ವಿಡಿಯೋ; ಶಿಲ್ಪನಾಗ್ ಕಾಲಿಗೆ ಬಿದ್ದ ಭದ್ರತಾ ಸಿಬ್ಬಂದಿ
ಮೈಸೂರು, ಜೂನ್ 03; ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಲಿಕೆ ಕಚೇರಿಯಿಂದ ಹೊರ ಹೋಗುತ್ತಿದ್ದ ವೇಳೆ ಪಾಲಿಕೆ ಭದ್ರತಾ ಸಿಬ್ಬಂದಿಯೊಬ್ಬರು ಶಿಲ್ಪನಾಗ್ ಕಾಲಿಗೆ ಬಿದ್ದು, ಹೋಗಬೇಡಿ ಎಂದು ಮನವಿ ಮಾಡಿದ ಪ್ರಸಂಗ ನಡೆಯಿತು.
Recommended Video

ಗುರುವಾರ ಪಾಲಿಕೆ ಗೇಟ್ ಮುಂಭಾಗ ಈ ಮನಕಲಕುವ ಘಟನೆ ನಡೆದಿದೆ. ರಾಜೀನಾಮೆ ಘೋಷಿಸಿ ಪಾಲಿಕೆಯಿಂದ ಹೊರ ನಡೆಯುತ್ತಿದ್ದಾಗ ಓಡೋಡಿ ಬಂದ ಸೆಕ್ಯೂರಿಟಿ ಗಾರ್ಡ್ ಕಾಲಿಗೆ ಬಿದ್ದಿದ್ದಾನೆ.
ತಕ್ಷಣ ಸ್ಪಂದಿಸಿದ ಶಿಲ್ಪನಾಗ್ ಕೈ ಮುಗಿದು ಹೊರಟಿದ್ದಾರೆ.
"ಒಳ್ಳೆಯ ಅಧಿಕಾರಿಗೆ ಈ ರೀತಿಯ ಸಮಸ್ಯೆ ಆಗಬಾರದು. ದಯವಿಟ್ಟು ಈ ನಿರ್ಧಾರ ವಾಪಸ್ ತೆಗೆದುಕೊಳ್ಳಿ" ಎಂದು ಸೆಕ್ಯೂರಿಟಿ ಗಾರ್ಡ್ ಗೋಪಾಲ ಗೌಡ ಮನವಿ ಮಾಡಿದರಲ್ಲದೆ, ಪ್ಲೀಸ್ ಮನಸ್ಸು ಬದಲಿಸಿ ಎಂದು ಕೇಳಿಕೊಂಡರು.

ಪಾಲಿಕೆ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮೈಸೂರಿನಲ್ಲಿ ಶಿಲ್ಪನಾಗ್ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೇ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಿಲ್ಪನಾಗ್ ಬೆಂಬಲಕ್ಕೆ ನಿಂತ ಜನ, ಟ್ವಿಟ್ಟರ್, ವಾಟ್ಸಪ್, ಫೇಸ್ ಬುಕ್ ಮೂಲಕ ಬೆಂಬಲ ನೀಡಿದ್ದಾರೆ. ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂಬ ಹ್ಯಾಷ್ಟ್ಯಾಗ್ ಮೂಲಕ ಶಿಲ್ಪನಾಗ್ ಉಳಿಸಿಕೊಳ್ಳಲು ಅಭಿಯಾನ ಶುರುವಾಗಿದೆ.
ರಾಮದಾಸ್ ಪ್ರತಿಕ್ರಿಯೆ; ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ಶಿಲ್ಪನಾಗ್ ರಾಜೀನಾಮೆ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. "ಮೈಸೂರು ನಗರಪಾಲಿಕಾ ಆಯುಕ್ತರಾದ ಶಿಲ್ಪಾ ನಾಗ್ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವ ವಿಷಯ ಕೇಳಿ ನಿಜಕ್ಕೂ ಆಶ್ಚರ್ಯ ಹಾಗೂ ಬೇಸರವಾಯಿತು. ಮೈಸೂರಿನಲ್ಲಿ ಕೋವಿಡ್ ಮಿತ್ರ, ಮನೆ ಮನೆ ಸರ್ವೆ, ಟೆಲಿ ಮೆಡಿಸಿನ್ ನಂತಹ ಎಲ್ಲಾ ಮಹತ್ತರವಾದ ಕೋವಿಡ್ ಗೆ ಸಂಬಂಧಿಸಿದ ಯೋಜನೆಗಳನ್ನು ತಂದವರು ಇವರು" ಎಂದು ಹೇಳಿದರು.
"ಜನಪ್ರತಿನಿಧಿಗಳೊಡನೆ, ಅಧಿಕಾರಿಗಳೊಡನೆ ಚರ್ಚಿಸಿ ನಿರ್ಧಾರಗಳನ್ನು, ಯೋಜನೆಗಳನ್ನು ರೂಪಿಸುತ್ತಿದ್ದರು. ಅವರಿಗೆ ಕೆಲವು ವಿಷಯಗಳಲ್ಲಿ ಬೇಸರವಾಗಿದ್ದರಿಂದ ರಾಜಿನಾಮೆ ನೀಡಿದ್ದೇನೆ ಎಂದು ಹೇಳಿರುವುದು ನಿಜಕ್ಕೂ ದುಃಖಕ. ಈ ಕೂಡಲೇ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಯಾವುದೇ ಕಾರಣಕ್ಕೂ ಇವರ ರಾಜಿನಾಮೆ ಅಂಗೀಕಾರ ಮಾಡಬಾರದು ಇಂತಹ ದಕ್ಷ ಅಧಿಕಾರಿಗಳ ಸೇವೆ ಜನರಿಗೆ ನಿಜಕ್ಕೂ ಬೇಕಾಗಿದೆ. ಇಂಥವರು ಅಧಿಕಾರದಲ್ಲಿ ಮುಂದುವರಿಯಬೇಕು ಎಂದು ತಿಳಿಸಿದ್ದೇನೆ. ಅಲ್ಲದೇ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತಿದ್ದೇನೆ" ಎಂದು ಪೋಸ್ಟ್ ಹಾಕಿದ್ದಾರೆ.












Click it and Unblock the Notifications