ಮದ್ಯಪಾನದ ಸಂಯಮದ ಬಗ್ಗೆ ಮಾತನಾಡೋ ನೈತಿಕತೆ ನನಗಿಲ್ಲ: ಸಿಎಂ ಸಿದ್ದು
ಮೈಸೂರು, ಆಗಸ್ಟ್ 29: "ನಾನು ಕೂಡ ಒಮ್ಮೆ ಮದ್ಯಪಾನ ಮಾಡಿದ್ದೇನೆ. ನನಗೂ ಈ ಸಂಯಮದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ" -ಹೀಗೆಂದು ವೇದಿಕೆಯಲ್ಲಿ ಹೇಳಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ.
ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ನಾನು ಕೂಡ ಮದ್ಯ ಕುಡಿದಿದ್ದೆ. ಆಮೇಲೆ ಅದರ ತಪ್ಪಿನ ಅರಿವಾಯಿತು. ಆದಾಯ ತೆರಿಗೆ ನಂತರ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುವುದು ಈ ಮದ್ಯಪಾನದಿಂದಲೇ ಎಂದರು.

ಸಂಪೂರ್ಣವಾಗಿ ಮದ್ಯಪಾನ ನಿಷೇಧಕ್ಕೆ ಜನರು ಒತ್ತಾಯಿಸುತ್ತಾರೆ. ಕುಡಿಯುವುದರಿಂದ ಆಯಸ್ಸು ಕಡಿಮೆಯಾಗಲಿದೆ. ಕೇವಲ ಒಂದು ರಾಜ್ಯದಲ್ಲಿ ಮಾತ್ರ ಮದ್ಯಪಾನ ನಿಷೇಧ ಮಾಡಿದರೆ ಸಾಲದು. ದೇಶದಲ್ಲಿ ಸಂಪೂರ್ಣವಾಗಿ ಮದ್ಯಪಾನವನ್ನು ನಿಷೇಧಿಸಬೇಕು. ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಇದಕ್ಕಾಗಿ ಸರಕಾರದಿಂದ ಎಲ್ಲ ರೀತಿಯ ಸಹಕಾರ ದೊರೆಯಲಿದೆ ಎಂದು ಹೇಳಿದರು.
ಇದೇ ವೇಳೆ ವೈದ್ಯರಾದ ಸಿ.ಆರ್.ಚಂದ್ರಶೇಖರ್, ನಿಂಗರಾಜು ಮಲ್ನಾಡಿ, ಸದಾಶಿವಯ್ಯ ಅವರಿಗೆ 2015-16ನೇ ಸಾಲಿನ ಸಂಯಮ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.












Click it and Unblock the Notifications