ಚಾಮುಂಡಿ ಬೆಟ್ಟದಲ್ಲೇ ನೀರಿಗೆ ಹಾಹಾಕಾರ:ಜಿಟಿಡಿ ನೀಡಿದ ಭರವಸೆಯೇನು?
ಮೈಸೂರು, ಫೆಬ್ರವರಿ 6: ಪ್ರವಾಸಿ ತಾಣಗಳಲ್ಲಿ ಅತ್ಯಂತ ಹೆಸರು ಮಾಡಿರುವ ಚಾಮುಂಡಿ ಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, 10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ಬೆಟ್ಟದ ನಿವಾಸಿಗಳು ಮೈಸೂರು ಉಸ್ತುವಾರಿ ಸಚಿವ ಜಿಟಿ ದೇವೇಗೌಡರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿವಿಧ ಕಾಮಗಾರಿ ಪರಿಶೀಲನೆಗೆಂದು ಬೆಟ್ಟಕ್ಕೆ ಆಗಮಿಸಿದ್ದ ಸಚಿವರಿಗೆ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಒಳಗೊಂಡಂತೆ ಸ್ಥಳೀಯರು ಕುಡಿಯುವ ನೀರಿನ ಸಮಸ್ಯೆಯನ್ನು ವಿವರಿಸಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಬೆಟ್ಟಕ್ಕೆ ಹೊಸ ಪೈಪ್ ಲೈನ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆ ಅನುಮತಿ ಬೇಕಾಗಿರುವುದರಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಈ ವಾರದಲ್ಲಿ ಅನುಮತಿ ಪಡೆದು ಕಾಮಗಾರಿ ಆರಂಭಿಸಲಾಗುತ್ತದೆ. 6 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಗೆ ತಂದು, ನೀರಿನ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದಕ್ಕೆ ಉಂಡುವಾಡಿ ಯೋಜನೆ ಅನುಷ್ಠಾನಗೊಳಿಸುವುದೊಂದೇ ಮಾರ್ಗವಾಗಿದೆ ಎಂದರು.

ಶಾಸಕರಿಂದ ಮನವಿ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಉಂಡುವಾಡಿ ನೀರಿನ ಯೋಜನೆ ಜಾರಿಗೆ ತರುವಂತೆ ಮೈಸೂರಿನ ಎಲ್ಲಾ ಶಾಸಕರು ಮನವಿ ಮಾಡಿದ್ದೆವು. ಆದರೆ ಅದು ಕಾರಣಾಂತರದಿಂದ ಅನುಷ್ಠಾನಗೊಳ್ಳಲಿಲ್ಲ ಎಂದು ಜಿಟಿಡಿ ತಿಳಿಸಿದರು.

ಅನುಷ್ಠಾನ ಮಾಡುವ ಭರವಸೆ
ಸಮ್ಮಿಶ್ರ ಸರ್ಕಾರದಲ್ಲಿ ಉಂಡವಾಡಿ ಯೋಜನೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದೇನೆ ಎಂದ ಜಿ.ಟಿ. ದೇವೇಗೌಡ ಅವರು, ಈಗಾಗಲೇ 50 ಕೋಟಿ ರೂ. ಮೀಸಲಿಟ್ಟು ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಯೋಜನೆಗೆ ಒಟ್ಟು 550 ಕೋಟಿ ವೆಚ್ಚವಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮನವೊಲಿಸಿದ್ದು, ಮುಂದಿನ ಬಜೆಟ್ ನಲ್ಲಿ ಯೋಜನೆ ಅನುಷ್ಠಾನ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಶೋಚನೀಯ ಸ್ಥಿತಿಯಲ್ಲಿವೆ
ಮೈಸೂರಿನ ಸುತ್ತಮುತ್ತ ಕೆಲವು ಖಾಸಗಿ ಬಡಾವಣೆಗಳು ತಲೆ ಎತ್ತಿವೆ. ಈ ಬಡಾವಣೆಗಳಿಗೆ ಬೋರ್ ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಇದೀಗ ನೀರು ಬತ್ತಿ ಹೋಗಿ ನೀರು ಸರಬರಾಜು ಕೂಡ ಕಷ್ಟವಾಗಿದೆ. ಪರಿಣಾಮ ಕೆಲ ಬಡಾವಣೆಗಳು ಶೋಚನೀಯ ಸ್ಥಿತಿಯಲ್ಲಿದೆ.

ಉಂಡುವಾಡಿಯಲ್ಲಿ ನೀರು ಲಭ್ಯ
ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ 70 ಅಡಿಗೆ ಕುಸಿದರೆ ಮೇಳಾಪುರ, ಹೊಂಗಳ್ಳಿಗಳಿಗೆ ನೀರೆತ್ತುವ ಕೇಂದ್ರಕ್ಕೆ ನೀರು ಬರುವುದಿಲ್ಲ. ಆದರೆ ವರ್ಷದ ಎಲ್ಲ ದಿನಗಳಲ್ಲಿಯೂ ಉಂಡುವಾಡಿಯಲ್ಲಿ ನೀರು ಲಭ್ಯವಾಗಲಿದೆ. ನಗರ ಪ್ರದೇಶ ಸೇರಿದಂತೆ ಗ್ರಾಮಗಳಿಗೂ ನೀರು ಪೂರೈಸಬಹುದಾಗಿದೆ. ಮುಂದಿನ 30 ವರ್ಷಗಳವರೆಗೆ ನೀರಿನ ಸಮಸ್ಯೆ ಈ ಯೋಜನೆಯಿಂದ ನೀಗಲಿದೆ ಎಂದು ಜಿಟಿಡಿ ಮಾಹಿತಿ ನೀಡಿದ್ದಾರೆ.












Click it and Unblock the Notifications