Mangaluru Blast Case: ಮೈಸೂರಿನಲ್ಲಿ ಶಂಕಿತ ಉಗ್ರ ಶಾರಿಕ್ ಸಹಚರನ ಬಂಧನ
ಮೈಸೂರು, ನವೆಂಬರ್ 21: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಇಟ್ಟು ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಶಾರಿಕ್ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೈಸೂರಿನಲ್ಲಿ ವಾಸಿಸುತ್ತಿದ್ದ. ಈತನ ಬಾಡಿಗೆ ಮನೆಗೆ ಪೊಲೀಸರು ಭೇಟಿ ನೀಡಿ ಸಂಪೂರ್ಣವಾಗಿ ಪರಿಶೀಲಿಸಿದರು. ಲೋಕನಾಯಕನಗರದ ರೂಂನಲ್ಲಿ ಉಗ್ರನ ಜೊತೆ ವಾಸವಿದ್ದ ತಾರಿಖ್ ಎಂಬ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಆಟೋ ಸ್ಫೋಟ ಪ್ರಕರಣ: ಕೊಯಮತ್ತೂರಿನಲ್ಲಿ ಸಿಮ್ ಖರೀದಿಸಿದ್ದ ಆರೋಪಿ ಶಾರಿಕ್
ಮಂಗಳೂರಿನ ನಾಗುರಿಯಲ್ಲಿ ಆಟೋದೊಳಗೆ ಸ್ಫೋಟಿಸಿದ ಕುಕ್ಕರ್ ಬಾಂಬ್ ಅನ್ನು ಮೈಸೂರಿನಿಂದ ಮಂಗಳೂರಿಗೆ ಬಸ್ನಲ್ಲಿ ತೆಗೆದುಕೊಂಡು ಹೋಗಿದ್ದ ಎಂದು ತಿಳಿದು ಬಂದಿದೆ. ಮನೆ ಮಾಲೀಕರು, ನೆರೆಹೊರೆಯವರಿಂದಲೂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನೂ ಶಾರಿಕ್ ಮೈಸೂರು ನಗರದ ಅಗ್ರಹಾರದಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲ ತಿಂಗಳು ಮೊಬೈಲ್ ರಿಪೇರಿ ತರಬೇತಿ ಪಡೆದಿದ್ದ ಎಂಬುದು ಗೊತ್ತಾಗಿದೆ. ಅಲ್ಲಿಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಮೇಟಗಳ್ಳಿ ಬಳಿಯ ಲೋಕ ನಾಯಕ ನಗರದ ಸಂಜೀವಿನಿ ರಸ್ತೆಯಲ್ಲಿನ ಬಾಡಿಗೆ ಮನೆಯಲ್ಲಿ ಕೆಲ ತಿಂಗಳಿನಿಂದ ವಾಸವಿದ್ದ. ಮನೆ ಪಡೆಯುವಾಗ ತಾನು ಪ್ರೇಮ್ರಾಜ್ ಎಂದು ಹೇಳಿಕೊಂಡಿದ್ದು, ಹುಬ್ಬಳ್ಳಿ ವಿಳಾಸದ ನಕಲಿ ಆಧಾರ್ ಕಾರ್ಡ್ ನೀಡಿದ್ದ. ಶಂಕಿತ ಬಾಡಿಗೆ ಪಡೆದಿರುವ ಮನೆಯಲ್ಲಿ ಶೋಧ ನಡೆಸಿದ ಪೊಲೀಸರಿಗೆ ಸರ್ಕಿಟ್ ಬೋರ್ಡ್, ಬೋಲ್ಟ್, ಬ್ಯಾಟರಿ, ಮೊಬೈಲ್, ವುಡನ್ ಪೌಡರ್, ಅಲ್ಯೂಮಿನಿಯಂ, ಮಲ್ಟಿ ಮೀಟರ್, ವೈರ್, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳು, ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಫಿನೋ ಡೆಬಿಟ್ ಕಾರ್ಡ್ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ರೈಲ್ವೆ ಉದ್ಯೋಗಿ ಎಂದು ನಕಲಿ ಐಡಿ ಕಾರ್ಡ್ ನೀಡಿದ್ದ ತಾರೀಖ್, ಕಳೆದ ತಿಂಗಳ ಬಾಡಿಗೆ ನೀಡಿರಲಿಲ್ಲ. ಮನೆ ಮಾಲೀಕರು ಐದಾರು ಬಾರಿ ಬಾಡಿಗೆ ನೀಡುವಂತೆ ಕೇಳಿದರೂ ಸಂಬಳ ಬಂದಿಲ್ಲ. ಮುಂದಿನ ವಾರ ಕೊಡುವುದಾಗಿ ಹೇಳಿದ್ದ. ಈತ ರೂಮ್ನಿಂದ ಹೊರ ಬಂದರೂ ನೆರೆಹೊರೆಯವರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ನೋಡಲು ವಿದ್ಯಾರ್ಥಿಯಂತೆ ಹಾಗೂ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುವವರಂತೆ ಓಡಾಡುತ್ತಿದ್ದ. ಸಂಜೆ ಮನೆ ಸೇರಿದರೆ ಹೊರಗೆ ಬರುತ್ತಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಒಟ್ಟು ನಾಲ್ವರ ವಶ
ಮಂಗಳೂರಿನಲ್ಲಿನ ಆಟೋರಿಕ್ಷಾದಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೈಸೂರಲ್ಲಿ ಇಬ್ಬರು, ಊಟಿಯಲ್ಲಿ ಒಬ್ಬ ಹಾಗೂ ಮಂಗಳೂರಿನಲ್ಲಿ ಒಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇನ್ನು ಶಾರಿಕ್ ಜಾಗತಿಕ ಭಯೋತ್ಪಾದಕ ಸಂಘಟನೆಗಳಿಂದ ಪ್ರೇರಣೆ ಪಡೆದಿದ್ದಾನೆ. ತೀರ್ಥಹಳ್ಳಿ ಮೂಲದ ಮತೀನ್ ತಾಹ ಮತ್ತು ಅರಾಫತ್ ಅಲಿ ಪ್ರಮುಖ ಹ್ಯಾಂಡ್ಲರ್ಗಳಾಗಿದ್ದು, ಅವರ ಮೇಲೆ ನಿಗಾ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.