ನಂಜನಗೂಡಿನ ಕಪಿಲೆಯಲ್ಲಿ ಈಜಲು ಹೋದವನು ಕಣ್ಮರೆ
ಮೈಸೂರು, ಆಗಸ್ಟ್ 20: ಈಜಲು ಹೋದ ಯುವಕನೊಬ್ಬ ಮರಳಿ ದಡ ಸೇರದೆ ಕಣ್ಮರೆಯಾಗಿರುವ ಘಟನೆ ಕಪಿಲ ನದಿಯಲ್ಲಿ ನಡೆದಿದೆ.
ನಂಜನಗೂಡಿನ ಕನಕ ನಗರ ಬಡಾವಣೆಯ ನಿವಾಸಿ ದಿ.ನಂಜಪ್ಪರವರ ಪುತ್ರ ಸಿದ್ದರಾಜು (23) ಈಜಲು ಹೋಗಿ ಕಣ್ಮರೆಯಾಗಿರುವ ಯುವಕ. ಈತ ನಂಜನಗೂಡಿನ ದೇವರಾಜ ಅರಸು ಸೇತುವೆ ಬಳಿಯಿಂದ ಈಜಲು ಹೋಗಿ ಕಪಿಲಾ ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.
ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದರಾಜು ಭಾನುವಾರ ಕೆಲಸಕ್ಕೆ ರಜೆ ಇದ್ದ ಕಾರಣದಿಂದ ತನ್ನ ಅಕ್ಕ ಮಂಜುಳಾಳನ್ನು ಆಸ್ಪತ್ರೆಗೆ ತೋರಿಸಿ ಮನೆಗೆ ಬಿಟ್ಟು ಕಪಿಲಾ ನದಿಯ ಪ್ರವಾಹವನ್ನು ನೋಡಿ ಬರುವುದಾಗಿ ತಾಯಿಗೆ ಹೇಳಿ ದೊಡ್ಡ ಸೇತುವೆ ಬಳಿ ಬಂದಿದ್ದು ಇಬ್ಬರು ಯುವಕರು ಈಜಲು ನದಿಗೆ ಧುಮುಕಿದ ಪರಿಣಾಮ ಅದನ್ನು ನೋಡಿದ ಸಿದ್ದರಾಜು ಕೂಡ ಈಜಲು ನದಿಗೆ ಧುಮುಕಿದ್ದಾನೆ. ಆದರೆ ಇಬ್ಬರು ಯುವಕರು ಈಜಿ ದಡ ಸೇರಿದರೆ ಸಿದ್ದರಾಜು ಮಾತ್ರ ಮರಳಿ ಬಾರದೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುವ ಮೂಲಕ ಕಣ್ಮರೆಯಾಗಿದ್ದಾನೆ. ಈ ಸಂಬಂಧ ಯುವಕನ ತಾಯಿ ಅನಸೂಯ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್ಐ ಪುನೀತ್ರವರು ಯುವಕನ ಶವದ ಹುಡುಕಾಟಕ್ಕೆ ಎಲ್ಲ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.











Click it and Unblock the Notifications