Assembly election 2023: ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಇಲ್ಲ: ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ಇತ್ತೀಚೆಗಷ್ಟೇ ಟಿಕೆಟ್ ಹಂಚಿಕೆಯಲ್ಲಿ ಜೆಡಿಎಸ್ನಲ್ಲಿ ಗೊಂದಲ ಇದೆ ಎನ್ನುವ ಮಾತುಗಳು ಕೇಳಿಬಂದಿದ್ದು, ಈ ಗೊಂದಲಕ್ಕೆ ಇದೀಗ ನಿಖಿಲ್ ಕುಮಾರಸ್ವಾಮಿಯವರು ತೆರೆ ಎಳೆದಿದ್ದಾರೆ.
ಮೈಸೂರು, ಫೆಬ್ರವರಿ, 06: ಟಿಕೆಟ್ ಹಂಚಿಕೆಯ ಬಗ್ಗೆ ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ರೇವಣ್ಣ ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವ ವಿಚಾರವೂ ನನಗೆ ಗೊತ್ತಿಲ್ಲ. ನಾನು ರಾಜ್ಯಾಧ್ಯಕ್ಷ ಅಲ್ಲ, ಯುವ ಘಟಕದ ಅಧ್ಯಕ್ಷ. ನನ್ನ ಇತಿಮಿತಿಯಲ್ಲಿ ಅಷ್ಟೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.
123 ಸ್ಥಾನವನ್ನ ಗೆಲ್ಲುವ ಗುರಿ ಹೊಂದಿದ್ದೇವೆ
ಕುಮಾರಸ್ವಾಮಿ ಅವರು ಏಕಾಂಗಿಯಾಗಿ ರಾಜ್ಯ ಸುತ್ತುತ್ತಿದ್ದಾರೆ. ಈ ಬಾರಿ 40ರಿಂದ 50 ಸ್ಥಾನಕ್ಕೆ ಜೆಡಿಎಸ್ ಸೀಮಿತವಾಗುವುದಿಲ್ಲ. 123 ಸ್ಥಾನವನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ. ಜಿ.ಟಿ. ದೇವೇಗೌಡರಿಗೆ ಕಾಂಗ್ರೆಸ್ ನಾಯಕರು ಹಾಕಿದ್ದ ಸವಾಲಿಗೆ ನೀವೆಲ್ಲ ಉತ್ತರ ನೀಡಿದ್ದೀರಿ. ನೀವೆಲ್ಲ ತೊಡೆ ತಟ್ಟಿ ನಿಂತಿದ್ದೀರಿ. ಕಳೆದ ಚುನಾವಣೆಯಲ್ಲಿ ಜಿ.ಟಿ.ಡಿ ಅವರನ್ನು ಗೆಲ್ಲಿಸಿ ಉತ್ತರ ನೀಡಿದ್ದೀರಿ. ಜೆಡಿಎಸ್ಗೆ ಮೈಸೂರು ಭಾಗಕ್ಕೆ ಜಿ.ಟಿ. ದೇವೇಗೌಡರೇ ಒಂದು ಶಕ್ತಿ ಎಂದು ನನಗೆ ಕುಮಾರಣ್ಣ ಹೇಳಿ ಕಳುಹಿಸಿದ್ದಾರೆ. ಈ ಬೃಹತ್ ಕಾರ್ಯಕ್ರಮವನ್ನು ಎಚ್.ಡಿ. ದೇವೇಗೌಡರು ಲೈವ್ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ ಎಂದರು.

ಗೆಲುವಿಗಾಗಿ ಕೆಲಸ ಮಾಡಬೇಕು
ಎಚ್.ಡಿ. ಕೋಟೆಯ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಅವರನ್ನು ಅಭ್ಯರ್ಥಿ ಮಾಡುವ ವಿಷಯಕ್ಕೆ ಕುಮಾರಣ್ಣ ಶೀಘ್ರವೇ ತೆರೆ ಎಳೆಯಲಿದ್ದಾರೆ. ನಂತರ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದ ಜನತೆ ನನ್ನನ್ನು ಮಗನಂತೆ ಕಂಡು 2018ರ ಚುನಾವಣೆಯಲ್ಲೂ ಕೈ ಬಿಡದೆ ಆಯ್ಕೆ ಮಾಡಿದ್ದೀರಾ? ಮುಂದೆಯೂ ನಮ್ಮೊಂದಿಗೆ ಇದ್ದು ಗೆಲುವಿಗೆ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ನನಗೆ ಮತ ನೀಡಿ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಜೆಡಿಎಸ್ನ ವಿಜಯ ಪತಾಕೆ ಚಾಮುಂಡೇಶ್ವರಿಯಿಂದಲ್ಲೇ ಆರಂಭವಾಗಲಿ ಎಂದರು.
ಎಲ್ಲರನ್ನೂ ಪ್ರೀತಿಸುವುದೇ ತಪ್ಪಾ?
ಎಲ್ಲರನ್ನೂ ಪ್ರೀತಿಸುವುದೇ ತಪ್ಪಾ, ನಂಬೋದು ತಪ್ಪಾ? ಈ ಹೋಬಳಿಯ ಮುಖಂಡರೊಬ್ಬರು ನನ್ನ ಮತ್ತು ಮಗನ ಬಗ್ಗೆ ಹೇಳಿದ ಮಾತಿಗೆ ಸವಾಲಾಗಿ ಸ್ವೀಕರಿಸಿ ಸಮಾವೇಶ ಮಾಡಿದ್ದಕ್ಕೆ ತುಂಬು ಹೃದಯದ ನಮಸ್ಕಾರ ಹೇಳುತ್ತೇನೆ ಎಂದು ಎರಡು ಕೈ ಮುಗಿದು ನಮಸ್ಕರಿಸಿದರು. ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆದಾಗ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುತ್ತಾರೆ ಅಂದಿದ್ದು ನಿಜವಾಯಿತು. ಕುಮಾರಪರ್ವ ಮಾಡಿದ ಮೇಲೆ ಎರಡನೇ ಬಾರಿ ಸಿಎಂ ಆಗಿದ್ದರು. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿಗೆ ಬರುತ್ತಾರೆ. ನನಗೆ ಮತ ನೀಡಿ ಗೆಲ್ಲಿಸುವ ಮೂಲಕ ಕುಮಾರಸ್ವಾಮಿಯವರನ್ನು ಮೂರನೇ ಬಾರಿಗೂ ಮುಖ್ಯಮಂತ್ರಿ ಮಾಡುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಲಲಿತಾ ದೇವೇಗೌಡ, ಶಾಸಕರಾದ ಕೆ.ಮಹದೇವ್, ಎಂ.ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ನಗರ ಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ಎಸ್ಬಿಎಂ ಮಂಜು, ರಮಣಿ, ಮಾಜಿ ಸದಸ್ಯರಾದ ಕೆ.ವಿ.ಮಲ್ಲೇಶ್, ಎಸ್.ಬಾಲು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ದಲಿಂಗಪುರ ದಿನೇಶ್, ಕೋಟೆಹುಂಡಿ ಮಹದೇವ್, ಉದ್ಬೂರು ಮಹದೇವಸ್ವಾಮಿ, ಮೈಮುಲ್ ನಿರ್ದೇಶಕ ಕೆ.ಉಮಾಶಂಕರ್ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications