ಸಿಂಗಾಪುರಕ್ಕೆ ಹೋಗುತ್ತಿರುವ ಹಿಂದಿನ ಉದ್ದೇಶ ತಿಳಿಸಿದ ಸಿದ್ದರಾಮಯ್ಯ
ಮೈಸೂರು, ಡಿಸೆಂಬರ್ 8: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಕುರಿತು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಶಾಸಕರು ಬೆಳಗಾವಿಗೆ, ಸಿದ್ದರಾಮಯ್ಯ ಮಲೇಷ್ಯಾಕ್ಕೆ, ಏನಿದರ ಒಳಮರ್ಮ?
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಆರ್ಥಿಕ ಸಮತೋಲನ ಕಾಪಾಡಿಕೊಂಡು ಬಂದಿದ್ದೇವೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಆರ್ಥಿಕ ಸಮತೋಲನ ಇರಲಿಲ್ಲ. ಇದೆಲ್ಲಾ ಗೊತ್ತಿದ್ದರೂ ಬಿಜೆಪಿ ನಾಯಕರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ.
ಸಂಪುಟ ವಿಸ್ತರಣೆ: ಸಿದ್ದರಾಮಯ್ಯ-ಪರಮೇಶ್ವರ್ ನಡುವೆ ಮಹತ್ವದ ಮಾತುಕತೆ
ಇದಕ್ಕೆಲ್ಲಾ ಸಾಕ್ಷಿ ಇಲ್ಲಿದೆ. ನೀವೇ ನೋಡಿ ಎಂದು ಮಾಧ್ಯಮದವರಿಗೆ ಸಾಕ್ಷಿ ತೋರಿಸಿದರು. ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇದೆ. ವಿಜೋರಾಂನಲ್ಲಿ ಅತಂತ್ರ ಫಲಿತಾಂಶ ಬರುವ ನಿರೀಕ್ಷೆ ಇದೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.
ಇದಕ್ಕೆ ಸಾಕ್ಷಿ ನಮ್ಮ ರಾಜ್ಯದಲ್ಲಿ ನಡೆದ ಉಪಚುನಾವಣೆಗಳೇ ಸಾಕು ಎಂದು ಬಿಜೆಪಿಗೆ ಟಾಂಗ್ ನೀಡಿದರು.ಮೈತ್ರಿ ಸರ್ಕಾರ ಬಂದಾಗಿನಿಂದಲೂ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ.
ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿಯಾಗುವ ಬಯಕೆ ಇಟ್ಟುಕೊಂಡಿದ್ದಾರೆ. ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ನಮ್ಮ ಮೈತ್ರಿ ಸರ್ಕಾರದ ಸುಭದ್ರವಾಗಿದೆ ಎಂದರು.
ಸಿದ್ದರಾಮಯ್ಯ ನಿವಾಸಕ್ಕೆ ಅತೃಪ್ತ ಶಾಸಕರು, ಮಹತ್ವದ ಚರ್ಚೆ
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲೇ ಸಿಂಗಾಪುರಕ್ಕೆ ಹೋಗುವ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನಮಗೂ ವೈಯುಕ್ತಿಕ ಜೀವನ ಇದೆ. ನಾವು ಎಲ್ಲಿಗೂ ಹೋಗೋದು ಬೇಡ್ವೇ? ಅಂತ ಪ್ರಶ್ನೆ ಮಾಡಿದರು.
ಸ್ನೇಹಿತರೊಬ್ಬರ ಮನೆಯಲ್ಲಿ ಮದುವೆ ಸಮಾರಂಭವಿದೆ. ಈ ಕಾರಣಕ್ಕೆ ನಾನು ಸಿಂಗಾಪುರಕ್ಕೆ ಹೋಗುತ್ತಿದ್ದೇನೆ.ಇನ್ನು ವಿದೇಶಕ್ಕೆ ಹೋಗೋದು ಅಫೆನ್ಸ್ ಏನ್ರಿ.? ನನಗೂ ವೈಯಕ್ತಿಕ ಬದುಕು ಇದೆ ಅಲ್ವಾ..? ಎಲ್ಲವನ್ನೂ ನಿಮ್ಮ ಮುಂದೆ ಹೇಳಿ ಹೋಗಬೇಕಾ.? ಅಂತ ಸಿಟ್ಟಾಗಿ ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.