ಎರಡನೇ ಬಾರಿಗೆ ಸಿದ್ದರಾಮಯ್ಯ ಸಿಎಂ: ಸೌದಿ ಅರೇಬಿಯಾದಿಂದ ಬಂದು ಹರಕೆ ತೀರಿಸಿದ ಅಭಿಮಾನಿ
ಮೈಸೂರು, ಜುಲೈ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳ ಬಳಗ ಎಂತಹದ್ದು ಎನ್ನುವುದನ್ನು ಈ ಹಿಂದೆ ನಡೆದ ಸಿದ್ದರಾಮೋತ್ಸವದಲ್ಲಿ ಸಾಬೀತಾಗಿದೆ. ರಾಜ್ಯ, ದೇಶವಲ್ಲದೇ ಅನಿವಾಸಿ ಭಾರತೀಯರು ಕೂಡ ಸಿದ್ದರಾಮಯ್ಯ ಅವರ ಅಭಿಮಾನಿಗಳಾಗಿದ್ದಾರೆ.
ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂದು ಅವರ ಅನೇಕ ಅಭಿಮಾನಿಗಳು ಹರಕೆ ಹೊತ್ತು ದೇವರಲ್ಲಿ ವಿವಿಧ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಅವರ ಅಭಿಮಾನಿಗಳ ಹಾರೈಕೆಯಂತೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿ ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಇದೀಗ ಅವರ ಅಭಿಮಾನಿಗಳು ಒಬ್ಬೊಬ್ಬರಾಗಿ ಹರಕೆ ತೀರಿಸುತ್ತಿದ್ದಾರೆ.

ಎರಡನೇ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರೊಬ್ಬರು ಸೌದಿ ಅರೇಬಿಯಾದಿಂದ ಬಂದು ಸಿದ್ದರಾಮನ ಹುಂಡಿ ಗ್ರಾಮದ ಸಿದ್ದರಾಮೇಶ್ವರ ದೇವರಿಗೆ ನಾಗಾಭರಣ ಹರಕೆ ತೀರಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ಮೇಲಿನ ತಮ್ಮ ಅಭಿಮಾನವನ್ನು ತೋರ್ಪಡಿಸಿದ್ದಾರೆ.
ಮೂಲತಃ ಸಿದ್ದರಾಮನಹುಂಡಿ ಪಕ್ಕದಲ್ಲಿಯೇ ಇರುವ ದೇವೇಗೌಡನಹುಂಡಿ ನಿವಾಸಿಯಾಗಿರುವ ರವಿ ಮಹಾದೇವ ಅವರು ಸೌದಿ ಅರೇಬಿಯಾದಲ್ಲಿ 15 ವರ್ಷದಿಂದ ತೈಲ ಕಂಪನಿಯೊಂದರಲ್ಲಿ ರಿಗ್ ಮೆಡಿಕ್ (ವೈದ್ಯ ಸಿಬ್ಬಂದಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿದ್ದರೂ ಕೂಡ ರವಿ ಮಹಾದೇವ ಅವರು ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯ ಮೇಲೆ ಅಪಾರವಾದ ಗೌರವ ಹೊಂದಿದ್ದಾರೆ.
ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಮತ್ತೆಸ ರಾಜ್ಯದ ಮುಖ್ಯಮಂತ್ರಿಯಾದರೆ ತಮ್ಮ ಮನೆ ದೇವರಾದ ಸಿದ್ದರಾಮನ ಹುಂಡಿ ಗ್ರಾಮದ ಸಿದ್ದರಾಮೇಶ್ವರ ದೇವರಿಗೆ ನಾಗಾಭರಣ ತೊಡಿಸುವುದಾಗಿ ಹರಕೆ ಹೊತ್ತಕೊಂಡಿದ್ದರು. ಅದರಂತೆ ಸಿದ್ದರಾಮನಹುಂಡಿಗೆ ತೆರಳಿ ದೇವರಿಗೆ ವಿಶೇಷ ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಿನ್ನಲೇಪಿತ ಬೆಳ್ಳಿಯ ನಾಗಾಭರಣವನ್ನು ತೊಡಿಸಿದರು.
ಈ ಬಗ್ಗೆ ಮಾತನಾಡಿರುವ ರವಿ ಮಹಾದೇವ ' ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹರಕೆ ಮಾಡಿಕೊಂಡಿದ್ದೆ. ಅದರಂತೆ ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ನಮ್ಮ ಹರಕೆ ತೀರಿಸಿದ್ದೇವೆ' ಎಂದು ತಿಳಿಸಿದರು.












Click it and Unblock the Notifications