋಗ್ಯರಾ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನೀಡುತ್ತಿರುವು ಒಂದು ಸಮರ್ಥನೆಯೇ ?
ನಾವು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ, ಸಿದ್ದರಾಮಯ್ಯ ಕಾಲದಲ್ಲೂ ನಡೆದಿಲ್ವಾ ಅಂತಾರೆ, ಕೊಲೆಗಳಾಗುತ್ತಿದ್ದಾವೆ ಅಂದ್ರೆ, ಸಿದ್ದರಾಮಯ್ಯನ ಕಾಲದಲ್ಲಿ ಆಗಿಲ್ವಾ ಅಂತಾರೆ, ಆಗ ಕೊಲೆ ಆಯ್ತು ಈಗಲೂ ಕೊಲೆಯಾಗಿದೆ ಎನ್ನುವುದು ಇವರ ಸಮರ್ಥನೆ ಆಗಬಹುದೇ? ಚುನಾವಣೆ ವೇಳೆ ಇವರು ಸಿದ್ದರಾಮಯ್ಯನವರ ಸರಕಾರಕ್ಕಿಂತ ಒಳ್ಳೆಯ ಸರಕಾರ ನೀಡುತ್ತೇನೆ ಅಂದಿದ್ರಾ ಅಥವಾ ಸಿದ್ದರಾಮಯ್ಯನವರಂತಹ ಸರಕಾರವನ್ನೇ ಕೊಡುತ್ತೀವಿ ಎಂದು ಜನರಿಗೆ ಹೇಳಿದ್ರಾ ಎಂದು ವ್ಯಂಗ್ಯವಾಡಿದರು.

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿ
ಕಾಂಗ್ರೆಸ್ ಪಕ್ಷವಿದ್ದಿದ್ರೆ ಕಲ್ಲು ಹೊಡೆಯಬಹುದಿತ್ತು ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಒಬ್ಬ ಸಂಸದನಾಗಿ ತೇಜಸ್ವಿ ಸೂರ್ಯ ಬೇಜಾವಬ್ದಾರಿ ಹೇಳಿಕೆ ನೀಡಿದ್ದಾರೆ. ನಾವಿದ್ದರೆ ಕಲ್ಲಲ್ಲಿ ಹೊಡೆಯುತ್ತಿದ್ದರಂತೆ, ಹಾಗಾದರೆ ಇವರ ಸರಕಾರಕ್ಕೆ ಯಾವುದರಲ್ಲಿ ಹೊಡೆಯಬೇಕು. ಕೊಳೆತ ಮೊಟ್ಟೆಯಲ್ಲಾ ಅಥವಾ ಬೇರೆ ಯಾವುದರಲ್ಲಿ ಹೊಡೆಯಬೇಕು ಎಂದರು.
ರಾಜ್ಯದಲ್ಲಿ ಬುಲ್ಡೋಜರ್ ಉತ್ತರ ಪ್ರದೇಶ ಅಥವಾ ಬಿಹಾರ ಮಾದರಿಯಲ್ಲಿ ಬುಲ್ಡೋಜರ್ ಬಳಕೆಯಾಗಬೇಕು ಎಂಬ ಪ್ರತಿಕ್ರಿಯಿಸಿ, ಹಾಗಾದ್ರೆ ಕರ್ನಾಟಕ, ಬಿಹಾರ ಅಥವಾ ಉತ್ತರ ಪ್ರದೇಶದ ಸ್ಥಿತಿ ತಲುಪಿದೆ ಎಂದು ಒಪ್ಪಿಕೊಂಡಂತೆ ಆಗಿದೆ ಎಂದರು.

ಸಾಕ್ಷಿಯಿದ್ದರೆ ಎಸ್ಡಿಪಿಐ ಬ್ಯಾನ್ ಮಾಡಿ
ಈ ಹಿಂದಿನ ಕೋಮು ಗಲಭೆಯಾದ ಸಂದರ್ಭದಲ್ಲಿ ಪಕ್ರರಣಗಳನ್ನು ಸಿದ್ದರಾಮಯ್ಯನವರು ವಾಪಸ್ ತೆಗೆದುಕೊಂಡಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅದಕ್ಕೂ ಇದಕ್ಕೂ ಸಂಬಂಧ ಏನು?. ನಮ್ಮ ಸರಕಾರದ ಅವಧಿಯಲ್ಲಿ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಗಲಭೆಯಾಗಿತ್ತು ಆ ಗಲಭೆಯಲ್ಲಿ ಎಲ್ಲಾ ಪಕ್ಷದವರು ವಿದ್ಯಾರ್ಥಿಗಳು ಇದ್ದಾರೆ. ಕೇಸ್ ವಾಪಸ್ ಪಡಿಯಿರಿ ಎಂದು ಹೇಳಿದರು ಅದಕ್ಕೆ ವಾಪಸ್ ಪಡೆದೆವು. ಬಿಜೆಪಿಯವರಿಗೆ ಎಸ್ಡಿಪಿಐ, ಪಿಎಫ್ಐ , ಎಸ್ಎಫ್ಐ ಮೇಲೆ ಕೋಪ ಇದ್ರೆ, ನಿಮ್ಮ ಬಳಿ ಸಾಕ್ಷಿ ಇದ್ದರೆ ನಿಷೇಧಿಸಿ, ಆದರೆ ಬೇರೆ ಪಕ್ಷಗಳ ಮೇಲೆ ಗೂಬೆ ಕೂಡಿಸಬೇಡಿ ಎಂದು ತಿಳಿಸಿದರು.












Click it and Unblock the Notifications