ಮೈಸೂರು: ಮಕ್ಕಳಿಗಾಗಿ ಪರಿಸರ ನಡಿಗೆ, ಪಕ್ಷಿ ವೀಕ್ಷಣೆ
ಮೈಸೂರು, ಜು.4: ವೈಲ್ಡ್ ಮೈಸೂರು ವತಿಯಿಂದ ವಿನಾಯಕನಗರದ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಪರಿಸರ ನಡಿಗೆ ಹಾಗೂ ಪಕ್ಷಿ ವೀಕ್ಷಣೆಯನ್ನು ಬುಧವಾರ ಆಯೋಜಿಸಿತ್ತು.
ಪ್ರಾಣಿ, ಪಕ್ಷಿಗಳ ಕುರಿತು ಕಾಳಜಿ ಹುಟ್ಟಿಸುವ ಹಾಗೂ ಅವುಗಳ ಆಹಾರ ಪದ್ಧತಿಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಮೈಸೂರಿನ ಜಿಲ್ಲಾಧಿಕಾರಿಗಳಾದ ಅಭಿರಾಮ್ ಶಂಕರ್ ಅವರು ಆಗಮಿಸಿದ್ದರು. ಅಭಿರಾಮ್ ಅವರು ಪಕ್ಷಿ ವೀಕ್ಷಣೆಯ ಹವ್ಯಾಸ ಹೊಂದಿದ್ದು, ತಮಗೆ ತಿಳಿದಿರುವ ಮಾಹಿತಿ ಹಾಗೂ ಸ್ವಂತ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮ ಬೆಳಗ್ಗೆ 8 ಘಂಟೆ ವೇಳೆಗೆ ಆರಂಭವಾಯಿತು.
ಜಿಲ್ಲಾಧಿಕಾರಿಗಳು ಮಕ್ಕಳಿಗೆ ಪರಿಸರವನ್ನು ಪರಿಚಯಿಸಿ, ಪಕ್ಷಿ ವೀಕ್ಷಣೆ ಕಾರ್ಯಕ್ರಮ ನಡೆಸಿಕೊಟ್ಟರು. ಮೈಸೂರಿನಲ್ಲಿ ಪ್ರಥಮ ಭಾರಿಗೆ, ಜಿಲ್ಲಾಧಿಕಾರಿಗಳೆ ಮಕ್ಕಳನ್ನು ಪಕ್ಷಿ ವೀಕ್ಷಣೆಗೆ ಪರಿಚಯಿಸಿದ್ದು ಶ್ಲಾಘನೀಯ ವಿಷಯ. ಪಕ್ಷಿ ವೀಕ್ಷಣೆ ಮತ್ತು ಪರಿಸರ ನಡಿಗೆಯ ಕುರಿತು ಮಕ್ಕಳಿಗೆ ಮಾಹಿತಿ ನೀಡುವುದರ ಜೊತೆಗೆ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡರು.

ಕುಕ್ಕರಹಳ್ಳಿ ಕೆರೆಯ ಸ್ಥಳೀಯ ಪಕ್ಷಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಅವುಗಳ ದೇಹ ರಚನೆ, ಆಹಾರ ಪದ್ಧತಿ, ಗೂಡು ರಚನೆ ಹಾಗೂ ಸಂತಾನೋತ್ಪತ್ತಿ ಕುರಿತು ಮಾಹಿತಿ ನೀಡಿದರು. ಮಕ್ಕಳಿಗೆ ಪಕ್ಷಿಗಳನ್ನು, ಪರಿಸರವನ್ನು ಪರಿಚಯಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.

ಪಕ್ಷಿ ವೀಕ್ಷಣೆಯನ್ನು ಒಂದು ಹವ್ಯಾಸವಾಗಿ ಬೆಳೆಸಿಕೊಳ್ಳುವಂತೆ ಮಕ್ಕಳನ್ನು ಪ್ರೊತ್ಸಾಹಿಸಿದರು. ಮಕ್ಕಳು ಬಹಳ ಖುಷಿಯಿಂದ ತಮ್ಮ ಅನುಭವವನ್ನು ಹಂಚಿಕೊಂಡರು.












Click it and Unblock the Notifications