“ಎಚ್ಡಿಕೆಯನ್ನು ಹಳೆ ಮೈಸೂರಿನ ಸಿಎಂ ಎಂದ ನಿಮ್ಮನ್ನು ಏನನ್ನೋಣ?"
ಮೈಸೂರು, ಆಗಸ್ಟ್ 20: ಈ ಮಂತ್ರಿಮಂಡಲದ ಗಜಪ್ರಸವದಲ್ಲಿ ಹಳೆ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಕಮಲಪಾಳಯದ ವಿರುದ್ಧ ಹರಿಹಾಯ್ದಿದ್ದಾರೆ.
'ಬ್ಲೂ ಬಾಯ್ಸ್'ಗೆ ಬಿಜೆಪಿ ಮಣೆ: ಪಾಟೀಲ್, ಸವದಿಗೆ ಸಚಿವ ಸ್ಥಾನ
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, "ಇಂದು ಮಂತ್ರಿ ಮಂಡಲದ ಗಜಪ್ರಸವದ ಕೆಲಸ ನಡೆದಿದೆ. ಸದ್ಯ 17 ಜನ ಮಂತ್ರಿಗಳಾಗಿದ್ದಾರೆ. ಆದರೆ, ಈಗ ಆಗಿರುವ ಮಂತ್ರಿಮಂಡಲ ನೋಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿ ನಡೆಸಲು ಸಾಧ್ಯವಿಲ್ಲ. ಪ್ರಾಂತ್ಯಾವಾರು ಸ್ಥಾನಮಾನ ನೀಡುವಲ್ಲಿ ಯಡಿಯೂರಪ್ಪ ಸರ್ಕಾರ ವಿಫಲವಾಗಿದೆ. ಹಳೇ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ" ಎಂದು ದೂರಿದ್ದಾರೆ.
"ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ ಯಾರೊಬ್ಬರಿಗೂ ಅವಕಾಶ ನೀಡಿಲ್ಲ, ಇದನ್ನು ನಾನು ಖಂಡಿಸುತ್ತೇನೆ. ಕುಮಾರಸ್ವಾಮಿಯವರನ್ನು ಹಳೆ ಮೈಸೂರು ಭಾಗದ ಸಿಎಂ ಎಂದು ಯಡಿಯೂರಪ್ಪ ಹಾಗೂ ಬಿಜೆಪಿಯವರು ಬ್ರ್ಯಾಂಡ್ ಮಾಡಿದ್ದರು. ಆದರೆ ಈಗ ಯಡಿಯೂರಪ್ಪ ಅವರನ್ನು ಏನಂತ ಕರೆಯಬೇಕು? ಕನಿಷ್ಠ ಕೊಡಗು ಜಿಲ್ಲೆಗೆ ಆದ್ಯತೆ ನೀಡಬೇಕಿತ್ತು. ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಕೊಡಗು ಜಿಲ್ಲೆಯಲ್ಲೇ ಬಿಜೆಪಿಯ ಇಬ್ಬರು ಶಾಸಕರು, ಸಂಸದರು ಇದ್ದಾರೆ. ಆದರೂ ಅವಕಾಶ ನೀಡಿಲ್ಲ. ಇದು ಜನರ ನಂಬಿಕೆಗೆ ಮಾಡಿರುವ ದ್ರೋಹ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಈಗಾಗಲೇ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾಗೆ ದಿನಗಣನೆ ಆರಂಭವಾಗಿದೆ. ಇದನ್ನು ನಿರ್ವಹಿಸಲಿಕ್ಕಾದರೂ ಇಲ್ಲಿನ ಸ್ಥಳೀಯ ನಾಯಕರನ್ನು ಮಂತ್ರಿ ಮಾಡಬೇಕಿತ್ತು. ಅಲ್ಲದೆ, ಮೈಸೂರು ಚಾಮರಾಜನಗರದಲ್ಲೂ ಪ್ರವಾಹದಿಂದ ಹಾನಿಯಾಗಿದೆ. ಇದನ್ನೆಲ್ಲ ಗಮನಿಸಿದರೆ ಯಡಿಯೂರಪ್ಪ ಅವರು ರಬ್ಬರ್ ಸ್ಟ್ಯಾಂಪ್ ಸಿಎಂ ರೀತಿ ಕಾಣುತ್ತಿದ್ದಾರೆ" ಎಂದು ಹರಿಹಾಯ್ದರು.