ಜೆಡಿಎಸ್ ನಂತೆ ಕಾಂಗ್ರೆಸ್ ಕೂಡ ಅಪ್ಪ-ಮಕ್ಕಳ ಪಕ್ಷ: ವಿಶ್ವನಾಥ್
ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಜೆಡಿಎಸ್ ನಂತೆಯೇ ಅಪ್ಪ-ಮಕ್ಕಳ ಪಕ್ಷವಾಗುತ್ತಿದೆ ಎಂದು ಸಿದ್ದರಾಮಯ್ಯ ಮತ್ತವರ ಮಗ ಯತೀಂದ್ರ ಅವರ ಬಗ್ಗೆ ಮೈಸೂರಿನಲ್ಲಿ ಕುಟುಕಿದ್ದಾರೆ ಮಾಜಿ ಸಚಿವ ಎಚ್.ವಿಶ್ವನಾಥ್
ಮೈಸೂರು, ಏಪ್ರಿಲ್ 7: ಕಾಂಗ್ರೆಸ್ ಕೂಡ ಜೆಡಿಎಸ್ ಹಾದಿಯನ್ನು ಹಿಡಿದಿದ್ದು, ಅಪ್ಪ-ಮಕ್ಕಳ ಪಕ್ಷವಾಗುತ್ತಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಗುರುವಾರ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್ ವರಿಷ್ಠ ದೇವೇಗೌಡ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆ ಮೂಲಕ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರಕಾರದಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆದು, ರೈತರ ಸಾಲಮನ್ನಾ ಮಾಡಬೇಕು. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಸರಕಾರ ಕರ್ನಾಟಕಕ್ಕೆ ಆದರ್ಶವಾಗಲಿ. ಇದರ ಜತೆಗೆ ಧರಣಿ, ಪ್ರತಿಭಟನಾನಿರತರ ಮೇಲಿನ ಪೊಲೀಸ್ ದೌರ್ಜನ್ಯ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.[ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಒನ್ಇಂಡಿಯಾ ಸಂದರ್ಶನ]

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಸ್ವಪ್ರತಿಷ್ಠೆಯ ಕಣವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ. ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಏಕವಚನದಲ್ಲಿ ದೋಷಾರೋಪ ಮಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ. ಇಬ್ಬರೂ ಚುನಾವಣೆ ಸಂಸ್ಕøತಿಯನ್ನೇ ಕೊಂದಿದ್ದಾರೆ. ಸಾರ್ವಜನಿಕರು ನಾಯಕರಿಂದ ಇಂಥದ್ದನ್ನು ನಿರೀಕ್ಷಿಸುವುದಿಲ್ಲ ಎಂದಿದ್ದಾರೆ.
ಇನ್ನೊಂದು ವರ್ಷಕ್ಕೆ ಚುನಾವಣೆ ಎದುರಾಗಲಿದೆ. ಈ ಉಪಚುನಾವಣೆಗೆ ಈ ಪ್ರಮಾಣದಲ್ಲಿ ರಾಜ್ಯ ನಾಯಕರನ್ನು ಬಳಸುವ ಅಗತ್ಯ ಇರಲಿಲ್ಲ. ಸ್ಥಳೀಯ ಮುಖಂಡರು, ನಾಯಕರನ್ನು ದೂರ ಮಾಡಿದ್ದು ಉತ್ತಮ ವಾತಾವರಣವಲ್ಲ ಎಂದು ಅವರು ಹೇಳಿದ್ದಾರೆ.[ಸಿದ್ದರಾಮಯ್ಯ ರಾಜಕೀಯ ನಿವೃತ್ತರಾಗಲ್ಲ: ಡಾ ಯತೀಂದ್ರ ಸಂದರ್ಶನ]
ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಗಾಗಿ ದುಡಿದಿದ್ದೇನೆ. ಪಕ್ಷದಲ್ಲಿ ಹಿರಿಯ ನಾಯಕರಿಗೆ ಬೆಲೆ ಇಲ್ಲ. ಆದರೂ ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ಏಪ್ರಿಲ್ 15ರಂದು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ, ಇಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.












Click it and Unblock the Notifications