ಘರ್ಜನೆ ನಿಲ್ಲಿಸಿದ ಮೈಸೂರು ಮೃಗಾಲಯದ ಸಿಂಹ 'ಶಂಕರ್'
ಮೈಸೂರು, ಮೇ 10: ಇಲ್ಲಿನ ಚಾಮರಾಜ ಮೃಗಾಲಯದಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದ್ದ ಏಷಿಯನ್ ಗಂಡು ಸಿಂಹ 'ಶಂಕರ್' ಅನಾರೋಗ್ಯದಿಂದ ಮೃತಪಟ್ಟಿದೆ.
ಈ ಸಿಂಹಕ್ಕೆ ಎಂಟು ವರ್ಷ 2 ತಿಂಗಳು ವಯಸ್ಸಾಗಿತ್ತು. 2011ರ ಮಾರ್ಚ್ 6ರಂದು ಜುನಾಗಡ್ ನ ಸಕರ್ಬಗ್ ಮೃಗಾಲಯದಿಂದ ಪ್ರಾಣಿ ವಿನಿಮಯ ಯೋಜನೆಯಡಿ ಇದನ್ನು ತರಿಸಿಕೊಳ್ಳಲಾಗಿತ್ತಲ್ಲದೆ 'ಶಂಕರ್' ಎಂಬ ಹೆಸರನ್ನಿಡಲಾಗಿತ್ತು.
ಮೃಗಾಲಯದಲ್ಲಿ ಅಡ್ಡಾಡುತ್ತಾ ವೀಕ್ಷಕರನ್ನು ಸೆಳೆಯುತ್ತಿದ್ದ ಶಂಕರ್ ಏಪ್ರಿಲ್ 30 ರಿಂದ ಮಂಕಾಗಿತ್ತಲ್ಲದೆ, ಆಹಾರವನ್ನು ಸೇವಿಸದೆ ಅಸ್ವಸ್ಥಗೊಂಡಿತ್ತು. [ಕೋತಿಮರಿಗೆ ಗೊಂಬೆಯೇ ತಾಯಿ!]

ಈ ಹಿನ್ನಲೆಯಲ್ಲಿ ಮೇ.2 ರಂದು ಸಿಂಹವನ್ನು ಸ್ಕ್ವೀಜ್ ಕೇಜ್ ಗೆ ತೆಗೆದುಕೊಂಡು ಅಗತ್ಯವಿರುವ ಚಿಕಿತ್ಸೆಯನ್ನು ನೀಡಲಾಗಿತ್ತು. ಇದರ ಬಗ್ಗೆ ಹೈದರಾಬಾದ್ ಮೃಗಾಲಯದ ಸಿಂಹ ಧಾಮ ಮತ್ತು ಹುಲಿ ಮತ್ತು ಸಿಂಹಧಾಮ, ಶಿವಮೊಗ್ಗದ ಪಶುವೈದ್ಯಾಧಿಕಾರಿಗಳೊಂದಿಗೂ ಕೂಡ ನಿರಂತರ ಸಂಪರ್ಕ ಸಾಧಿಸಿ ಮಾಹಿತಿ ಪಡೆಯಲಾಗಿತ್ತು. [ಮೃಗಾಲಯಕ್ಕೆ ಬಂತು ಎಲೆಕ್ಟ್ರಾನಿಕ್ ಗೇಟ್]
ಮೇ.7ರಂದು ಹಾಸನದ ಡಿಪಾರ್ಟ್ಮೆಂಟ್ ಆಫ್ ಮೆಡಿಸಿನ್ ಪಶುವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರಾದ ಪ್ರೊ. ಸಿ.ಅನ್ಸರ್ ಕಮ್ರಾನ್ ಅವರನ್ನು ಮೃಗಾಲಯಕ್ಕೆ ಕರೆಯಿಸಿಕೊಂಡು ಸಿಂಹಕ್ಕೆ ಚಿಕಿತ್ಸೆ ನೀಡುವ ಕುರಿತು ಸಲಹೆಯನ್ನು ಪಡೆಯಲಾಗಿತ್ತು. ರಕ್ತ ಪರೀಕ್ಷೆಯಲ್ಲಿ ಸಿಂಹವು ಕರುಳು ಮತ್ತು ಕಿಡ್ನಿ ತೊಂದರೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು.
ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಶಂಕರ್ ಮೃತಪಟ್ಟಿದೆ. ಶಂಕರನ ಸಾವಿನ ಬಳಿಕ ಇದೀಗ ಗೌರಿ ಹಾಗೂ ದರ್ಶನ, ರಕ್ಷಿತ್ ಎಂಬ ಮೂರು ಸಿಂಹಗಳು ಉಳಿದುಕೊಂಡಿವೆ.












Click it and Unblock the Notifications