ಕೇಳಿದವರಿಗೆಲ್ಲ ಟಿಕೆಟ್ ನೀಡಕ್ಕೆ ಕಾಂಗ್ರೆಸ್ ಪಕ್ಷ ಛತ್ರವಲ್ಲ: ಸಿದ್ದು ಗರಂ
ಮೈಸೂರು, ಅಕ್ಟೋಬರ್ 4 : "ಕೇಳಿದವರಿಗೆ ಪಕ್ಷದ ಟಿಕೆಟ್ ಹಂಚೋಕೆ ಆಗುತ್ತಾ? ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಟಿಕೆಟ್ ಕೇಳ್ತಾರೆ. ಹಾಗಂತ ಕೇಳಿದವರಿಗೆಲ್ಲ ಟಿಕೆಟ್ ನೀಡೋದಕ್ಕೆ ನಮ್ಮ ಪಕ್ಷ ಛತ್ರವಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನ ತಮ್ಮ ನಿವಾಸದ ಎದುರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಹುಣಸೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ತಮಗೇ ನೀಡಬೇಕು ಎಂದು ವಕೀಲರೊಬ್ಬರು ಪ್ರತಿಭಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದರು.
"ಕುರುಬರಿಗೆ ಮಾತ್ರ ಟಿಕೆಟ್ ಕೊಡುವುದಕ್ಕೆ ಕುರುಬ ಸಮಾಜದವರು ಮಾತ್ರ ಮತ ಹಾಕ್ತಾರಾ? ಎಲ್ಲಾ ವರ್ಗದವರು ಮತ ಹಾಕ್ತಾರೆ. ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಟಿಕೆಟ್ ನೀಡುತ್ತೇವೆ. ಯಾರಿಗೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್ ತೀರ್ಮಾನ ಮಾಡಲಿದೆ" ಎಂದು ಕೂಡ ಹೇಳಿದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರುವ ಸುದ್ದಿಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಊಹಾಪೋಹಗಳಿಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದರು. ಇನ್ನು ವರುಣಾ ಕ್ಷೇತ್ರದಲ್ಲಿ ಯತೀಂದ್ರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ಅದನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.
ಕೆಎಫ್ ಡಿಯೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಯು.ಟಿ.ಖಾದರ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಫುಲ್ ಗರಂ ಆದ ಸಿದ್ದರಾಮಯ್ಯ, "ಅವರ ಹತ್ತಿರವೇ ಕೇಳಿಕೊಳ್ಳಿ" ಎಂದು ಸಿಟ್ಟಿನಿಂದ ಉತ್ತರಿಸಿದರು.

ನನ್ನ ನೇತೃತ್ವದಲ್ಲೇ ಚುನಾವಣೆ
ಸಾಮಾನ್ಯವಾಗಿ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಆದರೆ ಈ ಬಾರಿ ನನ್ನ ನೇತೃತ್ವದಲ್ಲೇ ಚುನಾವಣೆ ನಡೆಯುತ್ತದೆ. ಹೈ ಕಮಾಂಡ್ ನನ್ನ ಬಗ್ಗೆ ಒಲವು ಇಟ್ಟುಕೊಂಡಿದೆ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಪರಮೇಶ್ವರ್ ಅವರಿಗೆ ಟಾಂಗ್ ನೀಡಿದರು.

ಎಲ್ಲ ಅಧಿಕಾರ ಅನುಭವಿಸಿದ ವಿಶ್ವನಾಥ್
ಕಾಂಗ್ರೆಸ್ ಪಕ್ಷದಲ್ಲಿದ್ದು, ಎಲ್ಲ ಅಧಿಕಾರ ಅನುಭವಿಸಿದ ಎಚ್.ವಿಶ್ವನಾಥ್ ಈಗ ಟಿಕೆಟ್ ಗಾಗಿ ಜೆಡಿಎಸ್ ಸೇರಿಕೊಂಡಿದ್ದಾರೆ. ನನ್ನ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ. ಅವರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಕುರುಬರೆಲ್ಲರೂ ಕಾಂಗ್ರೆಸ್ ನಿಂದ ಸ್ಪರ್ಧಿಸಲಿರುವ ಮಂಜುನಾಥ್ ಗೆ ಓಟು ಹಾಕಿ ಎಂದು ಹುಣಸೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಅವರು ಹೇಳಿದರು.

ತಂತ್ರ ರೂಪಿಸುತ್ತಿರುವ ಸಿದ್ದರಾಮಯ್ಯ
ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ಸೋಲಿಸಲು ನಂಜನಗೂಡು ಉಪಚುನಾವಣೆಯಲ್ಲಿ ಹೆಣೆದಂತೆಯೇ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಎಚ್.ವಿಶ್ವನಾಥ್ ವಿರುದ್ಧ ಕೂಡ ಸಿದ್ದರಾಮಯ್ಯ ಅವರು ಎಲ್ಲ ತಂತ್ರ ರೂಪಿಸುತ್ತಿದ್ದಾರೆ.

ಗುಪ್ತ್ ಚುನಾವಣೆ ತಂತ್ರ
ಸಿದ್ದರಾಮಯ್ಯ ಮೈಸೂರು ಹೊರವಲಯದ ಟಿ. ಕಾಟೂರು ಗ್ರಾಮದ ಬಳಿಯಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಸ್ಥಳೀಯ ಮುಖಂಡರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ್ದಾರೆ.
ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಮನೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಸೇರುವುದರಿಂದ ಅಲ್ಲಿ ಸಭೆ ನಡೆಸುವುದು ಸೂಕ್ತವಲ್ಲ ಎಂಬ ಕಾರಣದಿಂದ ಟಿ. ಕಾಟೂರಿನ ಬಳಿಯಿರುವ ಫಾರ್ಮ್ ಹೌಸ್ ನಲ್ಲಿ ಸಭೆ ನಡೆಸಿದ್ದಾರೆ.












Click it and Unblock the Notifications