ಬಿಟ್ಟೂ ಬಿಡದೇ ಕಾದು ಕುಳಿತು ಜಿಟಿಡಿ ಭೇಟಿಯಾದ ಸಂಸದ ಪ್ರಜ್ವಲ್ ರೇವಣ್ಣ
Recommended Video
ಮೈಸೂರು, ನವೆಂಬರ್ 26: ಮಾಜಿ ಸಚಿವ ಜಿ.ಟಿ.ದೇವೇಗೌಡರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಜಿಟಿಡಿ ಭೇಟಿಗಾಗಿ ಕಾದು, ಕಡೆಗೆ ಜಿಟಿಡಿ ಇರುವ ಕಡೆಗೇ ತೆರಳಿ ಶುಭಾಶಯ ಸಲ್ಲಿಸಿದರು.
ಜಿ.ಟಿ. ದೇವೇಗೌಡರ 70ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಜಿಟಿಡಿ ಅವರನ್ನು ಭೇಟಿಯಾಗಲು ಸಂಸದ ಪ್ರಜ್ವಲ್ ರೇವಣ್ಣ, ಮೈಸೂರಿನ ವಿಜಯ ನಗರದಲ್ಲಿರುವ ಜಿಟಿಡಿ ನಿವಾಸಕ್ಕೆ ಸೋಮವಾರ ಆಗಮಿಸಿದ್ದರು. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿ.ಟಿ.ದೇವೇಗೌಡ ಅವರು ಮನೆಯಿಂದ ಹೊರ ಹೋಗಿದ್ದರು. ಹೀಗಾಗಿ ಪ್ರಜ್ವಲ್ ರೇವಣ್ಣ ಅವರ ಭೇಟಿಗೆ ಜಿಟಿಡಿ ಲಭ್ಯವಾಗಲಿಲ್ಲ. ಹುಟ್ಟುಹಬ್ಬದ ಶುಭಾಶಯ ಕೋರಲು ಸಂಸದ ಪ್ರಜ್ವಲ್, ಜಿಟಿಡಿ ಅವರಿಗಾಗಿ ಮನೆಯಲ್ಲೇ ಕಾದು ಕುಳಿತರು.
ಉಪ ಚುನಾವಣೆ ಇನ್ನೇನು ಸಮೀಪಿಸುತ್ತಿದ್ದು, ಯಾರಿಗೂ ಬೆಂಬಲ ನೀಡದೇ ತಟಸ್ಥವಾಗಿರುತ್ತೇನೆ ಎಂದು ಹೇಳಿರುವ ಜಿಟಿಡಿ ಮನವೊಲಿಸುವ ಉದ್ದೇಶವೂ ಇದರ ಹಿಂದಿರಬಹುದು. ಆದರೆ ಇದಾವುದಕ್ಕೂ ಅಲ್ಲದೇ ಕೇವಲ ಶುಭಾಶಯ ತಿಳಿಸಲು ಬಂದಿರುವುದಷ್ಟೇ ಆಗಿ ಪ್ರಜ್ವಲ್ ತಿಳಿಸಿದ್ದಾರೆ.

5 ನಿಮಿಷವಾದರೂ ಭೇಟಿ ಆಗಬೇಕು
ಜಿ.ಟಿ.ದೇವೇಗೌಡರ ಭೇಟಿಗಾಗಿ ಹಲವು ಹೊತ್ತಿನವರೆಗೂ ಜಿಟಿಡಿ ಮನೆಯಲ್ಲೇ ಕಾದು ಕುಳಿತ ಪ್ರಜ್ವಲ್, ಕೊನೆಗೆ ದೂರವಾಣಿಯಲ್ಲಿ ಜಿಟಿಡಿ ಜೊತೆ ಮಾತನಾಡಿ, ನೀವು ಎಲ್ಲಿದ್ದೀರಾ, ಅಲ್ಲಿಗೆ ಬರ್ತೇನೆ, 5 ನಿಮಿಷವಾದರೂ ನಿಮ್ಮನ್ನು ಭೇಟಿಯಾಗಬೇಕು ಎಂದು, ಜಿಟಿಡಿ ಇರುವ ವಿಳಾಸ ತಿಳಿದರು.

