ಘಟನೆಗೆ ಜಿಲ್ಲಾಡಳಿತವೇ ಕಾರಣ : ಪ್ರತಾಪ್ ಸಿಂಹ
ಮೈಸೂರು, ಡಿಸೆಂಬರ್ 04 : ಜಿಲ್ಲಾಧಿಕಾರಿ ಆಜ್ಞೆ ಉಲ್ಲಂಘಿಸಿ, ಪೊಲೀಸರನ್ನು ನಿಂದಿಸಿ, ಬ್ಯಾರಿಕೆಡ್ ಮೇಲೆ ಕಾರು ಚಲಾಯಿಸಿಕೊಂಡು ಹೋಗಿ ವಿವಾದ ಎಬ್ಬಿಸಿದ್ದ ಪ್ರತಾಪ್ ಸಿಂಹ ಅವರು ಘಟನೆ ಕುರಿತು ತಮ್ಮ ನಿಲುವು ವ್ಯಕ್ತಪಡಿಸಲು ಇಂದು (ಡಿಸೆಂಬರ್ 04) ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹುಣಸೂರಿನಲ್ಲಿ ನಿನ್ನೆ(ಡಿಸೆಂಬರ್ 04) ನಡೆದ ಘಟನೆಗೆ ಮೈಸೂರು ಜಿಲ್ಲಾಡಳಿತವೇ ನೇರ ಹೊಣೆ ಎಂದರು. ಜಿಲ್ಲಾಡಳಿತದ ವೈಫಲ್ಯದಿಂದಲೇ ಈ ರೀತಿಯ ಅಹಿತಕರ ಘಟನೆ ನಡೆದದ್ದು ಎಂದ ಅವರು ಮೈಸೂರು ಎಸ್ಪಿ ರವಿ ಚೆನ್ನಣ್ಣನವರ್ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ, ಅವರು ಸರ್ಕಾರದ ಆಳು ಎಂದು ಟೀಕಿಸಿದರು.

ಪ್ರತಾಪ್ ಸಿಂಹ ಅವರ ನಡೆಯನ್ನು ಗೂಂಡಾ ಸಂಸ್ಕೃತಿ ಎಂದಿದ್ದ ಕಾಂಗ್ರೆಸ್ ಮುಖಂಡರ ಟೀಕೆಗೆ ಉತ್ತರಿದ ಪ್ರತಾಪ್ ಸಿಂಹ 'ಗೂಂಡಾ ಸಂಸ್ಕೃತಿ ನನ್ನದಲ್ಲ, ಸಿ.ಎಂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ಅಪ್ಪ ಗುಂಡೂರಾವ್ ಅವರು ಗೂಂಡಾ ರಾಜಕೀಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಾರಿನಲ್ಲಿ ಬ್ಯಾರಿಕೆಡ್ ಗುದ್ದಿ ಹೋದದನ್ನು ಸಮರ್ಥನೆ ಮಾಡಿಕೊಂಡ ಅವರು 'ನಿನ್ನೆ ಪೊಲೀಸರು ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದರು ಹೀಗಾಗಿ ನಾನೆ ನನ್ನ ಕಾರಿನಲ್ಲಿ ಬಲವಂತವಾಗಿ ತೆರಳಬೇಕಾಯ್ತು' ಎಂದರು.
ಅಮಿತ್ ಷಾ ಅವರ ಆಣತಿಯಂತೆ ಬೇಕೆಂದೇ ಗದ್ದಲ ಸೃಷ್ಠಿ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಪ್ರತಾಪ್ ಸಿಂಹ "ಘಟನೆಗೂ ಅಮಿತ್ ಷಾ ಅವರಿಗೂ ಸಂಬಂಧವಿಲ್ಲ, ಅವರು ಎಂದೂ ಸಮಾಜದ ಶಾಂತಿ ಕದಡಿ ಉಗ್ರ ಹೋರಾಟ ಮಾಡುವಂತೆ ಸೂಚನೆ ನೀಡಿಲ್ಲ' ಎಂದರು. ಆದರೆ ಈ ಹಿಂದೆ ಪ್ರತಾಪ್ ಸಿಂಹ ಅವರೇ ಮಾಡಿರುವ ವಿಡಿಯೋದಲ್ಲಿ ಅಮಿತ್ ಷಾ ಉಗ್ರ ಹೋರಾಟ ಮಾಡಿರೆಂದು ಸೂಚನೆ ನೀಡಿದ್ದಾರೆ ಎಂದು ಹೇಳಿದ್ದರು.
ಹುಣಸೂರಿನ ಇಂದಿನ ಸ್ಥಿತಿ ಹೀಗಿದೆ...
ಇನ್ನು ನಿನ್ನೆ ಹನುಮ ಜಯಂತಿ ಆಚರಣೆ ವೇಳೆ ಹುಣಸೂರಿನಲ್ಲಿ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮುನೇಶ್ವರ ಕಾವಲ್ ಮೈದಾನದಲ್ಲಿ ಇರಿಸಲಾಗಿದ್ದ ಹನುಮನ ಮೂರ್ತಿಯನ್ನು ತೆರವುಗೊಳಿಸಲಾಗಿದೆ. ಕಾವಲ್ ಮೈದಾನದಿಂದ ಬ್ರಾಹ್ಮಣ ಬೀದಿಯಲ್ಲಿರುವ ರಂಗನಾಥ ದೇವಾಲಯಕ್ಕೆ ಹನುಮನ ಬೃಹತ್ ಮೂರ್ತಿಯನ್ನು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಟ್ರ್ಯಾಕ್ಟರ್ ಗಳ ಮೂಲಕ ಸ್ಥಳಾಂತರ ಮಾಡಲಾಗಿದೆ.
ನಿನ್ನೆ ನಡೆದ ಗಲಾಟೆಯಲ್ಲಿ ಕಲ್ಲು ತೂರಾಟ ನಡೆದಿದ್ದ ಹುಣಸೂರು ಪಟ್ಟಣದಲ್ಲಿ ಇಂದು ಬಂದ್ ಗೆ ಕರೆ ನೀಡಲಾಗಿದೆ. ಬೆಳಗ್ಗೆಯಿಂದಲೇ ಹುಣಸೂರು ಪಟ್ಟಣ ಬಿಕೋ ಎನ್ನುತ್ತಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಸರ್ಕಾರಿ ಬಸ್ಗಳು ರಸ್ತೆಗೆ ಇಳಿದಿಲ್ಲ. ಮುಂಜಾಗ್ರತಾ ಕ್ರಮವಾಗಿ ಹುಣಸೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.












Click it and Unblock the Notifications