ಎಂ.ಆರ್.ಸಿ. ಕಣ್ಣಿನ ಆಸ್ಪತ್ರೆಯಲ್ಲಿ ಪ್ರಜ್ವಲ್ ಯೋಜನೆಗೆ ಚಾಲನೆ
ಮೈಸೂರು, ಆಗಸ್ಟ್ 13: ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಕಣ್ಣಿನ ಆಸ್ಪತ್ರೆಯ 3ನೇ ಹಂತದ ಪ್ರಜ್ವಲ್ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂ.ಆರ್.ಸಿ. ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಉದ್ಘಾಟಿಸಿದರು.
ಉದ್ಘಾಟನೆಯ ನಂತರ ಮಾತನಾಡಿ ಮನುಷ್ಯನಿಗೆ ಕಣ್ಣಿನ ದೃಷ್ಠಿ ಅತ್ಯಮೂಲ್ಯ ಅನೇಕ ಕಾರಣ ಹಾಗೂ ರೋಗಗಳಿಂದ ಕಣ್ಣಿನ ದೃಷ್ಠಿ ಊನವಾಗುತ್ತದೆ. ಕಣ್ಣಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಕಣ್ಣಿನ ತೊಂದರೆವುಂಟಾದ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು.
ಸಕ್ಕರೆ ಕಾಯಿಲೆ ಇರುವವರಲ್ಲಿ ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಹೆಚ್ಚಿರುತ್ತದೆ. ಅವರು ಕಣ್ಣಿನ ದೃಷ್ಠಿಯ ಬಗ್ಗೆ ಆಗಾಗ ವೈದ್ಯರಲ್ಲಿ ತಪಾಸಣೆ ಒಳಗಾಗಿ ಸಲಹೆ ಪಡೆಯಬೇಕು ಎಂದರು.
ಹೆಚ್ಚಾಗಿ ಬಡವರು ಹಾಗೂ ಮಾಧ್ಯಮ ವರ್ಗದ ಜನ ಸಾಮಾನ್ಯರು ಕುದುರೆ ರೇಸ್ಗಳಿಗೆ ಹಣ ಕಟ್ಟಿ ಭಾಗವಹಿಸುತ್ತಾರೆ. ಕುದುರೆ ರೇಸನ್ನು ಕ್ರೀಡಾ ಹಾಗೂ ಹವ್ಯಾಸದ ರೂಪದಲ್ಲಿ ಸ್ವೀಕರಿಸಬೇಕು. ಅದನ್ನು ಬಿಟ್ಟು ಜೂಜಿನ ರೀತಿಯಲ್ಲಿ ಸ್ವೀಕರಿಸಿದರೆ ಆರ್ಥಿಕ ಸ್ಥಿತಿಯಲ್ಲಿ ತೊಂದರೆಯಾಗುತ್ತದೆ ಎಂದು ಸಲಹೆ ನೀಡಿದರು.

ಎಂ.ಆರ್.ಸಿ. ಕಣ್ಣಿನ ಆಸ್ಪತ್ರೆ 70,000 ಜನರಿಗೆ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಿ ದುರ್ಬಲ ವರ್ಗದ ಜನರಿಗೆ ಸಹಾಯ ಮಾಡಿದೆ. ಈ ಕೆಲಸಕ್ಕಾಗಿ ಎಂ.ಆರ್.ಸಿ. ಕಣ್ಣಿನ ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿಯವರನ್ನು ಅಭಿನಂದಿಸಿದರು.
ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಕಣ್ಣಿನ ಆಸ್ಪತ್ರೆಯನ್ನು ಸೂಪರ್ ಸ್ಪೆಷಲಿಟಿ ಆಸ್ಪತ್ರೆಯನ್ನಾಗಿ ಮಾಡಲು ಆಡಳಿತ ಮಂಡಳಿಯವರು ಯೋಜಿಸುತ್ತಿದ್ದು, ಸರ್ಕಾರದಿಂದ 50 ಲಕ್ಷ ರೂ. ನೀಡಲು ಚಿಂತಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ರೇಸ್ ಕ್ಲಬ್ ನವರು 10 ಲಕ್ಷ ರೂ. ಚಕ್ನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಸಹಕಾರ ಸಚಿವ ಮಹದೇವಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ, ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ಉಪಮಹಾಪೌರರಾದ ಮಹದೇವಮ್ಮ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications