ಜೆಡಿಎಸ್ ನಂತೆ ಕಾಂಗ್ರೆಸ್ ಕೂಡ ಅಪ್ಪ-ಮಕ್ಕಳ ಪಕ್ಷ: ವಿಶ್ವನಾಥ್
ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಜೆಡಿಎಸ್ ನಂತೆಯೇ ಅಪ್ಪ-ಮಕ್ಕಳ ಪಕ್ಷವಾಗುತ್ತಿದೆ ಎಂದು ಸಿದ್ದರಾಮಯ್ಯ ಮತ್ತವರ ಮಗ ಯತೀಂದ್ರ ಅವರ ಬಗ್ಗೆ ಮೈಸೂರಿನಲ್ಲಿ ಕುಟುಕಿದ್ದಾರೆ ಮಾಜಿ ಸಚಿವ ಎಚ್.ವಿಶ್ವನಾಥ್
ಮೈಸೂರು, ಏಪ್ರಿಲ್ 7: ಕಾಂಗ್ರೆಸ್ ಕೂಡ ಜೆಡಿಎಸ್ ಹಾದಿಯನ್ನು ಹಿಡಿದಿದ್ದು, ಅಪ್ಪ-ಮಕ್ಕಳ ಪಕ್ಷವಾಗುತ್ತಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಗುರುವಾರ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್ ವರಿಷ್ಠ ದೇವೇಗೌಡ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆ ಮೂಲಕ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರಕಾರದಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆದು, ರೈತರ ಸಾಲಮನ್ನಾ ಮಾಡಬೇಕು. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಸರಕಾರ ಕರ್ನಾಟಕಕ್ಕೆ ಆದರ್ಶವಾಗಲಿ. ಇದರ ಜತೆಗೆ ಧರಣಿ, ಪ್ರತಿಭಟನಾನಿರತರ ಮೇಲಿನ ಪೊಲೀಸ್ ದೌರ್ಜನ್ಯ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.[ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಒನ್ಇಂಡಿಯಾ ಸಂದರ್ಶನ]
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಸ್ವಪ್ರತಿಷ್ಠೆಯ ಕಣವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ. ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಏಕವಚನದಲ್ಲಿ ದೋಷಾರೋಪ ಮಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ. ಇಬ್ಬರೂ ಚುನಾವಣೆ ಸಂಸ್ಕøತಿಯನ್ನೇ ಕೊಂದಿದ್ದಾರೆ. ಸಾರ್ವಜನಿಕರು ನಾಯಕರಿಂದ ಇಂಥದ್ದನ್ನು ನಿರೀಕ್ಷಿಸುವುದಿಲ್ಲ ಎಂದಿದ್ದಾರೆ.
ಇನ್ನೊಂದು ವರ್ಷಕ್ಕೆ ಚುನಾವಣೆ ಎದುರಾಗಲಿದೆ. ಈ ಉಪಚುನಾವಣೆಗೆ ಈ ಪ್ರಮಾಣದಲ್ಲಿ ರಾಜ್ಯ ನಾಯಕರನ್ನು ಬಳಸುವ ಅಗತ್ಯ ಇರಲಿಲ್ಲ. ಸ್ಥಳೀಯ ಮುಖಂಡರು, ನಾಯಕರನ್ನು ದೂರ ಮಾಡಿದ್ದು ಉತ್ತಮ ವಾತಾವರಣವಲ್ಲ ಎಂದು ಅವರು ಹೇಳಿದ್ದಾರೆ.[ಸಿದ್ದರಾಮಯ್ಯ ರಾಜಕೀಯ ನಿವೃತ್ತರಾಗಲ್ಲ: ಡಾ ಯತೀಂದ್ರ ಸಂದರ್ಶನ]
ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಗಾಗಿ ದುಡಿದಿದ್ದೇನೆ. ಪಕ್ಷದಲ್ಲಿ ಹಿರಿಯ ನಾಯಕರಿಗೆ ಬೆಲೆ ಇಲ್ಲ. ಆದರೂ ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ಏಪ್ರಿಲ್ 15ರಂದು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ, ಇಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.