ಮುಕ್ತ ವಿವಿ ಅಕ್ರಮಕ್ಕೆ ಸಿದ್ದು, ರಂಗಪ್ಪ ಹೊಣೆ, ಗೋ ಮಧುಸೂದನ್ ಗುಟುರು
ಮೈಸೂರು, ನವೆಂಬರ್ 6 : ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ನೇರ ಭಾಗಿಯಾಗಿದ್ದು, ಇಂದಿನ ಪರಿಸ್ಥಿತಿಗೆ ಅವರೇ ಹೊಣೆಗಾರರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ ಆರೋಪಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಇಂತಹ ಬೃಹತ್ ಹಗರಣ ನಡೆದಿದ್ದು, ಇದುವರೆಗೂ ಸಿದ್ದರಾಮಯ್ಯ ಎಲ್ಲೂ ತುಟಿ ಬಿಚ್ಚಿಲ್ಲ. ದೊಡ್ಡಗೌಡ್ರ ಸಂಬಂಧಿ ಎನ್ನುವ ಕಾರಣದಿಂದ ಪ್ರೊ.ರಂಗಪ್ಪ ಅವರನ್ನು ಪರೋಕ್ಷವಾಗಿ ರಕ್ಷಿಸಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರೊ.ರಂಗಪ್ಪ ಜತೆ ವೇದಿಕೆ ಹಂಚಿಕೊಳ್ಳುವುದಷ್ಟೇ ಅಲ್ಲದೇ ಅವರನ್ನು ರಾಜಕಾರಣಕ್ಕೆ ಆಮಂತ್ರಿಸಿರುವುದು ನಾಚಿಕೆಗೇಡು. ಈ ಹಗರಣವು ರಾಜ್ಯಕ್ಕಷ್ಟೇ ಸಿಮೀತವಾಗದೆ ಶ್ರೀಲಂಕಾ, ನೇಪಾಳ, ಬಾಂಗ್ಲಾ, ದುಬೈ, ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿಯೂ ವ್ಯಾಪಿಸಿದೆ. ಕೆಲವೇ ದುಷ್ಟಕೂಟಗಳ ಅಕ್ರಮದಿಂದಾಗಿ ರಾಜ್ಯದ ಮಾನ ವಿದೇಶಗಳಲ್ಲಿಯೂ ಹರಾಜಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿವಿಯಲ್ಲಿ ನಡೆದಿರುವ ಕೋಟ್ಯಂತರ ರುಪಾಯಿಯ ಹಗರಣದ ಕೂಲಂಕಷ ತನಿಖೆಗಾಗಿ ಸಿಬಿಐಗೆ ವಹಿಸುವಂತೆ ಕೇಂದ್ರ ಉನ್ನತ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ ಎಂದರು.

ವಿದ್ಯಾರ್ಥಿಗಳ ಹಣ ಹಿಂತಿರುಗಿಸಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾನ್ಯತೆ ರದ್ದಾದ ಎಲ್ಲಾ ಕೋರ್ಸ್ ಗಳ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಿ, ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ತಪ್ಪಿತಸ್ಥರನ್ನು ಜೈಲಿಗಟ್ಟಬೇಕು ಎಂದು ಒತ್ತಾಯಿಸಿದ ಅವರು, ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ರಂಗಪ್ಪ ಅವರಿಗೆ ನಾಚಿಕೆ ಆಗಲ್ಲವಾ?
ಚಾಮರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿ ನಾನೇ ಉನ್ನತ ಶಿಕ್ಷಣ ಸಚಿವನಾಗುವೆ ಎನ್ನುವ ರಂಗಪ್ಪನವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಶಿಕ್ಷಣ ಸಚಿವರಾದರೆ ಮುಂದೆ ತಮ್ಮ ಎಲ್ಲಾ ಹಗರಣಗಳನ್ನು ಮುಚ್ಚಿ ಹಾಕುವುದಕ್ಕೆ ನೆರವಾಗುವುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ಎಂದು ಮಧುಸೂದನ್ ಆರೋಪಿಸಿದರು.

ರಂಗಪ್ಪ ವಿರುದ್ಧ ಸ್ಪರ್ಧೆಗೆ ಅಭ್ಯರ್ಥಿಗಳ ಹೆದರಿಕೆ
ರಂಗಪ್ಪ ಅಂತಹವರ ವಿರುದ್ಧ ಚುನಾವಣೆಗೆ ನಿಲ್ಲುವುದಕ್ಕೂ ಅಭ್ಯರ್ಥಿಗಳು ಹಿಂದುಮುಂದು ನೋಡುವಂತಾಗಿದೆ. ಅಂತಹ ದುಷ್ಟ ವ್ಯಕ್ತಿತ್ವ ಅವರದು. ವಿಶ್ವವಿದ್ಯಾನಿಲಯ ಮುಳುಗಿಸಿದ್ದು ಆಯಿತು. ಇನ್ನೂ ರಾಜಕಾರಣವೊಂದೇ ಉಳಿದಿರುವುದು ಎಂದು ಅವರು ವ್ಯಂಗ್ಯವಾಡಿದರು.

ಬಸವರಾಜ್ ರಾಯರೆಡ್ಡಿ ನಾಲಾಯಕ್
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಒಬ್ಬ ನಾಲಾಯಕ್. ತಮ್ಮ ಬಾಯಿ ತೀಟೆಗಾಗಿ ಪ್ರೊಫೆಸರ್ ಗಳ ಹಾಗೂ ಉಪಕುಲಪತಿಗಳ ವಿರುದ್ಧ ಹೇಳಿಕೆ ನೀಡಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಎಚ್.ಡಿ.ದೇವೇಗೌಡರದು ಪಾರ್ಟನರ್ ಶಿಪ್ ರಾಜಕಾರಣ. ಇದುವರೆಗೂ ಈ ಇಬ್ಬರೂ ವಿವಿಯ ಹಗರಣದ ಬಗ್ಗೆ ಎಲ್ಲಿಯೂ ಧ್ವನಿ ಎತ್ತಿಲ್ಲ. ಪ್ರಮುಖರ ನಿರ್ಲಕ್ಷ್ಯ ಬೇಜವಾಬ್ದಾರಿಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದರು.












Click it and Unblock the Notifications