ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿದ್ದ ಮಹೇಶ್ ಚಂದ್ರ ಗುರು ಸ್ಫೋಟಕ ಸಂದರ್ಶನ
ಮೈಸೂರು, ಜೂನ್ 16: ಈಚೆಗೆ ಗೌರಿಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ವಾಗ್ಮೋರೆ ಬಂಧನವಾಗಿತ್ತು. ಬಂಧಿತ ತಂಡ ತಿಳಿಸಿದಂತೆ 11 ಮಂದಿಯನ್ನು ಕೊಲ್ಲುವ ಆಲೋಚನೆ ಇತ್ತು. ಆ ಪಟ್ಟಿಯಲ್ಲಿ ಪ್ರಗತಿಪರ ಚಿಂತಕರಿದ್ದರು. ನಿವೃತ್ತ ನ್ಯಾಯಮೂರ್ತಿ ಇದ್ದರು. ನಿವೃತ್ತ ಐಎಎಸ್ ಅಧಿಕಾರಿ, ಅಷ್ಟೇ ಏಕೆ, ಒಬ್ಬರು ಸ್ವಾಮೀಜಿ ಕೂಡ ಇದ್ದರು.
ಈ ಮಾಹಿತಿಯನ್ನು ಹೊರ ಹಾಕಿದ್ದು ಸ್ವತಃ ಎಸ್ ಐಟಿ. ಖಂಡಿತಾ ಇದು ಸ್ಫೋಟಕ ಮಾಹಿತಿ. ಇದು ಹೊರಗೆ ಬರುತ್ತಿದ್ದ ಹಾಗೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಸಂಗತಿ ಹೊರಬಂದ ತಕ್ಷಣ ಪ್ರಗತಿಪರ ಚಿಂತಕ ಪ್ರೊ. ಮಹೇಶ್ ಚಂದ್ರ ಗುರು ಅವರಿಗೆ ಸರಕಾರದ ವತಿಯಿಂದ ಗನ್ ಮ್ಯಾನ್ ಅನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಮೈಸೂರು: ಪ್ರೊ.ಮಹೇಶ್ ಚಂದ್ರಗುರುಗೆ ಪೊಲೀಸ್ ರಕ್ಷಣೆ
ಮಹೇಶ್ ಚಂದ್ರ ಗುರು ಅವರು ಏಕೆ ಟಾರ್ಗೆಟ್ ಆದರು? ಈ ಹಂತಕರ ಹಿಟ್ ಲಿಸ್ಟ್ ನಲ್ಲಿ ಇವರೇಕೆ ಇದ್ದರು ಎಂಬುದು ಸಹಜ ಕುತೂಹಲ ಹಾಗೂ ಆತಂಕ. ಈ ಬಗ್ಗೆ ಸ್ವತಃ ಮಹೇಶ್ ಚಂದ್ರ ಗುರು ಅವರನ್ನೇ ಒನ್ಇಂಡಿಯಾ ಕನ್ನಡ ಮಾತನಾಡಿಸಿದೆ. ಇದು ಸಂದರ್ಶನ. ಅವರು ಮಾತನಾಡಿರುವುದನ್ನು ನಿಮ್ಮೆದುರಿಗೆ ನೀಡಲಾಗಿದೆ.
ಪ್ರಶ್ನೆ: ನೀವು ಪ್ರೊಫೆಸರ್. ಒಂದು ನಿರ್ದಿಷ್ಟ ವಿಚಾರದ ಪರ ಒಲವಿದ್ದರೆ ನಿಮ್ಮ ವಿದ್ಯಾರ್ಥಿಗಳಿಗೆ ಯಾವ ಸಂದೇಶ ರವಾನೆಯಾಗುತ್ತದೆ?
