Pre Monsoon Rain: ಪೂರ್ವ ಮುಂಗಾರು ಆರಂಭ; ಕೃಷಿ ಚಟುವಟಿಕೆ ಬಿರುಸು
ಬರ, ಬಿಸಿಲಿನ ತಾಪಮಾನದಿಂದ ಬಳಲಿದ್ದ ಮೈಸೂರು ಜಿಲ್ಲೆಗೆ ಪೂರ್ವ ಮುಂಗಾರು ಆಶಾದಾಯಕವಾಗಿದ್ದು, ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಇತ್ತೀಚಿಗೆ ಸುರಿದ ಮಳೆಯಿಂದಾಗಿ ಭೂಮಿ ತೇವಗೊಂಡಿದ್ದು, ಜಾನುವಾರುಗಳ ಮೇವಿಗೆ ಸ್ವಲ್ಪಮಟ್ಟಿನ ತಾಪತ್ರಯ ಕಡಿಮೆಯಾಗಿದೆ. ರೈತರ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆಗೆ ಭೂಮಿ ಹದಗೊಳಿಸಲು ಚಟುವಟಿಕೆ ಆರಂಭವಾಗಿದೆ.

ಜಿಲ್ಲೆಯಲ್ಲಿ 1,627 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಹೀಗೆ ನಿರಂತರವಾಗಿ ಮಳೆಯಾದರೆ ಕೃಷಿ ಕಾರ್ಯ ಇನ್ನಷ್ಟು ಚುರುಕಾಗುತ್ತದೆ. ಮುಂಗಾರು ಪೂರ್ವದಲ್ಲಿ ತಂಬಾಕು ಬಿತ್ತನೆ ಹೆಚ್ಚಾಗಿ ನಡೆಯುತ್ತಿದೆ. ಇದರ ಜೊತೆಗೆ ಹತ್ತಿ, ಅಲಸಂದೆ, ಹೆಸರು, ಅವರೆ, ಎಳ್ಳು, ಮುಸುಕಿನ ಜೋಳ, ಉದ್ದು ಬಿತ್ತನೆಯು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭರದಿಂದ ಸಾಗುತ್ತಿದೆ.
ಬೀಜ, ಗೊಬ್ಬರ ವಿತರಣೆ
ಮೈಸೂರು ಜಿಲ್ಲೆಯಲ್ಲಿ 33 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಸಬ್ಸಡಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಮಳೆ ಇಲ್ಲದೆ ತಂಬಾಕು ಪಟಗಳನ್ನು ಮಾಡಿ ಸಸಿಗಳನ್ನು ಜಮೀನಿನಲ್ಲಿ ನೆಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಶುಕ್ರವಾರ ಬಿದ್ದ ಮಳೆಯಿಂದಾಗಿ ರೈತರು ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
"ಪಂಪ್ಸೆಟ್ ಹೊಂದಿರುವ ರೈತರು ಕೃಷಿ ಕಾರ್ಯ ಆರಂಭಿಸಿದ್ದಾರೆ. ಜಿಲ್ಲಾದ್ಯಂತ ಬಿತ್ತನೆ ಬೀಜ ವಿತರಣೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ರಸಗೊಬ್ಬರ ದಾಸ್ತಾನು ಇದೆ. ಯಾವುದೇ ಕೊರತೆ ಇಲ್ಲ. ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಮಳೆಯೊಂದು ಸಕಾಲಕ್ಕೆ ಸುರಿದರೆ ಯಾವುದೇ ತೊಂದರೆ ಇರುವುದಿಲ್ಲ" ಎಂದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ನಾಲ್ಕು ತಿಂಗಳಿನಲ್ಲಿ ಶೇ.67ರಷ್ಟು ಮಳೆಕೊರತೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೂ ಶೇ. 102 ಮಿಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 34 ಮಿಮೀ ಮಳೆಯಾಗಿದೆ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬೋರ್ವೆಲ್ ವ್ಯವಸಾಯವೂ ನಿರೀಕ್ಷಿತ ಫಲ ನೀಡಿಲ್ಲ.
ಯಾವ ತಾಲೂಕಿನಲ್ಲಿ ಎಷ್ಟು ಮಳೆ
ಎಚ್.ಡಿ.ಕೋಟೆ - 45 ಮಿಮೀ
ಹುಣಸೂರು - 47 ಮಿಮೀ
ಕೆ.ಆರ್.ನಗರ - 26 ಮಿಮೀ
ಮೈಸೂರು - 32 ಮಿಮೀ
ನಂಜನಗೂಡು - 17 ಮಿಮೀ
ಪಿರಿಯಾಪಟ್ಟಣ - 37 ಮಿಮೀ
ತಿ.ನರಸೀಪುರ - 16 ಮಿಮೀ
ಸರಗೂರು - 43 ಮಿಮೀ
ಸಾಲಿಗ್ರಾಮ - 40 ಮಿಮೀ












Click it and Unblock the Notifications