ಗ್ರಾಮಗಳಲ್ಲಿ ಹುಲಿ ಹೆಜ್ಜೆ; ಬೇಗೂರಿನಲ್ಲಿ 6 ದಿನಗಳಿಂದ ಕಾರ್ಯಾಚರಣೆ
ಮೈಸೂರು, ಸೆಪ್ಟೆಂಬರ್ 3: ಎಚ್.ಡಿ. ಕೋಟೆ ತಾಲೂಕಿನ ಕಳಸೂರು, ಮೂರು ಬಂದ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿಯೊಂದು ಸಂಚರಿಸುತ್ತಿರುವ ಸುಳಿವಿನ ಆಧಾರದ ಮೇಲೆ ಕಳೆದ 6 ದಿನಗಳಿಂದ ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದು, ಕಾರ್ಯಾಚರಣೆ ಚುರುಕುಗೊಳಿಸಲು ಇಂದು ಸಾಕಾನೆಗಳನ್ನು ಕರೆಸಲಾಯಿತು.
ತಾಲೂಕಿನ ಎನ್.ಬೇಗೂರು ವಲಯದ ಹುಲಿಯೊಂದು ಕಾಡಿನಿಂದ ಹೊರಬಂದಿರುವ ಸುಳಿವು ಪಡೆದುಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿ ಕಳೆದ 6 ದಿನಗಳಿಂದ ಹುಲಿಯ ಸೆರೆಗೆ ಸತತ ಪ್ರಯತ್ನ ನಡೆಸುತ್ತಿದ್ದಾರೆ.
ಹುಲಿ ಸೆರೆಯಾಗದ ಪರಿಣಾಮ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಇಂದು ರಾಂಪುರ ಆನೆ ಶಿಬಿರದಿಂದ ಗಣೇಶ, ಪಾರ್ಥ ಹಾಗೂ ಜಯಪ್ರಕಾಶ ಆನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಲಾಯಿತು. ಕಳಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗುತ್ತಿದ್ದು, ಹುಲಿ ಗ್ರಾಮಗಳಲ್ಲಿ ತಿರುಗಾಡುತ್ತಿರುವ ಸುಳಿವು ಮತ್ತಷ್ಟು ಬಲಗೊಳ್ಳುತ್ತಿದೆ.

ಬುಧವಾರದ ಕಾರ್ಯಾಚರಣೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡುಬಂದಿದ್ದ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, ಸಾಕಾನೆಗಳ ಸಹಾಯ ಪಡೆಯಲಾಗಿದೆ. ಅಲ್ಲದೆ ಹುಲಿಯೂ ಕಾಡಿನಿಂದ ಹೊರಬಂದ ಬಳಿಕ ಹುಲಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಮಾಹಿತಿ ಪ್ರಕಾರ ಎನ್.ಬೇಗೂರು ವಲಯದ ಸುಮಾರು 9-10 ವರ್ಷದ ಗಂಡು ಹುಲಿ ಕಾಡಂಚಿನ ಅಕ್ಕಪಕ್ಕದ ಪಾಳು ಬಿದ್ದ ಜಮೀನುಗಳಲ್ಲಿ ಮೇವಿಗೆ ಬರುವ ಜಾನುವಾರಗಳನ್ನು ಹಿಡಿಯಲು ಕಾಡಿನಿಂದ ಹೊರಬಂದಿರಬಹುದು. ಸದ್ಯ ಹುಲಿಯ ಸೆರೆಗೆ ಮೇಲಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎನ್.ಬೇಗೂರು ವಲಯ ಅರಣ್ಯಾಧಿಕಾರಿ ಚೇತನ್ ತಿಳಿಸಿದರು.












Click it and Unblock the Notifications