ಮಹೇಶ್ ಚಂದ್ರ ಗುರು: ನಾನು ಹಿಂದುತ್ವದ ಉಗ್ರ ವಿರೋಧಿ. ಬಂಧುತ್ವದ ಪ್ರತಿಪಾದಕ. ಸಮಾನತೆ ಪ್ರತಿಪಾದಕ. ನಮ್ಮ ದೇಶಕ್ಕೆ ಹಿಂದುತ್ವ ಬೇಡ. ನಾನು ಬಂಧುತ್ವ ರಹಿತವಾದ ಹಿಂದುತ್ವವನ್ನು ತಿರಸ್ಕರಿಸುವವನು. ನನಗೆ ಭಾರತೀಯತ್ವ ಬೇಕು. ನಾನು ಪೂಜೆ ಮಾಡುವ ಸಂಸ್ಕೃತಿಗೆ ಸೇರುವುದೇ ಇಲ್ಲ. ನಾನು ದೇಶ ವಿರೋಧಿಯಲ್ಲ. ಮಾನವೀಯತೆ ಮೇಲೆ ಹಲ್ಲೆಯಾದಾಗ ಖಂಡಿಸುತ್ತೇನೆ.
ನನ್ನ ಮಕ್ಕಳಿಗೂ ಇದನ್ನೇ ಹೇಳಿಕೊಡುತ್ತಿದ್ದೇನೆ. ಹೇಳಿಕೊಡುತ್ತೇನೆ. ಇದರಲ್ಲಿ ತಪ್ಪೇನು? ನನ್ನನ್ನು ನೋಡಿ ಕಲಿಯಿರಿ ಎಂದು ಯಾರಿಗೂ ಹೇಳಿಲ್ಲ. ನಾನು ಯಾವುದೇ ತಪ್ಪು ಮಾಡುತ್ತಿಲ್ಲ. ನನ್ನನ್ನು ನೋಡಿ ಕಲಿತರೆ ತಪ್ಪೂ ಇಲ್ಲ.
ಪ್ರಶ್ನೆ: ನಿಮ್ಮ ಆಲೋಚನೆ ಈ ರೀತಿ ಆಗಲು ಕಾರಣವೇನು? ನಿಮ್ಮ ಟಾರ್ಗೆಟ್ ಹಿಂದುತ್ವವೇ ಏಕೆ?
ಮಹೇಶ್ ಚಂದ್ರ ಗುರು: ಗೊಡ್ಡು ಹಿಂದುತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವವರ ವಿರೋಧಿ ನಾನು. ಅಸತೋಮ ಸದ್ಗಮಯ ಎನ್ನುವಂತೆ ಕತ್ತಲಿನಿಂದ ಬೆಳಕಿನೆಡೆಗೆ ತರುವುದು ಪ್ರಜೆಯಾಗಿ ನನ್ನ ಜವಾಬ್ದಾರಿ. ನಾನು 2 ಗಂಟೆ ಪಾಠ ಮಾಡುತ್ತೇನೆ. ಮಿಕ್ಕಿದ 22 ಗಂಟೆ ಕಂಬಳಿ ಹೊದ್ದು ಮಲಗುವ ಜಾಯಮಾನ ನನ್ನದಲ್ಲ. ದಂಡಪಿಂಡಗಳಂತೆ ಬದುಕಬೇಡಿ, ಸಮಾಜದ ಆಸ್ತಿಯಾಗಿ ಬದುಕಿ ಎಂದು ವಿವೇಕಾನಂದರು ಹೇಳಿದ್ದಾರೆ. ನನಗೆ ಹಾಗೆ ಇರಲು ಇಷ್ಟ ಕೂಡ. ಬುದ್ಧ, ವಿವೇಕಾನಂದರು ನನಗೆ ಆದರ್ಶ.
ಮಹಿಳೆಯರನ್ನು ದಾಸಿಯನ್ನಾಗಿಸುವ ಹಿಂದುತ್ವವನ್ನು ನಾನು ಒಪ್ಪುವುದಿಲ್ಲ. ವರ್ಣಭೇದವನ್ನು ಮುಂದುವರಿಸುತ್ತಿರುವ ಹಿಂದುತ್ವಕ್ಕೆ ನಾನು ವಿರೋಧಿ. ಅಲ್ಪಸಂಖ್ಯಾತರು ಎಂದು ಹೇಳಿಕೊಳ್ಳುವ ಒಂದು ಜಾತಿ ಇಂದು ಪಲ್ಲಕ್ಕಿ ಮೇಲೆ ಕುಳಿತಿದೆ. ಬಹುಸಂಖ್ಯಾತರನ್ನು ಆ ಪಲ್ಲಕ್ಕಿ ಹೊರುವಂತೆ ನಡೆಸುತ್ತಿದೆ ಆ ವರ್ಗ. ಅಂತಹ ಪಲ್ಲಕ್ಕಿಯ ಸಂಸ್ಕೃತಿಯ ವಿರೋಧಿ ನಾನು. ನನಗೆ 5 ಸ್ಟಾರ್ ಸ್ವಾಮೀಜಿಗಳು ಬೇಡ. ರಾಜರಾಂ ಮೋಹನ್ ರಾಯ್, ದಯಾನಂದ ಸರಸ್ವತಿ, ಮಹಾತ್ಮ ಫುಲೆ ಇಂತಹವರು ಬೇಕು.
