ಮೈಸೂರಿನಲ್ಲಿ ಗೆಡ್ಡೆ ಗೆಣಸು ಮೇಳ 2023; ಏನೆಲ್ಲಾ ವಿಶೇಷತೆ ಇದೆ ಗೊತ್ತಾ?, ಇಲ್ಲಿದೆ ವಿವರ
ಮೈಸೂರಿನಲ್ಲಿ ಗೆಡ್ಡೆ ಗೆಣಸು ಮೇಳ ಆರಂಭವಾಗಿದ್ದು, ಯಾವೆಲ್ಲ ವಿಧದ ಗೆಡ್ಡೆ ಗೆಳಸುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಮೈಸೂರು, ಫೆಬ್ರವರಿ, 12: ನಮ್ಮ ಮೂಲ ಆಹಾರ ಪದ್ಧತಿಯೇ ಶ್ರೇಷ್ಠ ಎಂಬ ಅರಿವು ಮೂಡಿಸುವ ಸಲುವಾಗಿ ಸಹಜ ಸಮೃದ್ಧ ಯೂಸಿಂಗ್ ಡೈವರ್ಸಿಟಿ, ಸಹಜ ಸೀಡ್ ಆಶ್ರಯದಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಗೆಡ್ಡೆ- ಗೆಣಸು ಮೇಳಕ್ಕೆ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದೆ.
ಕೊಲಂಬಿಯಾದ ಯೋಕನ್ ಬೀನ್ಸ್, ಹಲವು ಬಗೆಯ ರುಚಿ, ವರ್ಣ, ಆಕಾರದ ವೈವಿಧ್ಯಮಯ ಗೆಡ್ಡೆ ಗೆಣಸು, ಗೆಣಸಿನಿಂದ ತಯಾರಿಸಿದ ಆಹಾರದ ಗಮಲನ್ನು ಸವಿಯಬಹುದು. ಎರಡು ದಿನಗಳ ಈ ಮೇಳದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿರುವ ರೈತರ ಗುಂಪುಗಳು ಬಗೆ ಬಗೆಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ತಂದಿವೆ. ವಿವಿಧ ಪ್ರಭೇದಕ್ಕೆ ಸೇರಿರುವ, ವೈವಿಧ್ಯಮಯ ಗಾತ್ರ ಹಾಗೂ ಆಕಾರದ ಗೆಡ್ಡೆ ಗೆಣಸುಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ.
ಗಮನ ಸೆಳೆದ 200 ಬಗೆಯ ಗೆಡ್ಡೆ ಗೆಣಸುಗಳು
ಕೇರಳದ ರೈತ ಶಾಜಿ ಪ್ರದರ್ಶನಕ್ಕೆ ತಂದಿರುವ 200 ಬಗೆಯ ಗೆಡ್ಡೆ ಗೆಣಸುಗಳು ಮತ್ತು ಕೊಲಂಬಿಯಾದ ಯೋಕನ್ ಬೀನ್ಸ್ ಮೇಳದ ಮುಖ್ಯ ಆಕರ್ಷಣೆಯಾಗಿವೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಊರುಗಳನ್ನು ಸುತ್ತಿದ ಮೇಲೆ ನಮ್ಮೂರೆ ನಮಗೆ ಮೇಲು ಎಂಬಂತೆ ಎಲ್ಲಾ ಆಹಾರ ಪದ್ಧತಿಗಳನ್ನು ನೋಡಿರುವವರು ಇದೀಗ ಸಿರಿದಾನ್ಯ, ಗೆಡ್ಡೆ ಗೆಣಸಿನಂತಹ ಮೂಲ ಆಹಾರಕ್ಕೆ ಮರಳುತ್ತಿದ್ದಾರೆ. ಆರೋಗ್ಯ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಎಂದರು.

20 ಲಕ್ಷ ರೂಪಾಯಿ ಅನುದಾನ
ಗೆಡ್ಡೆ ಗೆಣಸು ಬೆಳೆಯುವವರು ಸೇರಿದಂತೆ ಇನ್ನಿತರ ಸಾವಯವ ಕೃಷಿ ಕೈಗೊಳ್ಳುವವರ ರೈತ ಉತ್ಪದಕ ಸಂಘ ರಚಿಸಲು ಸಹಜ ಸಮೃದ್ಧಿ ಸಂಘಟನೆಯವರಿಗೆ ಸಲಹೆ ನೀಡಲಾಗಿದೆ. ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಜಿಲ್ಲಾಡಳಿತ ಮಾಡಲಿದೆ. ಅಲ್ಲದೇ ನಬಾರ್ಡ್ನಲ್ಲಿಯೂ ನಾನಾ ಯೋಜನೆಗಳಿವೆ. ತೆರೆದ ಸಂತೆಗಳನ್ನು ಆರಂಭಿಸಿ ಸಾವಯವ ಆಹಾರ ಪದಾರ್ಥಗಳ ಮಾರಾಟಕ್ಕೆ ಅವಕಾಶ ನೀಡಲು 20 ಲಕ್ಷ ರೂಪಾಯಿ ಅನುದಾನವಿದೆ. ಇದನ್ನು ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ನಂತರ ಮೇಳದ ಆಯೋಜಕರಾದ ಸಹಜ ಸಮೃದ್ಧದ ಜಿ.ಕೃಷ್ಣ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆಹಾರ ತಯಾರಿಕೆ ಸ್ಪರ್ಧೆ
ಭಾನುವಾರ ಕಂದಮೂಲಗಳ ಆಹಾರ ತಯಾರಿಕೆ ಸ್ಪರ್ಧೆ ನಡೆಯಲಿದ್ದು, ಆಸಕ್ತರು ಗೆಡ್ಡೆ ಗೆಣಸುಗಳನ್ನು ಬಳಸಿ, ಮನೆಯಲ್ಲೇ ಅಡುಗೆ ತಯಾರಿಸಿ 12 ಗಂಟೆಗೆ ಮೇಳಕ್ಕೆ ತರಲಿದ್ದಾರೆ. ಉತ್ತಮ ಅಡುಗೆಗೆ ಬಹುಮಾನವಿರುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದರು.












Click it and Unblock the Notifications