ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ಮೇಳೈಸಿದ 'ಕಾವೇರಿ' ಕವನ
ಮೈಸೂರು, ನವೆಂಬರ್ 26: ನಿಲ್ಲು ನಿಲ್ಲು ಕಾವೇರಿ ಎಲ್ಲಿ ಹರಿದು ಹೋಗುವೆ... ನಿನ್ನ ಮಣ್ಣ ಮಕ್ಕಳನ್ನು ದುಃಖಕ್ಕೆ ದೂಡುವೆ... ನಿಲ್ಲು ನಿಲ್ಲು ಕಾವೇರಿ ಎಲ್ಲಿ ಹರಿದು ಹೋಗುವೆ... ನಿನ್ನ ನಂಬಿ ರೈತರು ಕಬ್ಬು, ಭತ್ತ ಬೆಳೆದರು... ನೀನೆ ಅವರ ದೂರ ಮಾಡೆ ಅವನ್ಯಾರು ಕಾಯ್ವರು?... ನಿಲ್ಲು ನಿಲ್ಲು ಕಾವೇರಿ ಎಲ್ಲಿ ಹರಿದು ಹೋಗುವೆ...
ಕ್ಷಮಿಸಿರೆನ್ನಾ ಮಕ್ಕಳೇ ನಿಮ್ಮ ಅಕ್ಕ ಕರೆದಳು...ಹೀಗಿದ್ದೀಂಗ ಹೊರಟು ಬಾ ಅಮ್ಮ ಎಂದು ಪತ್ರ ಬರೆದಳು... ನಿಲ್ಲು ನಿಲ್ಲು ಕಾವೇರಿ ಎಲ್ಲಿ ಹರಿದು ಹೋಗುವೆ...ನಿಮ್ಮ ಕ್ಯಾವ ಕುರುಬರು ದಡ್ಡರಯ್ಯ ವಡ್ಡರು... ಮಾಡಲಿಲ್ಲ ಮಸಿಯಲಿಲ್ಲ ಬರಿಯ ಸೆಡ್ಡು ಹೊಡೆದರು... ನಿಲ್ಲು ನಿಲ್ಲು ಕಾವೇರಿ ಎಲ್ಲಿ ಹರಿದು ಹೋಗುವೆ...

ಹೀಗೆ ಕನ್ನಡಿಗರು ಮತ್ತು ತಮಿಳರ ನಡುವೆ ದಶಕಗಳ ಕಾಲದಿಂದಲೂ ನಡೆದುಕೊಂಡು ಬಂದಿರುವ ಕಾವೇರಿ ನೀರು ಹಂಚಿಕೆ ವಿಚಾರದ ಕುರಿತಾಗಿ ಕವಿ ಚಂದ್ರಕಾಂತ ಪಡೇಸೂರ ಅವರು ವಾಚನ ಮಾಡಿದ ಕವನ ಸಭಾಂಗಣದಲ್ಲಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಕವಿಗಳಾದ ಚಂದ್ರಶೇಖರ ವಸ್ತ್ರದ, ಬಿ.ಎನ್.ರಾಮಸ್ವಾಮಿ, ವಿಶಾಲಾ ಆರಾಧ್ಯ, ಡಾ.ಬೂವನಹಳ್ಳಿ ನಾಗರಾಜ, ಮುರಳಿಕೃಷ್ಣ ಬೆಳಾಲು, ರಾಧಾಕೃಷ್ಣ ಉಳಿಯತ್ತಡ್ಕ, ವೈ.ಬಿ.ಎಚ್.ಶಿವಯೋಗಿ, ಚಂದ್ರಕಾಂತ ಪಡೇಸೂರ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು.

ವಿಶ್ವಮಾನವ, ಇತಿಹಾಸ ಮರಳಿ ಬರುವುದಿಲ್ಲ, ಹೆಂಗಸರು ನಾವು ಹೆಂಗಸರು, ಸಿಗಲಿಲ್ಲ ಸ್ವಾತಂತ್ರ್ಯ, ಹೀಗೆ ಅನೇಕ ವಿಷಯಗಳ ಕುರಿತು ಸುಮಾರು 47 ಮಂದಿ ಕವಿಗಳು ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಮಹಾಂತೇಶ ಮಸ್ಕಿ ಅವರು ಬರೆದಿರುವ ಗೌರಿ ಲಂಕೇಶ್ ಹತ್ಯೆ ಕುರಿತಾದ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ್ ಬಿಡುಗಡೆಗೊಳಿಸಿದರು.
ಕವಿ ನಿಸಾರ್ ಅಹಮದ್, ಡಾ.ದೊಡ್ಡರಂಗೇಗೌಡ, ಡಾ.ಎಚ್ಎಸ್ ಶಿವಪ್ರಕಾಶ್ ಅವರು ಪ್ರೇಕ್ಷಕರ ಆಸನದಲ್ಲಿ ಕುಳಿತು ಕವನ ವಾಚನ ಆಲಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಲತಾ ರಾಜಶೇಖರ್ ವಹಿಸಿದ್ದರು. ಮೋಹನ ನಾಗಮ್ಮ ಆಶಯ ನುಡಿಗಳನ್ನಾಡಿದರು.












Click it and Unblock the Notifications