ಗೌರಿ ಹಂತಕರ ಲಿಸ್ಟಲ್ಲಿ ಜಾಮದಾರ್, ನಿಜಗುಣಾನಂದ, ನಾಗಮೋಹನ್ ದಾಸ್
ಪ್ರಶ್ನೆ: ನಿಮ್ಮ ಅನೇಕ ಭಾಷಣಗಳಲ್ಲಿ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರ ವಿರುದ್ಧವೇ ಮಾತನಾಡಿದ್ದೀರಿ, ಏಕೆ ?
ಮಹೇಶ್ ಚಂದ್ರ ಗುರು: ಪೇಜಾವರರು ಸ್ಟಂಟ್ ಮಾಡೋಕೆ ದಲಿತರ ಕೇರಿಗೆ ಬರುತ್ತಾರೆ. ದಲಿತರ ಮನೆಯಲ್ಲಿ ಊಟ ಮಾಡದ ವ್ಯಕ್ತಿ ಪೇಜಾವರರು. ಜಾತಿ ವಿನಾಶ ಚಳವಳಿಯ ನೇತೃತ್ವವನ್ನು ಪೇಜಾವರ ವಹಿಸಲಿ. ನನಗೆ ರಿಯಲ್ ಸರ್ವೀಸ್ ಬೇಕು, ರೀಲ್ ಅಲ್ಲ. ಹಾಗಾಗಿ ನನಗೆ ಅವರು ಸ್ವಲ್ಪ ದೂರವೇ.
ಪ್ರಶ್ನೆ: ಹಾಗಾದರೆ ನೀವು ಬ್ರಾಹ್ಮಣರ ವಿರೋಧಿಯೇ ?
ಮಹೇಶ್ ಚಂದ್ರ ಗುರು: ಬ್ರಾಹ್ಮಣತ್ವ ಎನ್ನುವುದು ಆಚರಣೆಯಲ್ಲಿಲ್ಲ. ಬ್ರಹ್ಮನ ತಲೆ ಮೇಲಿನಿಂದ ಬಂದೆವು ಎಂಬ ಗೊಡ್ಡು ಸಂಪ್ರದಾಯದಲ್ಲಿರುವ ಬ್ರಾಹ್ಮಣರ ವಿರೋಧಿ ನಾನು. ಹೀಗೆ ಮಿಥ್ಯಗಳನ್ನು ಆಧರಿಸಿದೆ ಹಿಂದೂ ಧರ್ಮ, ಸತ್ಯವನ್ನು ಆಧರಿಸಿಲ್ಲ. ಹಾಗಾಗಿ ಹಿಂದೂಧರ್ಮದ ವಿರೋಧಿ ನಾನು. ಹಿಂದುತ್ವದಲ್ಲಿ ಅಸಮಾನತೆ ತಾಂಡವವಾಡುತ್ತಿದೆ.
ಗೌರಿ ಹತ್ಯೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಆರೋಪಿ ಪರಶುರಾಮ್
ಪ್ರಶ್ನೆ : ಹಾಗಾದರೆ ಹಿಂದೂ, ಹಿಂದುತ್ವದಲ್ಲಿ ಮಾತ್ರ ಹುಳುಕಿದೆಯೇ? ಬೇರೆ ಎಲ್ಲಾ ಧರ್ಮವೂ ಪರಿಪೂರ್ಣವೇ?
