ಬನ್ನಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು
ಮೈಸೂರು, ಆಗಸ್ಟ್ 17: ಕಬ್ಬು ಅರೆಯುವ ಯಂತ್ರಕ್ಕೆ ಸಿಲುಕಿ ಪುಣೆ ಮೂಲದ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಅಳಗಂಚಿನಲ್ಲಿರುವ ಬನ್ನಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ನಡೆದಿದೆ.
ಮೃತರನ್ನು ಮಹಾರಾಷ್ಟ್ರ ಪುಣೆ ಮೂಲದ ಖಾಸಗಿ ಕಂಪನಿ ಕಾರ್ಮಿಕ ಅಮೃತ್ ಕುಮಾರ್ (30) ಎಂದು ಹೇಳಲಾಗಿದೆ.
ಕಬ್ಬು ಅರೆಯುವ ಯಂತ್ರ ದುರಸ್ತಿ ಮಾಡುವ ಗುತ್ತಿಗೆಯನ್ನು ಪುಣೆ ಮೂಲದ ಕಂಪೆನಿ ಪಡೆದುಕೊಂಡಿತ್ತು. ಎರಡು ದಿನಗಳ ಹಿಂದೆ ಕಾರ್ಖಾನೆಗೆ ಕಂಪನಿಯಿಂದ ಆಗಮಿಸಿದ ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ಭಾಗಿಯಾಗಿದ್ದರು. ನಿನ್ನೆ ಮಧ್ಯಾಹ್ನ ಕಬ್ಬು ಅರೆಯುವ ಯಂತ್ರ ಚಾಲನೆಯಲ್ಲಿದ್ದ ವೇಳೆ ವೆಲ್ಡಿಂಗ್ ಮಾಡುವಾಗ ಕಾಲು ಜಾರಿ ಅಮೃತ್ ಕುಮಾರ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಯಂತ್ರಕ್ಕೆ ಅವರ ದೇಹ ಸಿಲುಕಿ ನಜ್ಜು ಗುಜ್ಜಾಗಿ ಸಾವನ್ನಪ್ಪಿದ್ದಾರೆ.

ಕಾರ್ಖಾನೆಗೆ ಡಿವೈಎಸ್ಪಿ ಪ್ರಭಾಕರ್ ರಾವ್ ಶಿಂಧೆ, ಸಿಪಿಐ ಲಕ್ಷ್ಮಿಕಾಂತ್ ತಳವಾರ್, ಎಸ್ ಐ ಆಕಾಶ್ ಭೇಟಿ ನೀಡಿ ಪರಿಶೀಲಿಸಿದರು. ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications