ನಾಳೆಯೇ (ಅ.7) ಮೈಸೂರು ದಸರಾ ಉದ್ಘಾಟನೆ: ಹೇಗಿದೆ ಸಿದ್ಧತೆ?
ಮೈಸೂರು, ಅಕ್ಟೋಬರ್ 6: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ದಸರೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ದಸರೆಯ ಅಂತಿಮ ಹಂತದ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ನಾಡಹಬ್ಬದ ಹಿನ್ನೆಲೆಯಲ್ಲಿ ಸಚಿವ ಸಿ.ಸಿ. ಪಾಟೀಲ್ರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ದಸರಾ ಮಹೋತ್ಸವದ ಆಚರಣೆಗೆ ಯಾವುದೇ ವಿಘ್ನ ಬಾರದಂತೆ ಚಾಮುಂಡಿ ದೇವಿಗೆ ಈಡುಗಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅ.7ರಂದು ಚಾಮುಂಡಿ ಬೆಟ್ಟದಲ್ಲಿ ನಡೆಯುವ ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭಕ್ಕೆ ಮಾಡಲಾಗಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲದೇ ಉದ್ಘಾಟನಾ ಸಮಾರಂಭಕ್ಕೆ 100 ಜನರ ಬದಲು 400 ಜನರಿಗೆ ಅವಕಾಶ ನೀಡಿರುವುದಾಗಿ ಮಾಹಿತಿ ನೀಡಿದರು.

ಸಾರ್ವಜನಿಕರ ಪ್ರವೇಶ ನಿರ್ಬಂಧ
ಅಲ್ಲದೇ ಮಾಜಿ ಸಿಎಂ ಎಸ್.ಎಂ. ಕೃಷ್ಣ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಮೈಸೂರು ದಸರಾ ಉದ್ಘಾಟಿಸಲಿದ್ದು, ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ. ಗುರುವಾರದಂದು ಭಕ್ತರು ಹಾಗೂ ಪ್ರವಾಸಿಗರಿಗೆ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ತಾವರೆಕಟ್ಟೆ ಗೇಟ್ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಚಾಮುಂಡಿ ಬೆಟ್ಟದ ನಿವಾಸಿಗಳು, ಉದ್ಘಾಟನಾ ಕಾರ್ಯಕ್ರಮದ ತಯಾರಿ ಕೆಲಸದ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ಕೆ.ಆರ್. ಠಾಣಾ ಪೊಲೀಸರು ಸಾರ್ವಜನಿಕರ ವಾಹನ ತಪಾಸಣೆ ನಡೆಸಿದರು.
ಮೈಸೂರಿಗೆ ಗಣ್ಯರ ದಂಡು ಆಗಮಿಸುತ್ತಿದ್ದು, ಉದ್ಘಾಟಕರಾದ ಎಸ್.ಎಂ. ಕೃಷ್ಣ , ಸಿಎಂ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ್ , ಇಂಧನ ಸಚಿವ ಸುನಿಲ್ ಕುಮಾರ್, ಸಚಿವೆ ಶಶಿಕಲಾ ಜೊಲ್ಲೆ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಅನೇಕರು ಅಗಮಿಸುತ್ತಿದ್ದಾರೆ.

ಗಜಪಡೆ ತಾಲೀಮು ರದ್ದು
ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಬುಧವಾರ ಮಹಾಲಯ ಅಮಾವಾಸ್ಯೆ ಹಿನ್ನೆಲೆ ದಸರಾ ಗಜಪಡೆಗೆ ತಾಲೀಮು ರದ್ದು ಮಾಡಲಾಗಿದೆ. ಅರಮನೆ ಆವರಣದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿತ್ತು. ಇಂದು ಮಹಾಲಯ ಅಮವಾಸ್ಯೆಯ ಹಿನ್ನೆಲೆಯಲ್ಲಿ ಗಜಪಡೆಯ ತಾಲೀಮು ರದ್ದು ಮಾಡಲಾಗಿದೆ. ಅರಮನೆ ಆವರಣದಲ್ಲಿ ಆನೆಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಅರಮನೆ ಆವರಣದ ಒಳಗೆ ಒಂದೆರಡು ಸುತ್ತು ವಾಕಿಂಗ್ ಮಾಡಿದ ಗಜಪಡೆ ನಂತರ ವಿಶ್ರಾಂತಿಗೆ ಜಾರಿವೆ. ಪ್ರತಿ ಅಮಾವಾಸ್ಯೆಯ ಸಮಯದಲ್ಲಿ ಆನೆಗಳಿಗೆ ತಾಲೀಮು ನಡೆಸುವುದಿಲ್ಲ. ನಾಳೆ ಮೈಸೂರು ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 15 ರಂದು ಜಂಬೂ ಸವಾರಿ ಮೆರವಣಿಗೆ ಮೂಲಕ ದಸರಾ ಅಂತ್ಯಗೊಳ್ಳಲಿದೆ.

