25 ಮಂದಿ ಎಲ್ಲಿದ್ದೀರಾ?; ಕರ್ನಾಟಕದ ಬಿಜೆಪಿ ಸಂಸದರಿಗೆ ಪ್ರಶ್ನೆ!
ಮೈಸೂರು, ಡಿಸೆಂಬರ್ 09: " ಭಾರತ್ ಬಂದ್ ವಿಫಲವಾಗಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಅಮಾನುಷವಾದದ್ದು. ರೈತರ ಹೆಸರಿನಲ್ಲಿ ಅಧಿಕಾರ ಹಿಡಿದ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಿಂದ ಇಂತಹ ಹೇಳಿಕೆ ಅಮಾನವೀಯ" ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಹೇಳಿದರು.
ಮೈಸೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, "ಬಂದ್ ಮಾಡಿದ ಮೇಲೆ ಚರ್ಚೆಗೆ ಬನ್ನಿ ಎನ್ನುವುದು ಹಾಸ್ಯಾಸ್ಪದವಾಗಿದೆ. ಭಯೋದ್ಪಾದಕರು ಬಂದ್ನಲ್ಲಿ ಭಾಗವಹಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅನ್ನದಾತರನ್ನು ಭಯೋತ್ಪಾದಕರು ಎನ್ನುವ ನಿಮಗೆ ನೈತಿಕತೆ ಇದೆಯಾ?. ಸಂಸದರಾಗಿರಲು ನೀವು ನಾಲಾಯಕ್" ಎಂದು ವಾಗ್ದಾಳಿ ನಡೆಸಿದರು.
"ಈ ಕೂಡಲೇ ನೀವು ರಾಜೀನಾಮೆ ನೀಡಬೇಕು. 25 ಮಂದಿ ಸಂಸದರು ಎಲ್ಲಿದ್ದೀರಾ?, ರೈತರ ಪರವಾಗಿ ಧ್ವನಿ ಎತ್ತಿದ್ದೀರಾ?, ಗ್ಯಾಸ್ ಬೆಲೆ 50 ರೂ. ಹೆಚ್ಚಳವಾಗಿದೆ ಇನ್ನುಮುಂದೆ ಸಬ್ಸಿಡಿ ಇಲ್ಲ. ಇನ್ನು ಎಷ್ಟು ದಿನ ಕಣ್ಣು ಒರೆಸುವ ತಂತ್ರ ಮಾಡುತ್ತೀರಿ. ಪೆಟ್ರೋಲ್, ಡೀಸೆಲ್ ಬೆಲೆ 40 ರೂ. ಇದ್ದಾಗ ನೀವು ಪ್ರತಿಭಟನೆ ಮಾಡಿದ್ದಿರಿ. ಈಗ ಏನು ಮಾಡ್ತಿದ್ದೀರಾ?"ಎಂದು ಪುಷ್ಪ ಅಮರನಾಥ್ ಪ್ರಶ್ನಿಸಿದರು.

ರೈತರ ಮೇಲೆ ಗೌರವವಿಲ್ಲ; "ಬಿಜೆಪಿ ನಾಯಕರಿಗೆ ರೈತರ ಮೇಲೆ ಗೌರವವಿಲ್ಲ. ಒಬ್ಬ ಶಾಸಕರು, ಸಂಸದರು ಮಹಿಳೆಯರ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಆಡಳಿತದಿಂದಾಗಿ ಯಾರು ನೆಮ್ಮದಿಯಿಂದಿಲ್ಲ. ಅದಾನಿ, ಅಂಬಾನಿ ದೊಡ್ಡ ಕಾರ್ಪೊರೇಟ್ ಕಂಪನಿ ಮಾಲೀಕರು ನೆಮ್ಮದಿಯಾಗಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರಿಗೆ ದೇಶದಲ್ಲಿ ರಕ್ಷಣೆ ಇಲ್ಲ" ಎಂದು ಆರೋಪಿಸಿದರು.
"ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದಿಂದ ಕರಪತ್ರವನ್ನು ಹಂಚುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದವರು ಪ್ರತಿಭಟಿಸಲು ಅವಕಾಶ ನೀಡುತ್ತಿಲ್ಲ, ಪ್ರತಿಕೃತಿ ದಹನ ಮಾಡಲು ಅವಕಾಶ ನೀಡುತ್ತಿಲ್ಲ, ಹೊರಗಡೆ ಪ್ರತಿಭಟನೆ ನಡೆಸಿದರೆ ಜೈಲಿಗೆ ಹಾಕುವುದಾಗಿ ಪೊಲೀಸರು ಬೆದರಿಕೆ ಹಾಕುತ್ತಾರೆ. ಬಿಜೆಪಿಯವರು ಪೊಲೀಸರ ಮೂಲಕ ನಮ್ಮ ಹೋರಾಟ ಹತ್ತಿಕ್ಕುತ್ತಿದ್ದಾರೆ" ಎಂದು ದೂರಿದರು.












Click it and Unblock the Notifications