ರೋಹಿಣಿ ಸಿಂಧೂರಿ v/s ಸಂಸದ ಪ್ರತಾಪ್ ಸಿಂಹ: ಸ್ವಿಮ್ಮಿಂಗ್ ಪೂಲ್ ಲೆಕ್ಕ ಎಲ್ಲಿ?
ಮೈಸೂರು, ಜೂನ್ 1: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿ ಮುಂದುವರಿದಿದ್ದು, ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೀಡಿರುವ ಲೆಕ್ಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಪ್ರತಾಪ್ ಸಿಂಹ, ಸಿಮ್ಮಿಂಗ್ ಪೂಲ್ ಲೆಕ್ಕ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.
Recommended Video
ಮಂಗಳವಾರದಂದು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ""ನಾನು ಬಹಳ ಲೆಕ್ಕ ಕೇಳಿದ್ದೆ, ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರಾ?. ಆದರೆ ಯಾವುದೋ 2, 4, 5 ಅಂತ ರೌಂಡ್ ಫಿಗರ್ ಲೆಕ್ಕ ಕೊಡುವುದಲ್ಲ. ಲೆಕ್ಕ ಕೊಡುವುದಾದರೆ ವಸ್ತು ಹಾಗೂ ಖರ್ಚಿನ ಲೆಕ್ಕ ಕೊಡಲಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ, ಸ್ಟೆಪ್ಡೌನ್ ಆಸ್ಪತ್ರೆಗಳ ಬಗ್ಗೆಯೂ ನಾನು ಕೇಳಿದ್ದೆ, ಅದಕ್ಕೆ ಉತ್ತರ ಕೊಟ್ಟಿದ್ದಾರಾ?. ಸ್ವಿಮ್ಮಿಂಗ್ ಪೂಲ್ ಲೆಕ್ಕ ಕೇಳಿದ್ದೆ, ಅದಕ್ಕೆ ಕೊಟ್ಟಿದ್ದಾರಾ?. ಸುಮ್ಮನೆ ಹೋಟೆಲ್ಗಳಿಗೆ 4 ಕೋಟಿ ರೂ. ಅಂತ ಬರೆಯೋದಲ್ಲ. ಯಾವುದಕ್ಕೆ ಎಷ್ಟು ಅಂತ ಬಿಲ್ ಕೊಡಬೇಕಲ್ವಾ. ಅಭಿರಾಂ ಶಂಕರ್ ಇದ್ದಾಗ ಅವರ ಬಳಿ ಲೆಕ್ಕವನ್ನೇ ಕೇಳಿಲ್ಲ. ಅವರ ಬಳಿ ಪಾರದರ್ಶಕತೆ ಇತ್ತು ಅದಕ್ಕೆ ಕೇಳಲಿಲ್ಲ. ಆದರೆ ಈಗಿನ ಜಿಲ್ಲಾಧಿಕಾರಿಗಳ ಬಳಿ ಪಾರದರ್ಶಕತೆ ಕಾಣುತ್ತಿಲ್ಲ. ಹೀಗಾಗಿ ಲೆಕ್ಕ ಕೇಳುತ್ತಿದ್ದೇನೆ ಎಂದರು.
ಅಲ್ಲದೇ, ನಾನು ಇನ್ನು ಮುಂದೆ ಯಾರ ಬಗ್ಗೆ ಮಾತಾಡಲ್ಲ. ನನಗೆ ನೀಡಿರುವ ಜವಾಬ್ದಾರಿ ನಾನು ನಿಭಾಹಿಸುತ್ತೇನೆ. ವ್ಯಾಕ್ಸಿನ್ ಜವಾಬ್ದಾರಿಯನ್ನು ನನ್ನ ಮೇಲೆ ಎಳೆದುಕೊಂಡೆ ಮಾಡುತ್ತೇನೆ. ನನ್ನ ಕೆಲಸಕ್ಕೆ ಬೆರಳು ತೋರಿಸಿ ಯಾರೂ ಮಾತನಾಡಬಾರದು ಅಷ್ಟೇ ಎಂದು ತಮ್ಮ ವಿರುದ್ಧ ಬೊಟ್ಟು ಮಾಡಿ ಮಾತನಾಡುವ ಸ್ಥಳೀಯ ಜನಪ್ರತಿನಿಧಿಗಳಿಗೆ ಟಾಂಗ್ ನೀಡಿದರು.
ಇದೇ ವೇಳೆ ಮೈಸೂರು ಜಿಲ್ಲೆಯ ಸಾವಿನ ಲೆಕ್ಕದಲ್ಲಿ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂಬ ಶಾಸಕ ಸಾ.ರಾ ಮಹೇಶ್ ಆರೋಪದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನನಗೂ ಅನುಮಾನವಿದೆ. ನಾವು ಹಲವೆಡೆ ಪ್ರವಾಸ ಮಾಡುತ್ತಿರುತ್ತವೆ. ಆಗ ಜನರು ಹಲವು ದೂರುಗಳನ್ನು ಹೇಳುತ್ತಿರುತ್ತಾರೆ. ನಾವೇ ಬೆಡ್ ಕೊಡಿಸಿದ ರೋಗಿಗಳಿಗೆ ಐಸಿಯು ಸಿಗದೆ ಸತ್ತಿದ್ದಾರೆ ಅಂತಾರೆ. ಆದರೆ ಜಿಲ್ಲಾಡಳಿತದ ಲೆಕ್ಕಕ್ಕೂ, ಅಂತ್ಯಸಂಸ್ಕಾರ ನಡೆಯುತ್ತಿರುವುದಕ್ಕೂ ವ್ಯತ್ಯಾಸ ಇದೆ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.