ಜೀವದ ಹಂಗು ತೊರೆದು ದೊಡ್ಡ ಅಪಘಾತ ತಪ್ಪಿಸಿದ ರೈಲ್ವೆ ಗಾರ್ಡ್
ಮೈಸೂರು, ಜನವರಿ 4: ರೈಲ್ವೆ ಗಾರ್ಡ್ ತನ್ನ ಜೀವದ ಹಂಗು ತೊರೆದು ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಬರೋಬ್ಬರಿ 70 ಅಡಿ ಎತ್ತರದ ಸೇತುವೆ ಮೇಲೆ ನಿಂತಿದ್ದ ರೈಲಿನ ಚೈನನ್ನು ಬಿಡಿಸುವ ಸಲುವಾಗಿ ಯಾವುದೇ ರೀತಿಯ ಸುರಕ್ಷತೆ ಇಲ್ಲದೆ ಮಾಡಿರುವ ಸಾಹಸದ ವೀಡಿಯೋ ಇದೀಗ ವೈರಲ್ ಆಗಿದೆ.
ಬೆಂಗಳೂರು ವಿಭಾಗದ ಹಿರಿಯ ರೈಲ್ವೆ ಗಾರ್ಡ್ ಎನ್. ವಿಷ್ಣುಮೂರ್ತಿ ಎಂಬುವವರೇ ಈ ಸಾಹಸಗೈದವರು. ಡಿಸೆಂಬರ್ 26 ರಂದು ವಿಷ್ಣುಮೂರ್ತಿ ಚಾಮರಾಜನಗರದ ತಿರುಪತಿ ಎಕ್ಸ್ಪ್ರೆಸ್ ರೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಶ್ರೀರಂಗಪಟ್ಟಣದ ಗರ್ಡರ್ ಮೇಲ್ಸೆತುವೆ ಮೇಲೆ ತೆರಳುತ್ತಿದ್ದ ರೈಲಿನ ಇಂಟರ್ ಚೈನ್ ಅನ್ನು ಯಾರೋ ಎಳೆದ ಪರಿಣಾಮ, ರೈಲು ನಿಂತಿತು.
ಆಗ ವಿಷ್ಣುಮೂರ್ತಿ ತಮ್ಮ ಜೀವದ ಹಂಗನ್ನು ತೊರೆದು ನಡೆಯಲು ಸಾದ್ಯವಾಗದ ಗರ್ಡರ್ ಮೇಲ್ಸೆತುವೆ ಮೇಲೆ ನಡೆದುಕೊಂಡು ಹೋಗಿ ರೈಲಿನ ಕೊನೆಯ ಬೋಗಿಯ ಹೊರಗಡೆ ಸಿಕ್ಕಿಹಾಕಿಕೊಂಡಿದ್ದ ಚೈನನ್ನು 10 ನಿಮಿಷದಲ್ಲಿ ಬಿಡಿಸಿ, ನಂತರ ಚೈನ್ ಎಳೆದ ವ್ಯಕ್ತಿಯನ್ನು ಹಿಡಿದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಷ್ಣುಮೂರ್ತಿ ಅವರ ಈ ಕಾರ್ಯವನ್ನು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿದ್ದು ವಿಷ್ಣುಮೂರ್ತಿ ಅವರ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಎಸ್ಡಬ್ಲ್ಯೂಆರ್ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಅವರು ವಿಷ್ಣುಮೂರ್ತಿ ಅವರ ಕಾರ್ಯವನ್ನು ಪ್ರಶಂಸಿಸಿ, ಪ್ರಶಂಸೆ ಪತ್ರ ಮತ್ತು 5 ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡಿದ್ದಾರೆ.












Click it and Unblock the Notifications