ಮೃಗಾಲಯಕ್ಕೆ ಭೇಟಿ, ಪರಿಶೀಲನೆ
ಇದಾದ ಬಳಿಕ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್, ಚಾಮರಾಜ ಮೃಗಾಲಯಕ್ಕೆ ಹೊಸದಾಗಿ ವಿದೇಶದಿಂದ ಬಂದಿರುವ ಗೊರಿಲ್ಲಾ ಮತ್ತು ಒರಂಗೂಟ ವೀಕ್ಷಣೆ ಮಾಡಿದರು. ಅ.7ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೃಗಾಲಯಕ್ಕೆ ಹೊಸದಾಗಿ ಆಗಮಿಸಿರುವ ಪ್ರಾಣಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ, ಹೊಸದಾಗಿ ಬಂದಿರುವ ಪ್ರಾಣಿಗಳಿಗೆ ನಿರ್ಮಾಣವಾಗಿರುವ ಗೊರಿಲ್ಲಾ ಮನೆಯನ್ನು ಸಚಿವ ಸೋಮಶೇಖರ್ ಪರಿಶೀಲಿಸಿದರು.
ಈ ನಡುವೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಮೃಗಾಲಯದಲ್ಲಿನ ಆನೆಯೊಂದನ್ನು ದತ್ತು ಪಡೆದರು. ಈ ಸಂದರ್ಭದಲ್ಲಿ ಸಚಿವರಿಗೆ ಶಾಸಕ ಎಲ್. ನಾಗೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿದಂತೆ ಸಾಥ್ ನೀಡಿದರು.

ಆರ್ಎಸ್ಎಸ್ ಒತ್ತಡ ಹೇರುತ್ತಿಲ್ಲ
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ಆರ್ಎಸ್ಎಸ್ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಬಿಜೆಪಿ ಸರ್ಕಾರದ ಆಡಳಿತದ ಮೇಲೆ ಆರ್ಎಸ್ಎಸ್ ಯಾವುದೇ ಒತ್ತಡ ಹೇರುತ್ತಿಲ್ಲ. ಕೇಂದ್ರ ಸರ್ಕಾರದ್ದು ನನಗೆ ಗೊತ್ತಿಲ್ಲ, ಆದರೆ ರಾಜ್ಯ ಸರ್ಕಾರದಲ್ಲಿ ಯಾವುದೇ ಒತ್ತಡವೂ ಇಲ್ಲ. ಕುಮಾರಸ್ವಾಮಿಗೆ ಮಾಹಿತಿ ಕೊರತೆ ಇದ್ದು, ಚುನಾವಣಾ ದೃಷ್ಟಿಯಿಂದ ಹೇಳುತ್ತಿರಬಹುದು ಎಂದು ಟಾಂಗ್ ನೀಡಿದರು.
ಇದೇ ವೇಳೆ ದಸರಾ ಸಿದ್ಧತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನಾ ಸಮಾರಂಭದ ಸಂಪೂರ್ಣ ಸಿದ್ದತೆ ಮುಗಿದಿದೆ. ಮಳೆ ವಾತಾವರಣ ಇರುವ ಹಿನ್ನೆಲೆ ವಾಟರ್ ಪ್ರೂಫ್ ಪೆಂಡಾಲ್ ಹಾಕಲಾಗಿದೆ. ಅಲ್ಲದೇ ಅರಮನೆಯಲ್ಲೂ ನಾಳೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಅಲ್ಲಿಯೂ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ.
ಕೊರೊನಾ ಕಾರಣದಿಂದ ಜಂಬೂಸವಾರಿ ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಸಾರ್ವಜನಿಕರು ಆನ್ಲೈನ್ನಲ್ಲಿ ದಸರಾ ವೀಕ್ಷಣೆ ಮಾಡಬೇಕಿದ್ದು, ಕೇವಲ ಜನಪ್ರತಿನಿಧಿಗಳಿಗೆ, ಪೊಲೀಸರು, ಮಾಧ್ಯಮದವರಿಗೆ ಮಾತ್ರ ಅರಮನೆಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications