ಯುಟಿ ಖಾದರ್ "ಬೆಂಕಿ" ಮಾತಿಗೆ ಪ್ರತಾಪ ಸಿಂಹ ಕಿಡಿ
ಮೈಸೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಕುರಿತು ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯಿಸಿದ್ದಾರೆ. ಯು.ಟಿ.ಖಾದರ್ ಹೇಳಿಕೆಯೇ ಇದಕ್ಕೆಲ್ಲ ಮೂಲಕಾರಣ ಎಂದು ಕಿಡಿಕಾರಿದ್ದಾರೆ.
"ಬಹು ಸಂಖ್ಯಾತರಾಗಿರುವ ಹಿಂದೂಗಳು ಹಾಗೂ ಕ್ರಿಶ್ಚಿಯನ್ನರಿಗೆ ಪಾಕಿಸ್ತಾನದಲ್ಲಿ ತೊಂದರೆಯಾಗುತ್ತಿದೆ. ಆದರೆ ಭಾರತದಲ್ಲಿ ಅಲ್ಪ ಸಂಖ್ಯಾತರಾಗಿರುವ ಮುಸ್ಲಿಂ ಧರ್ಮದವರಿಗೆ ತೊಂದರೆಯಾಗಿಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿ ತುಳಿತಕ್ಕೊಳಗಾದವರಿಗೆ ಆಶ್ರಯಕೊಡುವುದು ಸಿಎಎ ಉದ್ದೇಶ" ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.

"ಮೋದಿ ಹೊಸತನ್ನೇನು ಮಾಡಿದ್ದಾರೆ?"
"ಪರಂಪರೆಯಲ್ಲಿ ಏನು ನಡೆದುಕೊಂಡು ಬಂದಿದೆಯೋ ಅದನ್ನೇ ಮೋದಿ ಮಾಡಿದ್ದಾರೆ. ಹೊಸದಾಗಿ ಏನೂ ಇಲ್ಲ. ಯು.ಟಿ.ಖಾದರ್ ಪ್ರಕಾರ ಅಲ್ಲಿ ತುಳಿತಕ್ಕೊಳಗಾದವರಿಗೆ ಆಶ್ರಯ ನೀಡಬಾರದಾ? ನೀಡಬಾರದು ಎಂದರೆ ಅದನ್ನು ನೇರವಾಗಿ ಹೇಳಲಿ" ಎಂದು ಕಿಡಿಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ನೇರ ಕಾರಣ ಎಂದ ಪ್ರತಾಪ ಸಿಂಹ
"ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ ರಾಜ್ಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ನೇರ ಕಾರಣ. ಯು.ಟಿ.ಖಾದರ್ ಹೇಳಿಕೆಯಿಂದ ಇಬ್ಬರ ಸಾವಿಗೆ ಕಾರಣವಾಗಿದೆ. ಕಾಂಗ್ರೆಸ್ ಯು.ಟಿ.ಖಾದರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಮೈಸೂರಿನಲ್ಲಿ ಗಲಭೆ ಸೃಷ್ಟಿಸಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಮಾತು ಕೇಳದಂತೆ ಮುಸ್ಲಿಮರಿಗೆ ಕರೆ
"ಪ್ರಧಾನಿ ಮೋದಿ ಎಲ್ಲಾ ಸಂದರ್ಭದಲ್ಲೂ ಬಂದು ಮಾತನಾಡಲು ಸಾಧ್ಯವಿಲ್ಲ. ಅವರ ಕೆಲಸ ಮಾತನಾಡಿದರೆ ಸಾಕು. ದೇಶದ ಜನರಿಗೆ ತೊಂದರೆಯಾಗಲ್ಲ ಅಂತ ಹೇಳಿದ್ದಾರೆ. ಅಮಿತ್ ಶಾ ಕೂಡ ಸ್ಪಷ್ಟವಾಗಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಬಿಜೆಪಿಯವರು ಈ ಬಗ್ಗೆ ಅಭಿಯಾನ ಮಾಡುತ್ತೇವೆ. ಮಾಧ್ಯಮಗಳ ಸಹಕಾರ ಕೇಳುತ್ತೇನೆ" ಎಂದರು. "ಮುಸ್ಲಿಮರೇ ನೀವು ಕಾಂಗ್ರೆಸ್ ಮಾತನ್ನು ಕೇಳುವುದನ್ನು ನಿಲ್ಲಿಸಿ. ನಿಮ್ಮನ್ನು ಕಾಂಗ್ರೆಸ್ ನವರು ಮೊಹಲ್ಲದಲ್ಲೇ ಇಟ್ಟಿದ್ದಾರೆ. ಈಗಲಾದರೂ ಸಬ್ ಕಾ ಸಾಥ್ ವಿಕಾಸ್ ಜೊತೆ ಬನ್ನಿ. ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಪರಿಣಾಮ ಕರ್ನಾಟಕದಲ್ಲಿ ಆಗಬಾರದು ಅಂತ 144 ಸೆಕ್ಷನ್ ಹಾಕಲಾಗಿದೆ. 144 ಸೆಕ್ಷನನ್ನು ನಾನಾಗಲಿ ಬಿಜೆಪಿಯವರಿಗಾಗಲಿ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ" ಎಂದರು.

ಪೌರತ್ವ ಕಾಯ್ದೆ ಕುರಿತು ಯು.ಟಿ. ಖಾದರ್ ಹೇಳಿದ್ದೇನು?
ಇತಿಹಾಸದಲ್ಲಿ ಕಾಂಗ್ರೆಸ್ ಮಾಡಿರುವ ದ್ರೋಹವನ್ನು ಮುಚ್ಚಿಕೊಳ್ಳಲು ಅಮಾಯಕ ಮುಸ್ಲಿಮರನ್ನು ಬಲಿಕೊಡುತ್ತಿದ್ದಾರೆ. ಮೋದಿ ಸರ್ಕಾರವಾಗಲಿ, ಯಡಿಯೂರಪ್ಪ ಸರ್ಕಾರವಾಗಲಿ ಮುಸ್ಲಿಂರ ವಿರೋಧಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ ಪ್ರತಾಪ ಸಿಂಹ.
"ಪೌರತ್ವ ಕಾಯ್ದೆ ಜಾರಿಯಾದರೆ ಕರ್ನಾಟಕಕ್ಕೇ ಬೆಂಕಿ ಹಚ್ಚುತ್ತೇವೆ" ಎಂದು ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, "ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇನೆಂದು ನಾನು ಹೇಳಿಲ್ಲ. CAB ಕರ್ನಾಟಕದಲ್ಲಿ ಜಾರಿ ಮಾಡಿದರೆ ತೀವ್ರ ವಿರೋಧ ವ್ಯಕ್ತವಾಗಲಿದೆ ಎಂಬರ್ಥದಲ್ಲಿ ಹೇಳಿದ್ದೇನೆ. ತಪ್ಪಾಗಿ ಅರ್ಥೈಸಿಕೊಂಡು ಕಾಲಹರಣ ಮಾಡುವ ಬದಲು ಇತರ ಕೆಲಸದತ್ತ ಗಮನ ಕೊಡಿ" ಎಂದು ಖಾದರ್ ಟ್ವೀಟ್ ಮಾಡಿದ್ದರು.












Click it and Unblock the Notifications