ವಾಹನಗಳಿಗೆ ವಿಮೆ ಮಾಡಿಸುತ್ತೇನೆಂದ ಈತ ಮಾಡಿದ್ದೇ ಬೇರೆ ಕೆಲಸ
ಮೈಸೂರು, ಜನವರಿ 14: ವಾಹನಗಳನ್ನು ಹೊಂದಿರುವ ಪ್ರತಿಯೊಬ್ಬರೂ ವಿಮೆ ಮಾಡಿಸಲು ಬಯಸುತ್ತಾರೆ. ಅಪಘಾತವಾದ ಸಂದರ್ಭ ನಷ್ಟ ಸಂಭವಿಸದಿರಲಿ ಎಂಬ ಉದ್ದೇಶದಿಂದ ವಿಮೆ ಮಾಡಿಸಲು ಯೋಚಿಸುತ್ತಾರೆ. ಅಷ್ಟೇ ಅಲ್ಲ, ಕಾನೂನಿನ ಪ್ರಕಾರ ಇದು ಕಡ್ಡಾಯವು ಕೂಡ. ಆದರೆ ಇಲ್ಲೊಬ್ಬ ವ್ಯಕ್ತಿ ವಾಹನಗಳಿಗೆ ಮಾಲೀಕರು ನೀಡಿದ ವಿಮೆ ಹಣವನ್ನು ಲಪಟಾಯಿಸುತ್ತಿದ್ದ ಸಂಗತಿ ಬಯಲಾಗಿದೆ.
ಈತ ನಕಲಿ ವಿಮೆ ರಸೀದಿ ನೀಡುತ್ತಿದ್ದ ಸಂಗತಿ ಬಯಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಹುಣಸೂರು ತಾಲೂಕಿನ ಯಾಶೋಧರಪುರದ ಶಿವರಾಜ್ ಎಂಬುವರು ತಮ್ಮ ಸ್ವಿಫ್ಟ್ ಕಾರಿಗೆ ಮಹಮದ್ ವಿಕಾರ್ ನ ಇನ್ಸುರೆನ್ಸ್ ಜೋನ್ ಅಂಗಡಿಯಲ್ಲಿ 15 ಸಾವಿರ ರೂಪಾಯಿ ನೀಡಿ ವಿಮೆ ಮಾಡಿಸಿದ್ದರು. ಇನ್ಸುರೆನ್ಸ್ ಬಾಂಡ್ ಕೂಡ ಪಡೆದಿದ್ದರು. ಆದರೆ ಕಾರು ಇತ್ತೀಚೆಗೆ ಅಪಘಾತವಾಗಿತ್ತು, ಈ ಸಂದರ್ಭದಲ್ಲಿ ಶಿವರಾಜ್ ತಮ್ಮ ಇನ್ಸುರೆನ್ಸ್ ಸೌಲಭ್ಯ ಪಡೆಯಲು ನ್ಯೂ ಇಂಡಿಯಾ ಇನ್ಸುರೆನ್ಸ್ ಕಂಪನಿಗೆ ಹೋಗಿದ್ದರು. ಈ ವೇಳೆ ವಿಮೆ ನಕಲಿ ಎಂಬುದು ಗೊತ್ತಾಗಿದೆ. ಕೂಡಲೇ ವಿಮಾ ಕಂಪನಿಯ ವ್ಯವಸ್ಥಾಪಕರು ಹುಣಸೂರು ಪೊಲೀಸರಿಗೆ ದೂರು ನೀಡಿದ್ದರು.
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಇನ್ಸುರೆನ್ಸ್ ಜೋನ್ ಅಂಗಡಿ ಮೇಲೆ ದಾಳಿ ನಡೆಸಿದರು. ಆಗ ಆರೋಪಿ ನೂರಾರು ವಾಹನಗಳ ಮಾಲೀಕರಿಗೆ ನೀಡಿದ್ದ ನಕಲಿ ರಸೀದಿಗಳು ಪತ್ತೆಯಾದವು. ಈತನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಕುರಿತು ಮಾತನಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಪೂವಯ್ಯ ಅವರು, "ವಾಹನ ಮಾಲೀಕರು ತಾವು ಪಡೆದುಕೊಂಡ ಇನ್ಸುರೆನ್ಸ್ ಬಾಂಡ್ ಮೇಲಿರುವ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಅಸಲಿಯೋ ನಕಲಿಯೋ ಗೊತ್ತಾಗಿಬಿಡುತ್ತದೆ. ಮಾಲೀಕರು ಈ ಕುರಿತು ಗಮನ ಹರಿಸಬೇಕು ಅಲ್ಲದೆ ಡಿಜಿ ಲಾಕರ್ ಮೂಲವೂ ಬಾಂಡ್ ಸಾಚಾತನ ಪರಿಶೀಲಿಸಬಹುದು" ಎಂದು ಮಾಹಿತಿ ನೀಡಿದರು.












Click it and Unblock the Notifications