ಮೈಸೂರಿನ ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ ಡಿಸಿಪಿ
ಮೈಸೂರು, ಏಪ್ರಿಲ್ 8; ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು ಮೈಸೂರಿನಲ್ಲಿ ಕೆಲವೊಂದು ಬಸ್ಗಳು ರಸ್ತೆಗಿಳಿದಿದ್ದರೂ ಖಾಸಗಿ ಬಸ್ಗಳು ಓಡಾಟ ಮುಂದುವರೆಸಿವೆ. ಇದರಿಂದ ಪ್ರಯಾಣಿಕರ ಸಮಸ್ಯೆ ಒಂದಷ್ಟು ಕಡಿಮೆಯಾಗಿದ್ದರೂ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಮಾತ್ರ ಕೇಳಿ ಬರುತ್ತಲೇ ಇದೆ.
ನಗರದ ಗ್ರಾಮಾಂತರ ಬಸ್ ನಿಲ್ದಾಣದಿಂದ ಕೆಲವು ಸಾರಿಗೆ ಬಸ್ಗಳು ಸಂಚರಿಸಿದ್ದರೂ ಖಾಸಗಿ ಬಸ್ಗಳು ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟು ಪ್ರಯಾಣಿಕರನ್ನು ಅಗತ್ಯ ಸ್ಥಳಗಳಿಗೆ ಕರೆದೊಯ್ಯುತ್ತಿವೆ. ಈಗಾಗಲೇ ಬಸ್ ನಿಲ್ದಾಣದಿಂದ ಖಾಸಗಿ ಬಸ್ಗಳು ಬೆಂಗಳೂರು, ಚಾಮರಾಜನಗರ, ಮಂಡ್ಯ ಮೊದಲಾದ ಕಡೆಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ.
ಸಾರಿಗೆ ನೌಕರರ ಮುಷ್ಕರ; ಖಾಸಗಿ ಬಸ್ಗಳಿಗೆ ದರ ನಿಗದಿ ಮಾಡಿದ ಸರ್ಕಾರ
ಇನ್ನೊಂದೆಡೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಡಿಸಿಪಿ ಗೀತಾ ಪ್ರಸನ್ನ ಅವರು ಪರಿಶೀಲನೆ ನಡೆಸಿದ್ದು, ಪ್ರಯಾಣಿಕರಿಂದ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಅಧಿಕ ಹಣ ವಸೂಲಿ ಮಾಡುವ ಕುರಿತಂತೆ ದೂರುಗಳು ಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಾರಿಗೆ ಮುಷ್ಕರ; ವಿಶೇಷ ರೈಲುಗಳ ವೇಳಾಪಟ್ಟಿ
ಬೆಂಗಳೂರು ನಗರದಿಂದ ವಿವಿಧ ಜಿಲ್ಲೆಗಳಿಗೆ ತೆರಳುವ ಖಾಸಗಿ ಬಸ್ಗಳಿಗೆ ಸಾರಿಗೆ ಇಲಾಖೆಯೇ ದರವನ್ನು ನಿಗದಿ ಮಾಡಿದೆ. ಖಾಸಗಿ ಬಸ್ ಮಾಲೀಕರು ಹೆಚ್ಚಿನ ದರವನ್ನು ಪಡೆಯುತ್ತಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಸಾರಿಗೆ ನೌಕರರ ಮುಷ್ಕರ; ಸರ್ಕಾರವೇ ಹೊಣೆ ಎಂದ ಸಿದ್ದರಾಮಯ್ಯ
ಬಸ್ ನಿಲ್ದಾಣದಲ್ಲಿ ಪ್ರತಿಭಟನೆ
ರಾಜ್ಯದಲ್ಲಿ ಬಸ್ ಸಂಚಾರ ಮುಷ್ಕರದಿಂದ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಬಸ್ ಸಂಚಾರ ಪ್ರಾರಂಭಿಸುವಂತೆ ಕರ್ನಾಟಕ ಪ್ರಜ್ಞಾವಂತ ನಾಗರೀಕರ ವೇದಿಕೆಯ ಸದಸ್ಯರು ಪ್ರಯಾಣಿಕರ ಪರದಾಟ ನಿಲ್ಲಲಿ, ನೌಕರರು ಮುಷ್ಕರ ವಾಪಸ್ ಪಡೆಯಲಿ ಬಸ್ ನಿಲ್ದಾಣಕ್ಕೆ ಬಸ್ ಬರಲಿ ಎಂಬ ಮನವಿಯನ್ನೊಳಗೊಂಡ ಫಲಕ ಹಿಡಿದು ಮೈಸೂರು ನಗರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ಮಾಡಿದರು.