ಸ್ವಗ್ರಾಮದಲ್ಲಿ ಭೇಟಿಯಾದರು
ಹಲವು ಹೊತ್ತಿನವರೆಗೂ ಕಾದು, ಕಡೆಗೆ ಜಿಟಿಡಿ ಇರುವ ಸ್ಥಳದ ಮಾಹಿತಿ ತಿಳಿದ ಸಂಸದ ಪ್ರಜ್ವಲ್, ಜಿ.ಟಿ.ದೇವೇಗೌಡರ ಸ್ವಗ್ರಾಮ, ಗುಂಗ್ರಾಲ್ ಛತ್ರಕ್ಕೆ ಆಗಮಿಸಿ, ಜಿಟಿಡಿ ಅವರನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಪ್ರಜ್ವಲ್ ರೇವಣ್ಣ ಅವರಿಗೆ ಸ್ಥಳೀಯ ಜೆಡಿಎಸ್ ಶಾಸಕರು ಸಾಥ್ ನೀಡಿದರು.

ರಾಜಕೀಯವಾಗಿ ಚರ್ಚೆ ನಡೆಸಿಲ್ಲ
ಜಿ.ಟಿ.ದೇವೇಗೌಡರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್, ಜಿ.ಟಿ.ದೇವೇಗೌಡರ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಸಲ್ಲಿಸಿ, ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಇದರ ಹೊರತು ಚುನಾವಣೆ ವಿಚಾರವಾಗಲಿ ಅಥವಾ ಪ್ರಚಾರಕ್ಕೆ ಬನ್ನಿ ಎಂದು ನಾವು ಕರೆಯಲಿಲ್ಲ.
ಅವರಿಗೆ ಕಾಲು ನೋವಿದೆ ಮತ್ತು ಕೈಗೆ ಏಟಾಗಿದೆ. ಅವರು ವಿಶ್ರಾಂತಿ ಪಡೆಯುತ್ತಾರೆ. ಅಸಮಾಧಾನದ ಬಗ್ಗೆ ದೊಡ್ಡವರು ಕುಳಿತು ತೀರ್ಮಾನ ಮಾಡುತ್ತಾರೆ.
ಚುನಾವಣೆಯಲ್ಲಿ ನಾನೇನು ಮಾಡಬೇಕು ಅದನ್ನು ಮಾಡುತ್ತೇನೆ ಎಂದು ಜಿಟಿಡಿ ಅವರು ಹೇಳಿದ್ದಾರೆ ಎಂದರು.

ಚುನಾವಣೆಗೆ ಬನ್ನಿ ಎಂದರು
ಸಂಸದ ಪ್ರಜ್ವಲ್ ರೇವಣ್ಣ ಭೇಟಿ ಬಳಿಕ ಮಾತನಾಡಿದ ಜಿ.ಟಿ.ದೇವೇಗೌಡ, ಪ್ರಜ್ವಲ್ ಅವರು ಚುನಾವಣೆಗೆ ಬನ್ನಿ ಅಥವಾ ನಿಮ್ಮ ಮಗನನ್ನಾದರೂ ಕಳುಹಿಸಿಕೊಡಿ ಎಂದು ಕೇಳಿಕೊಂಡರು. ಆದರೆ ಅವರಿಗೆ ನಾನು ಯಾವುದೇ ಭರವಸೆ ಕೊಟ್ಟಿಲ್ಲ. ಸದ್ಯ ತಟಸ್ಥವಾಗಿದ್ದೇನೆ. ಇನ್ನು 10 ದಿನ ಇದೆ ಏನಾಗುತ್ತೆ ನೋಡೋಣ. ನನ್ನ ಬೆಂಬಲಿಗರಿಗೂ ನಾನು ಏನೂ ಹೇಳಿಲ್ಲ. ಮೂರು ಪಕ್ಷಗಳಿಂದ ಒತ್ತಡ ಇರೋದು ನಿಜ. ಆದರೆ ನಾನು ಯಾರಿಗು ಏನು ಹೇಳಿಲ್ಲ ಎಂದರು.












Click it and Unblock the Notifications