ಮಹೇಶ್ ಚಂದ್ರ ಗುರು: ನಾನು ಎಲ್ಲಿಯೂ ಬರೀ ಹಿಂದುತ್ವವನ್ನೇ ವಿರೋಧಿಸಿಲ್ಲ. ಇಸ್ಲಾಂ ಧರ್ಮದ ಹುಳುಕನ್ನು ಸಹ ಎತ್ತಿ ಹಿಡಿದಿದ್ದೇನೆ. ನನಗೆ ಮುಸಲ್ಮಾನ ಹೆಣ್ಣುಮಕ್ಕಳು ಬುರ್ಖಾ ಧರಿಸುವುದು ಖಂಡಿತಾ ಇಷ್ಟ ಇಲ್ಲ. ಮದರಸಾಗಳಲ್ಲಿನ ಅವೈಜ್ಞಾನಿಕ ಪದ್ಧತಿಯ ವಿರೋಧಿ ನಾನು. ಪೂಜೆ - ಪುನಸ್ಕಾರದಿಂದ ಯಾರು ಕೂಡ ಉದ್ಧಾರ ಆಗಿಲ್ಲ. ಇದನ್ನು ಅನೇಕ ಲೇಖನಗಳಲ್ಲಿ ಉಲ್ಲೇಖಿಸಿದ್ದೇನೆ ಕೂಡ.
ಪ್ರಶ್ನೆ: ನೀವು ಈ ಹಿಂದೆ ಗೋ ಮಾಂಸ ತಿಂದಿದ್ದು ತಪ್ಪಲ್ಲವೇ ?
ಮಹೇಶ್ ಚಂದ್ರ ಗುರು: ಉತ್ತಮ ಆರೋಗ್ಯಕ್ಕಾಗಿ ಗೋ ಮಾಂಸ ಒಳ್ಳೆಯದು ಎಂದಿದ್ದೀರಿ. ಅದಕ್ಕೆ ತಿಂದೆ. ಬಿಹಾರ ಕಡೆಯಲ್ಲಿ ಹಿಂದೂಗಳು ಒಂಟೆಯನ್ನೇ ತಿನ್ನುತ್ತಾರೆ. ಅದರಲ್ಲಿ ತಪ್ಪಿಲ್ಲವೇ? ಬೇಟೆಯಾಡುವ ಕುರಿತು ಶಾಸ್ತ್ರದಲ್ಲಿಯೇ ಉಲ್ಲೇಖವಿದೆ. ಆಗ ಯಾಕೆ ವಿರೋಧ ವ್ಯಕ್ತಪಡಿಸಿಲ್ಲ? ಈಗ ಏಕೆ ?
ಪ್ರಶ್ನೆ: ಈ ರೀತಿ ಹಿಂದುತ್ವದ ವಿರೋಧಿಯಾಗಿ ಇರುವುದಕ್ಕೆ ನಿಮಗೆ ಹೆದರಿಕೆ ಇಲ್ಲವೇ?
ಮಹೇಶ್ ಚಂದ್ರ ಗುರು: ಹಿಂದುತ್ವ ವಿರೋಧ ಮಾಡೋಕೆ ನನಗೆ ಧಮ್ ಇದೆ. ಧಮ್ ಇಲ್ಲದವರು ವಿರೋಧ ಮಾಡುವುದಿಲ್ಲ. ಗುಂಡು ಹೊಡೆದು ಕೊಲ್ಲಲು ಬಂದರೆ ನಾನು ಬಿಟ್ಟೇನಾ? ನನಗೂ ಕೊಲ್ಲಲು ಬರುತ್ತದೆ. ನಾನು ಯಾರಿಗೂ ಹೆದರುವುದಿಲ್ಲ. ಹೆದರಬೇಕಾಗಿಯೂ ಇಲ್ಲ. ದೇಶದಲ್ಲಿ ಹಿಂದುತ್ವ 3% ಮಾತ್ರ. ಬಹುಜನರೇ 97 % ಇದ್ದಾರೆ.
