ಚಾಮುಂಡಿ ಬೆಟ್ಟದಲ್ಲಿ ಹರಿದ್ವಾರ ರೀತಿ ರೋಪ್ ವೇ: ಸೋಮಣ್ಣ
ಮೈಸೂರು, ಡಿಸೆಂಬರ್ 24: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹರಿದ್ವಾರ ಮಾದರಿಯಲ್ಲಿ ರೋಪ್ ವೇ ನಿರ್ಮಾಣ ಮಾಡಲು ಸರಕಾರ ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಬೆಟ್ಟದಲ್ಲಿ ಸಂಚಾರ ಒತ್ತಡವನ್ನು ನಿಯಂತ್ರಣ ಮಾಡಲು ಕೇಂದ್ರ ಸರಕಾರದ ನೆರವಿನೊಂದಿಗೆ ರೋಪ್ ವೇ ನಿರ್ಮಿಸಲು ಅಂದಾಜು 20 ಕೋಟಿ ರೂ, ವೆಚ್ಚ ಮಾಡಲು ನಿರ್ಧರಿಸಲಾಗಿದೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನಿರ್ಮಾಣ ಮಾಡುವ ರೋಪ್ ವೇ ಪಳನಿ ಮತ್ತು ಹರಿದ್ವಾರಕ್ಕಿಂತಲೂ ಅತ್ಯಾಧುನಿಕವಾಗಿರಲಿದೆ, ಅಲ್ಲಿನ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಯೋಜನೆ ರೂಪಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.

ಈ ರೋಪ್ ವೇ ಯೋಜನೆಯಿಂದ ಭಕ್ತರಿಗೆ ಅನುಕೂಲವಾಗುವ ಜತೆಗೆ ಮಳೆಗಾಲದಲ್ಲಿ ರಸ್ತೆ ಕುಸಿತದಿಂದ ಸಮಸ್ಯೆ ಎದುರಾಗುವುದು ನಿವಾರಣೆಯಾಗಲಿದೆ ಎಂದು ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿ ಮುಂದುವರೆದಿದೆ, ಬೆಟ್ಟದ ಮೇಲೆ ಸ್ವಚ್ಛತೆ ಕಾಪಾಡಲು ಅಂಗಡಿ, ಮುಂಗಟ್ಟುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದರು.
ಕಾರು ನಿಲ್ದಾಣದ ಸಮೀಪದಲ್ಲಿ 180 ಮಳಿಗೆಗಳನ್ನು ನಿರ್ಮಿಸಿ ಹಂಚಲು ಮುಂದಾಗಿದ್ದೇವೆ, ಇದಕ್ಕಾಗಿ 5 ರಿಂದ 6 ಕೋಟಿ ರೂ, ವೆಚ್ಚವನ್ನು ಅಂದಾಜು ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರೇಷ್ಮೇ ಇಲಾಖೆಗೂ ಉತ್ತೇಜನ ನೀಡಲು ನಿರ್ಧರಿಸಲಾಗಿದ್ದು, ಸಂಸ್ಥೆಯ ಇತರೆ ನಿಗಮಗಳನ್ನು ವಿಲೀನ ಮಾಡಲಾಗುವುದು, ಇಲಾಖೆಯ ನೇರ ಆಡಳಿತಕ್ಕೆ ತರುವ ಪ್ರಸ್ತಾವನೆ ಸಿದ್ದವಾಗುತ್ತಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.












Click it and Unblock the Notifications