ಮೈಸೂರಿನಲ್ಲಿ ಗಣಪನ ಜೊತೆ ನಿಂತ ಮೋದಿ, ಷಾ, ಪಿ.ವಿ. ಸಿಂಧು!
ಮೈಸೂರು, ಸೆಪ್ಟೆಂಬರ್ 3: ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಸಾಗಿದೆ. ಇತ್ತ ವಿಘ್ನನಿವಾರಕನ ವಿಗ್ರಹಗಳನ್ನು ತಯಾರಿಸುವ ಕಲಾವಿದರು ತಮ್ಮ ಕೈಚಳಕದಲ್ಲಿ ವಿವಿಧ ರೀತಿಯ ಗಣೇಶನ ಮೂರ್ತಿಗಳನ್ನು ತಯಾರಿಸಿ ಹಬ್ಬಕ್ಕೆ ಮೆರುಗು ತಂದಿದ್ದಾರೆ. ಈ ಬಾರಿ ಮೈಸೂರಿನಲ್ಲಿ ವಿಶೇಷವಾದ ಗಣಪನ ವಿಗ್ರಹಗಳು ನೋಡುಗರ ಗಮನ ಸೆಳೆದಿವೆ.
ಗಣೇಶನ ಜತೆ ರಾಜಕೀಯ, ಕಲೆ, ಕ್ರೀಡೆ ಮುಂತಾದ ವಿವಿಧ ಕ್ಷೇತ್ರದ ಗಣ್ಯರು ನಿಂತಿರುವಂತೆ ರೂಪಿಸುವ ಮೂಲಕ ತಮ್ಮ ಕಲಾಚಾತುರ್ಯ ತೋರಿದ್ದಾರೆ. ಕಲಾವಿದ ರೇವಣ್ಣ ಎಂಬುವರು ಜೇಡಿಮಣ್ಣಿನಿಂದ ಈ ಪರಿಸರಸ್ನೇಹಿ ಗಣಪನನ್ನು ತಯಾರಿಸಿದ್ದಾರೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಗಣೇಶನ ಜೊತೆ ನಿಲ್ಲಿಸಿರುವ ಜೊತೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಾರಿ ದಸರಾ ಉದ್ಘಾಟಕರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಗಣೇಶನೊಂದಿಗೆ ನಿಂತಿರುವಂತೆ ಇವರು ರೂಪಿಸಿರುವ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ನಮ್ಮ ನಡುವಿನ ಗಣ್ಯರು, ರಾಜಕೀಯ ವ್ಯಕ್ತಿಗಳು ಗಣೇಶನೊಂದಿಗೆ ಇರುವಂತೆ ಬಿಂಬಿಸುವ ಗಣೇಶ ಮೂರ್ತಿಗಳನ್ನು ಇವರು ಪ್ರತಿ ವರ್ಷ ತಯಾರಿಸುತ್ತಾರೆ. ಇತ್ತೀಚೆಗೆ ನಿಧನರಾದ, ರಾಜಕೀಯ ಗಣ್ಯರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಹಾಗೂ ಅನಂತ್ ಕುಮಾರ್ ಅವರ ಕಲಾಕೃತಿಗಳೂ ರೇವಣ್ಣ ಅವರ ಕೈಯಲ್ಲಿ ಮೂಡಿಬಂದಿವೆ. ದೇಶಕ್ಕೆ ಕೀರ್ತಿ ತಂದ ಪಿ.ವಿ.ಸಿಂಧು ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಅವರು ಗಣೇಶನ ಜತೆ ನಿಂತಿರುವ ರೀತಿ ಕಲಾಕೃತಿಯನ್ನು ತಯಾರಿಸಿದ್ದಾರೆ. ಇವರ ಈ ಕಾಯಕಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.













Click it and Unblock the Notifications