ಮೈಸೂರಿನಲ್ಲಿ ಡೆಂಗ್ಯೂಗೆ ಬಾಲಕಿ ಬಲಿ
ಮೈಸೂರು, ಜೂನ್ 27: ಮೈಸೂರು ದಿನೇ -ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು ಮತ್ತೋರ್ವ ಬಾಲಕಿ ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದಾಳೆ.
ಮೃತ ಬಾಲಕಿಯನ್ನು ಗಾಯತ್ರಿಪುರಂ ಎರಡನೇ ಹಂತದ ನಿವಾಸಿ ಪ್ರಕಾಶ್ ಮತ್ತು ರಾಣಿ ಎಂಬವರ ಪುತ್ರಿ ಜೈಷ್ಣವಿ(7) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಬಾಲಕಿಗೆ ಜ್ವರ ಬಂದಿತ್ತು. ಅದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.

ಆಸ್ಪತ್ರೆಯವರು ವರದಿ ಸಿಕ್ಕ ತಕ್ಷಣ ಯಾಕಾಗಿ ಸಾವಿಗೀಡಾದಳು ಎನ್ನುವುದು ತಿಳಿದುಬರಲಿದೆ ಎಂದಿದ್ದಾರೆ. ಗಾಯತ್ರಿಪುರಂನಲ್ಲಿ ಸ್ವಚ್ಛತೆ ಇಲ್ಲ. ಅದರಿಂದ ಸೊಳ್ಳೆಗಳು ಹೆಚ್ಚಿವೆ. ಸೊಳ್ಳೆ ಕಡಿತದಿಂದ ಬಾಲಕಿಗೆ ಜ್ವರಬಂದಿರಬಹುದು ಎಂದು ಆರೋಪಿಸಿದ್ದಾರೆ.
ನಾಯಿ ಬೊಗಳಿದರೆ ಇವನಿಗೇನು ಕಷ್ಟ?!
ಕೇವಲ ನಾಯಿ ಬೊಗಳಿತೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ನಾಯಿಯೊಂದರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ವಾಹನದಲ್ಲಿ ಹೋಗುತ್ತಿದ್ದವನ ಮೇಲೆ ನಾಯಿ ಬೊಗಳಿದ ಕಾರಣಕ್ಕೆ ನಾಯಿಯ ಮೇಲೆ ಚಾಕುವಿನಿಂದ ಹಲ್ಲೆಗೈದ ವ್ಯಕ್ತಿ ಹೆಸರು ಜುಲ್ಲು. ಎನ್.ಆರ್.ಮೊಹಲ್ಲಾ ನಿವಾಸಿ ಆರೋಕ್ಯ ಮೇರಿ ಎಂಬವರ ಮನೆಯ ನಾಯಿ ಬೈಕ್ ನಲ್ಲಿ ವೇಗವಾಗಿ ಬಂದ ಜುಲ್ಲು ಎಂಬವರ ಮೇಲೆ ಬೊಗಳಿದೆ. ಇದಾದ ಸ್ವಲ್ಪ ಹೊತ್ತಿನ ನಂತರ ತನ್ನ ಇಬ್ಬರು ಸ್ನೇಹಿತರೊಂದಿಗೆ ಬಂದ ಜುಲ್ಲು ಟೆರೇಸ್ ಮೇಲೆ ಕಟ್ಟಿ ಹಾಕಿದ್ದ ನಾಯಿಗೆ ಚಾಕುವಿನಿಂದ ಮನಸೋಇಚ್ಛೆ ಚುಚ್ಚಿ ಪರಾರಿಯಾಗಲು ಯತ್ನಿಸಿದಾಗ ಅಡ್ದ ಬಂದ ಮನೆಯವರಿಗೂ ಚಾಕು ತೋರಿಸಿ ಹೆದರಿಸಿದ್ದ ಎನ್ನಲಾಗಿದೆ.
ಕೂಡಲೇ ನಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಬಳಿಕ ಯುವಕನ ವಿರುದ್ಧ ಎನ್.ಆರ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಕರೆಸಿ ವಿಚಾರಣೆ ನಡೆಸುವ ಭರವಸೆ ನೀಡಿದ್ದಾರೆ.











Click it and Unblock the Notifications