ಬಸ್ ಸಂಚಾರ ಸ್ಥಗಿತ ಸರಿಯಲ್ಲ
ಕರ್ನಾಟಕ ಪ್ರಜ್ಞಾವಂತ ನಾಗರಿಕರ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಮಾತನಾಡಿ, "ಕರ್ನಾಟಕದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ನೌಕರರು ಸೇರಿದಂತೆ ರಾಜ್ಯದ ಶೇ.50ರಷ್ಟು ಜನ ತಮ್ಮ ದಿನನಿತ್ಯದ ಕೆಲಸಗಳಿಗೆ ಸಾರಿಗೆ ಬಸ್ ಗಳನ್ನು ಅವಲಂಬಿಸಿದ್ದಾರೆ. ಬಸ್ ಸಂಚಾರ ಸ್ಥಗಿತ ಮಾಡಿ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ" ಎಂದರು.
ಹಕ್ಕೋತ್ತಾಯ ಪ್ರತಿಯೊಬ್ಬರ ಹಕ್ಕು
"ಸಾರ್ವಜನಿಕರ ಕ್ಷೇತ್ರದಲ್ಲಿ ಶ್ರಮಿಸುವ ವೈದ್ಯರು, ಶಿಕ್ಷಕರು ಬ್ಯಾಂಕ್ ನೌಕರರು ಸಹ ವಿವಿಧ ಸವಲತ್ತಿನ ಬೇಡಿಕೆಗಾಗಿ ಪ್ರತಿಭಟಿಸಿದ್ದನ್ನು ಕಂಡಿದ್ದೇವೆ, ಹಕ್ಕೊತ್ತಾಯ ಪ್ರತಿಯೊಬ್ಬ ನಾಗರಿಕರ ಹಕ್ಕು, ಬೇಡಿಕೆ ಕೇಳಲು ಕಾನೂನಾತ್ಮಕವಾಗಿ ನಾನಾ ಸ್ವರೂಪಗಳಿವೆ, ಲಕ್ಷಾಂತರ ಸಾರ್ವಜನಿಕರು ಪ್ರಯಾಣಿಕರು ಪರದಾಡುವಂತೆ ಮಾಡಿರುವುದು ಸರಿಯಲ್ಲ" ಎಂದು ಅಜಯ್ ಶಾಸ್ತ್ರಿ ಹೇಳಿದರು.
ಮುಷ್ಕರ ಕೈ ಬಿಡುವಂತೆ ಮನವಿ
ಕೊರೋನಾ ಬಂದ ಬಳಿಕ ಲಾಕ್ ಡೌನ್ ನಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ವ್ಯಾಪಾರ ವಹಿವಾಟು ಇಲ್ಲದೆ ಬಹಳಷ್ಟು ಉದ್ಯಮಗಳು ನಷ್ಟದಲ್ಲಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ಹಿರಿಯ ನಾಗರಿಕರು ಆಸ್ಪತ್ರೆಗೆ ತೆರಳಲು ತೊಂದರೆಯಾಗುತ್ತಿದೆ. ಆದ್ದರಿಂದ ನೌಕರರು ಮುಷ್ಕರ ಕೈಬಿಡುವಂತೆ ಪ್ರಯಾಣಿಕರ ಪರವಾಗಿ ನೌಕರರಿಗೆ ಮನವಿಯನ್ನು ಮಾಡಲಾಯಿತು.