ಗೂಡ್ಸ್ ರೈಲಿನಲ್ಲಿ ಮೈಸೂರು ಮೃಗಾಲಯಕ್ಕೆ ಬಂದ ಅಪರೂಪದ ಅತಿಥಿಗಳು!
ಮೈಸೂರು, ಮಾರ್ಚ್ 12 : ಮೈಸೂರು ಮೃಗಾಲಯ ರಾಜ್ಯದಲ್ಲಿಯೇ ಪ್ರಾಣಿ ವಿನಿಮಯ ಯೋಜನೆಗೆ ಮೊದಲನೇ ಸ್ಥಾನ ಪಡೆದಿದೆ. ಈ ಹಿನ್ನೆಲೆ ಇದೇ ಯೋಜನೆಯಡಿ ಅಸ್ಸಾಂ ಮತ್ತು ಮೇಘಾಲಯದ ಮೃಗಾಲಯದಿಂದ ಹಿಮಾಲಯನ್ ಕಪ್ಪು ಕರಡಿ ಮತ್ತು ಚಿರತೆ ಬೆಕ್ಕು ಸೇರಿದಂತೆ ವಿವಿಧ ಪ್ರಾಣಿಗಳು ಗೂಡ್ಸ್ ರೈಲಿನಲ್ಲಿ ಬಂದು ಮೈಸೂರು ಝೂ ಸೇರಿವೆ.
ಕಳೆದ ವಾರ ಅಸ್ಸಾಂ ಮತ್ತು ಮೇಘಾಲಯದ ಮೃಗಾಲಯದಿಂದ ಒಂದು ಹಿಮಾಲಯನ್ ಗಂಡು ಕಪ್ಪು ಕರಡಿ, ನಾಲ್ಕು ಫೆಲಿಕಾನ್ ಗಳು, ಎರಡು ಬ್ರಾಹ್ಮಿನಿ ಶೆಲ್ ಡಕ್, ನಾಲ್ಕು ಕೊಂಬಿನ ಎರಡು ಜಿಂಕೆ, ನಾಲ್ಕು ಬಾರ್ಕಿಂಗ್ ಡೀರ್, ಎರಡು ಬ್ರೋ ಅಂಟ್ಲಾರ್ಡ್ ಡೀರ್, ಎರಡು ಚಿರತೆ ಬೆಕ್ಕು ಆಗಮಿಸಿವೆ.

ಈ ಪ್ರಾಣಿ, ಪಕ್ಷಿಗಳನ್ನು ತರಲು ಮಾ.2ರಂದು ಮೈಸೂರಿನ ಮೃಗಾಲಯದಿಂದ ಒಬ್ಬರು ಪಶು ವೈದ್ಯರು ಹಾಗೂ ನಾಲ್ವರು ಕೇಜ್ ಕೀಪರ್ ಗಳು ಅಸ್ಸಾಂ ಮತ್ತು ಮೇಘಾಲಯಕ್ಕೆ ಪ್ರಯಾಣ ಬೆಳೆಸಿದ್ದರು. ಈ ಸಿಬ್ಬಂದಿ ಈಶಾನ್ಯ ರಾಜ್ಯದ ಮೃಗಾಲಯದಿಂದ ಪ್ರಾಣಿ, ಪಕ್ಷಿಗಳನ್ನು ಸುರಕ್ಷಿತವಾಗಿ ಮೈಸೂರು ಝೂಗೆ ತಂದಿದ್ದಾರೆ.

ಪ್ರಾಣಿ ವಿನಿಮಯ ಪದ್ಧತಿಯಲ್ಲಿ ಅಸ್ಸಾಂ ಮತ್ತು ಮೇಘಾಲಯದ ಮೃಗಾಲಯಕ್ಕೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ಎರಡು ವರ್ಷದ ಧನುಷ್ ಹೆಸರಿನ ಹುಲಿ, ಎರಡು ಕೃಷ್ಣಮೃಗ ಹಾಗೂ ನಾಲ್ಕು ನವಿಲುಗಳನ್ನು ನೀಡಿದ್ದಾರೆ. ಅಸ್ಸಾಂ ಮತ್ತು ಮೇಘಾಲಯ ಮೃಗಾಲಯದ ಪಶುವೈದ್ಯರು ಹಾಗೂ ಸಿಬ್ಬಂದಿ ಮೈಸೂರಿಗೆ ಆಗಮಿಸಿ, ಈ ಪ್ರಾಣಿಗಳನ್ನು ರೈಲ್ವೆ ಗೂಡ್ಸ್ ಶೆಡ್ ನಲ್ಲಿ ತಮ್ಮ ಮೃಗಾಲಯಕ್ಕೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ.

ಮೃಗಾಲಯದಲ್ಲಿ ಪ್ರಾಣಿಪಕ್ಷಿಗಳ ಸಂರಕ್ಷಣೆ ಜತೆಗೆ ಸಂತಾನಾಭಿವೃದ್ಧಿಗೆ ಈ ಪ್ರಾಣಿ ವಿನಿಮಯ ಪದ್ಧತಿ ಉಪಯುಕ್ತವಾಗಿದ್ದು, ಅಸ್ಸಾಂ ಮತ್ತು ಮೇಘಾಲಯ ಮೃಗಾಲಯದಿಂದ ಪ್ರಾಣಿ, ಪಕ್ಷಿಗಳು ಬಂದಿವೆ. ಈಗಾಗಲೇ ಇವುಗಳ ಆರೋಗ್ಯ ತಪಾಸಣೆ ನಡೆಸಿದ್ದು, ಆರೋಗ್ಯ ಸ್ಥಿರವಾಗಿವೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್ ತಿಳಿಸಿದ್ದಾರೆ.












Click it and Unblock the Notifications