ಆರ್ ಟಿಐ ಕಾರ್ಯಕರ್ತನ ಕೊಲೆ: ಮತ್ತಿಬ್ಬರು ಆರೋಪಿಗಳ ಸೆರೆ
ಮೈಸೂರು, ಜನವರಿ 5 : ಡಿ.30ರ ಸಂಜೆ ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಸ್ಥಾನದ ಬಳಿ ಕಾವೇರಿ ನದಿಯ ತೀರದಲ್ಲಿ ಆರ್ ಟಿಐ ಕಾರ್ಯಕರ್ತ ಶ್ರೀಕಾಂತ ಶವ ಪತ್ತೆಯಾಗಿತ್ತು. ಅದು ಕೊಲೆ ಎಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಾಜರಾಜೇಶ್ವರಿ ನಗರ ನಿವಾಸಿಗಳಾದ ಪುಟ್ಟಸ್ವಾಮಿ ಮತ್ತು ಲಕ್ಷ್ಮೇಗೌಡ ಎನ್ನಲಾಗಿದೆ. ಕೊಲೆಯಾದ ಆರ್ ಟಿಐ ಕಾರ್ಯಕರ್ತ ಶ್ರೀನಾಥ್ ಬೆಮೆಲ್ ಹೌಸಿಂಗ್ ಬೋರ್ಡ್ ಸೊಸೈಟಿಯ ಅಧ್ಯಕ್ಷ ಲೋಕೇಶ್ ಎಂಬವರಿಂದ ರು 25-30 ಲಕ್ಷವನ್ನು ಸಾಲವಾಗಿ ಪಡೆದಿದ್ದರು. ಅವರು ವಾಪಸ್ ಕೇಳಿದಾಗ ಶ್ರೀನಾಥ್ ಲೋಕೇಶ್ ಅವರಿಗೆ ಬೆದರಿಕೆ ಹಾಕಿದ್ದರು. ಇದರಿಂದ ಲೋಕೇಶ್ ಮಾನಸಿಕವಾಗಿ ನೊಂದಿದ್ದರು.[ಆರ್ ಟಿಐ ಕಾರ್ಯಕರ್ತ ಕೊಲೆ, ಮುಡಾ ಎಂಜಿನಿಯರ್ ಸೇರಿ 6 ಮಂದಿ ವಶಕ್ಕೆ]

ಆದರೆ ಲೋಕೇಶ್ ಸ್ನೇಹಿತರಾದ ಪುಟ್ಟಸ್ವಾಮಿ, ಮತ್ತು ಲಕ್ಷ್ಮೇಗೌಡ ಇವರ ಹತ್ಯೆಗೆ ಸಂಚು ರೂಪಿಸಿದ್ದರು. ಅದರಂತೆ ರಾಜರಾಜೇಶ್ವರಿ ನಗರದಲ್ಲಿ ಕನ್ಸಸ್ಟ್ರಕ್ಷನ್ ನಡೆಯುತ್ತಿದ್ದ ಮನೆಯೊಂದಕ್ಕೆ ಶ್ರೀನಾಥ್ ಅವರನ್ನು ಕರೆದೊಯ್ದು ಅಲ್ಲಿ ಕಟ್ಟಿಗೆಯ ತುಂಡುಗಳಿಂದ ಹಲ್ಲೆ ನಡೆಸಿ, ಹತ್ಯೆಗೈದಿದ್ದಾರೆ. ಬಳಿಕ ಓಮಿನಿ ಕಾರಿನಲ್ಲಿ ಕೊಂಡೊಯ್ದು ನಿಮಿಷಾಂಬಾ ದೇವಳದ ಬಳಿ ಬಿಸಾಡಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿರುವುದಾಗಿ ತಿಳಿದುಬಂದಿದೆ.
ಕೊಲೆ ಆರೋಪಿಗಳನ್ನು ಮೈಸೂರಿನ ರಿಂಗ್ ರಸ್ತೆಯ ಬಳಿ ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಮುಡಾ ಸಹಾಯಕ ಇಂಜಿನಿಯರ್ ಮಹೇಶ್ ಎಂಬವರ ಮನೆ ಮೇಲಿನ ಐಟಿ ಅಧಿಕಾರಿಗಳ ದಾಳಿಗೂ ಇವರೇ ಮಾಹಿತಿ ನೀಡಿದ್ದರು ಎನ್ನುವುದನ್ನು ತಿಳಿದಿದ್ದ ಆರೋಪಿಗಳು ಪ್ರಕರಣದ ಹಾದಿ ತಪ್ಪಿಸಲು ಯತ್ನಿಸಿದ್ದರು ಎನ್ನಲಾಗಿದೆ.
ಇದೀಗ ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸ್ ಇನ್ಸಪೆಕ್ಟರ್ ದೀಪಕ್ ಅವರಿಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಓಮಿನಿ ಕಾರು, ಎರಡು ಬೈಕ್ ಮತ್ತು ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಡ್ಯ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ರೆಡ್ಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.












Click it and Unblock the Notifications