ಪ್ರಶ್ನೆ: ನೀವು ಸಿದ್ದರಾಮಯ್ಯ ಪರ ಚುನಾವಣೆ ಪ್ರಚಾರಕ್ಕೆ ಇಳಿದಿದ್ದು ಏಕೆ? ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಏನು ಕಾರಣ
ಮಹೇಶ್ ಚಂದ್ರ ಗುರು: ನಾನೇ ದೊಡ್ಡರಾಮಯ್ಯ. ಯಾವ ಸಿದ್ದರಾಮಯ್ಯನನ್ನು ಬೆಂಬಲಿಸಿ ಎಂಬ ಕಾರ್ಯಕ್ರಮಕ್ಕೆ ನಾನು ಹೋಗಿರಲಿಲ್ಲ. ಅದು ಸಂವಿಧಾನ ಉಳಿಸಿ- ಪ್ರಜಾಸತ್ತತೆ ಬೆಳೆಸಿ ಕಾರ್ಯಕ್ರಮ. ನನಗೆ ಮೊದಲೇ ಅಲ್ಲಿ ಯತೀಂದ್ರ ಬರುತ್ತಾರೆ ಎಂದು ಗೊತ್ತಿದ್ದರೆ ಖಂಡಿತಾ ವೇದಿಕೆ ಹಂಚಿಕೊಳ್ಳುತ್ತಿರಲಿಲ್ಲ. ಇದುವರೆಗೂ ನಾನು ಎಂದಿಗೂ ಅವರ ಮನೆ ಬಾಗಿಲಿಗೆ ಕಾಲಿಟ್ಟಿಲ್ಲ. ಈ ವಿಷಯವಾಗಿ ನನ್ನನ್ನು ಅಮಾನತು ಮಾಡಿದ್ದು ಪೂರ್ವಗ್ರಹ ಪೀಡಿತವಾದ ನಿರ್ಧಾರ. ಸಿದ್ದರಾಮಯ್ಯ ಸೋಲಲು ಬಹುಶಃ ಅವರು ಹೊಂದಿದ ವಿಪರೀತ ದರ್ಪವೇ ಕಾರಣ.
ಪ್ರಶ್ನೆ: ನೀವು ಚಿಂತಕ ಭಗವಾನ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೀರಲ್ಲಾ? ಸಿದ್ದರಾಮಯ್ಯ ಪರ ಅವರು ನಿಲುವಿಗೆ ನಿಮ್ಮ ಅಭಿಪ್ರಾಯವೇನು?
ಮಹೇಶ್ ಚಂದ್ರ ಗುರು: ಸಿದ್ದರಾಮಯ್ಯ ಪರ ನಿಲುವು ಅವರ ಸ್ವಂತ ಅಭಿಪ್ರಾಯ. ನೀವು ಹೇಳುವುದಿಲ್ಲವೇ ನನ್ನ ಉಳಿವಿಗೆ ಬ್ರಹ್ಮ ದೇವರು ಕಾರಣ ಎಂದು, ಹಾಗೇ ಇದು ಅವರ ಅಭಿಪ್ರಾಯ ಅಷ್ಟೇ. ಭಗವಾನ್ ಜೊತೆ ನಾನು ಕಾಣಿಸಿಕೊಳ್ಳುತ್ತಿಲ್ಲ. ಬುದ್ಧ, ಅಂಬೇಡ್ಕರ್ ಜೊತೆ ಗುರುತಿಸಿಕೊಳ್ಳುತ್ತಿದ್ದೇನೆ.
ಪ್ರಶ್ನೆ: ಹೀಗೆ ಕೊಲ್ಲುವ ಮಟ್ಟಕ್ಕೆ ನೀವೇ ಯಾಕೆ ಟಾರ್ಗೆಟ್ ಆಗಿದ್ದೀರಿ ಅಂತ ಯೋಚಿಸಿದ್ದೀರಾ?
ಮಹೇಶ್ ಚಂದ್ರ ಗುರು: ನನ್ನನ್ನು ಕೊಲ್ಲುತ್ತಾರೆ ಎಂದು ಭಾವಿಸಿಯೇ ಇಲ್ಲ. ಯೋಚಿಸಿಯೂ ಇಲ್ಲ. ಕೊಲ್ಲುವುದಾದರೆ ಎದುರಿಗೆ ಬಂದು ಕೊಲ್ಲಲಿ. ಯಾವ ಭಯವೂ ಇಲ್ಲ. ನನಗೆ ಹುತಾತ್ಮನಾಗುವುದಕ್ಕೆ ಇಷ್ಟ. ನಾನು ಯಾವುದಕ್ಕೂ ಹೆದರುವುದಿಲ್ಲ. ಮುಂದೆಯೂ ಇವೆಲ್ಲವನ್ನೂ ವಿರೋಧಿಸಿಯೇ ಬದುಕುತ್ತೇನೆ.