ಜಿಟಿ ದೇವೇಗೌಡರಿಗೆ ಬಿಜೆಪಿಗೆ ಸ್ವಾಗತ; ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲು
ಮೈಸೂರು, ಜುಲೈ 15: ಮೈತ್ರಿ ಸರಕಾರದ ನಡೆಗೆ ಬೇಸತ್ತು ರಾಜೀನಾಮೆ ನೀಡಿ, ಹತ್ತಕ್ಕೂ ಹೆಚ್ಚು ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದಾರೆ. ಸರಕಾರ ಉಳಿಯುವುದೋ ಕೊನೆಯಾಗುವುದೋ ಯಾವುದನ್ನೂ ಊಹಿಸಲು ಸಾಧ್ಯವಾಗುತ್ತಿಲ್ಲ. ದಿನಕ್ಕೆ ಒಬ್ಬರ ರಾಜೀನಾಮೆ, ಓಲೈಕೆ ಕಸರತ್ತುಗಳು ಇನ್ನೂ ನಿಂತಿಲ್ಲ.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಚಿವ ಜಿ.ಟಿ.ದೇವೇಗೌಡರನ್ನು ಬಿಜೆಪಿಗೆ ಆಹ್ವಾನಿಸುವ ಪೋಸ್ಟ್ ಗಳು ವೈರಲ್ ಆಗುತ್ತಿವೆ. ಜೆಡಿಎಸ್ ಮುಖಂಡ- ಸಚಿವ ಜಿ.ಟಿ.ದೇವೇಗೌಡರು ಜೆಡಿಎಸ್ ತೊರೆದು ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿ, ಕಮಲ ಪಾಳಯದ ಕಾರ್ಯಕರ್ತರು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಸಂದೇಶ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಅಷ್ಟೇ ಅಲ್ಲ, ಅಪ್ಪ- ಮಕ್ಕಳ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿಗೆ ಮರಳಿ ಬರುತ್ತಿರುವ ಜಿ.ಟಿ.ದೇವೇಗೌಡರಿಗೆ ಸುಸ್ವಾಗತ. ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜೀ ದೇಶಕ್ಕೆ ನೀಡುತ್ತಿರುವ ಅಪಾರ ಯೋಜನೆಗಳನ್ನು ಇಷ್ಟಪಟ್ಟು ಬಿಜೆಪಿಗೆ ಸೇರುತ್ತಿರುವ ಜಿಟಿಡಿ ಅವರಿಗೆ ಸುಸ್ವಾಗತ ಎಂಬ ಸಂದೇಶ ಹರಿಬಿಟ್ಟಿದ್ದಾರೆ.

ನಿಮ್ಮ ಪುತ್ರ ಹರೀಶ್ ಗೌಡರಿಗೆ ಚುನಾವಣೆ ಟಿಕೆಟ್ ನೀಡದ ಜೆಡಿಎಸ್ ಪಕ್ಷ ಇದ್ದೂ ಸತ್ತಂತೆ. ಸಿದ್ದರಾಮಯ್ಯರನ್ನು ಸೋಲಿಸಿದ ನಿಮ್ಮನ್ನು ಜೆಡಿಎಸ್ ಸರಿಯಾಗಿ ನೋಡಿಕೊಂಡಿಲ್ಲ. ಹುಣಸೂರಿನಲ್ಲಿ ನಿಮ್ಮ ಮಗನಿಗೆ ಟಿಕೆಟ್ ನೀಡದೆ ಮೋಸ ಮಾಡಲಾಗಿದೆ ಎಂದು ಪೋಸ್ಟ್ ಮಾಡಲಾಗಿದೆ.
ಆದರೆ, ಇದ್ಯಾವುದೂ ಗೊತ್ತಿಲ್ಲ ಎನ್ನುತ್ತಿದ್ದಾರೆ ಜಿ.ಟಿ.ದೇವೇಗೌಡ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಪೋಸ್ಟ್ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಜೆಡಿಎಸ್ ಬಿಟ್ಟು ಯಾವ ಪಕ್ಷವನ್ನೂ ಸೇರುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications