ನಾನೀಗ ಸರ್ಕಾರದಲ್ಲಿಲ್ಲ, ನಿಮ್ಮ ಕಾರಿನಲ್ಲಿ ಬರಲ್ಲ ಎಂದು ಹೇಳಿ ಶಿಸ್ತು ಪಾಲಿಸಿದ ಸಿದ್ದರಾಮಯ್ಯ
ಮೈಸೂರು, ನವೆಂಬರ್. 24:ಹಲವು ಕಾರ್ಯಕ್ರಮಗಳಿಗೆ ಭಾಗವಹಿಸಲು ತವರು ಜಿಲ್ಲೆ ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಿಸ್ತು ಪ್ರದರ್ಶಿಸಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸ್ವಾಗತಕ್ಕೆಂದು ನೂತನ ಮೈಸೂರು ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಆಗಮಿಸಿದ್ದರು.
ಇದೇ ವೇಳೆ, "ತಮ್ಮ ಕಾರಿನಲ್ಲಿ ಬನ್ನಿ" ಎಂದು ಪುಷ್ಪಲತಾ ಅವರು ಕರೆದಾಗ "ನಾನು ಈಗ ಸರ್ಕಾರದಲ್ಲಿ ಇಲ್ಲ. ಅದು ಮೇಯರ್ ಕಾರು. ಹೀಗಾಗಿ ನಿಮ್ಮ ಕಾರಿನಲ್ಲಿ ನೀವೇ ಬನ್ನಿ" ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಶಿಸ್ತು ಪ್ರದರ್ಶಿಸಿದ್ದಾರೆ.
ನಾನೂ ಈಗ ಆಡಳಿತಾರೂಢ ಸರಕಾರದಲ್ಲಿ ಇಲ್ಲ, ಹೀಗಾಗಿ ಮೇಯರ್ ಕಾರಿನಲ್ಲಿ ಬರಲ್ಲ ಎಂದು ತಮ್ಮ ಕಾರಿನಲ್ಲೇ ಹೊರಟಿದ್ದು ವಿಶೇಷವಾಗಿತ್ತು.

ಇದೇ ವೇಳೆ ಕೆಆರ್ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಯೋಜನೆ ಈಗಿನದಲ್ಲ. ನಮ್ಮ ಸರ್ಕಾರ ಇದ್ದಾಗಲ್ಲೂ ಚರ್ಚೆ ಆಗಿತ್ತು. ತಾಂತ್ರಿಕ ತಜ್ಞರ ಜೊತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಲಿ. ಈ ಮೂಲಕ ಯೋಜನೆ ವಿರೋಧ ವ್ಯಕ್ತಪಡಿಸಿದವರ ಆತಂಕ ನಿವಾರಣೆ ಮಾಡಲಿ ಎಂದು ಸಲಹೆ ನೀಡಿದರು. ಹಾಗೆಯೇ ನಾನೇನು ತಾಂತ್ರಿಕ ತಜ್ಞನಲ್ಲ. ಆದರೆ ಎಲ್ಲರ ಅಭಿಪ್ರಾಯ ಪಡೆಯಲಿ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಚಿವ ಸಂಪುಟ ಶೀಘ್ರವೇ ವಿಸ್ತರಣೆ ಆಗಲಿದೆ. ರಾಹುಲ್ ಗಾಂಧಿಯವರು ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸಮಯ ನೋಡಿಕೊಂಡು ಸಂಪುಟ ವಿಸ್ತರಣೆ ಕುರಿತು ಮಾತುಕತೆಗೆ ದೆಹಲಿಗೆ ತೆರಳುವೆ. ಖಾಲಿ ಇರುವ ಆರು ಸಚಿವ ಸ್ಥಾನಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.












Click it and Unblock the Notifications