ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ:ದುಷ್ಕರ್ಮಿಗಳ ಪತ್ತೆಗೆ ತಂಡ
ಮೈಸೂರು, ಮೇ 11:ನಾಲ್ಕು ದಿನಗಳ ಹಿಂದೆ ಮೈಸೂರಿನ ಲಿಂಗಾಂಬುಧಿ ಪಾಳ್ಯದ ಬಳಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಶಂಕಿತರನ್ನು ಕರೆ ತಂದು ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅವರ ಪ್ರಕಾರ ಇನ್ನೊಂದೆರಡು ದಿನಗಳಲ್ಲಿ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಲಿದೆ.ಪ್ರಕರಣದ ತನಿಖೆಗಾಗಿ ಅಧಿಕಾರಿಗಳ ತಂಡ ರಚನೆಯಾಗಿದೆ.ಇನ್ನು ಘಟನೆ ನಡೆದ ವೇಳೆ ಕತ್ತಲಾಗಿದ್ದರಿಂದ ಹಾಗೂ ಸುತ್ತಮುತ್ತ ಯಾವುದೇ ಸಿಸಿಟಿವಿ ಇಲ್ಲದ ಕಾರಣ ದುಷ್ಕರ್ಮಿಗಳ ಪತ್ತೆ ಪೊಲೀಸರಿಗೆ ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ತನಿಖೆ ಆರಂಭಿಸಿರುವ ಪೊಲೀಸರು ಮೊಬೈಲ್ ಟವರ್ ಸಿಗ್ನಲ್ ಮಾಹಿತಿಗೆ ಮೊರೆ ಹೋಗಿದ್ದಾರೆ.
ಪ್ರಕರಣ ನಡೆದ ದಿನ (ಮೇ.07) ರಾತ್ರಿ 9.30 ರಿಂದ 10 ಗಂಟೆಯವರೆಗೆ ಘಟನಾ ಸ್ಥಳದಲ್ಲಿ ಯಾವ್ಯಾವ ಮೊಬೈಲ್ ಸಂಖ್ಯೆಗಳು ಚಾಲ್ತಿಯಲ್ಲಿದ್ದವು ಎಂಬುದರ ಮೇಲೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಪೊಲೀಸರಿಗೆ ಮಹತ್ವದ ಮಾಹಿತಿ ಕೂಡ ಲಭ್ಯವಾಗಿದೆ ಎನ್ನಲಾಗಿದೆ.

ಶುಕ್ರವಾರ ಬೆಳಗ್ಗೆಯಿಂದಲೇ ಲಿಂಗಾಂಬುದಿ ಪಾಳ್ಯದ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಾದರಿ ಪರಿಶೀಲಿಸುತ್ತಿದ್ದಾರೆ. ಇದರೊಟ್ಟಿಗೆ ವಾಹನಗಳ ಸಂಖ್ಯೆಯನ್ನು ಕೂಡ ಪತ್ತೆ ಮಾಡುತ್ತಿದ್ದಾರೆ. ಕೆಲ ನಿವಾಸಿಗಳ ಮನೆಯ ಮುಂದೆ ಅಳವಡಿಸಲಾಗಿರುವ ಸಿಸಿಟಿವಿ ಫೂಟೇಜ್ ಮೂಲಕ ಪರಿಶೀಲನೆ ನಡೆಸಿದ್ದಾರೆ.
ಸುತ್ತಮುತ್ತಲಿನ ಗ್ರಾಮಗಳ ರೌಡಿ ಶೀಟರ್ ಗಳು ಹಾಗೂ ಮದ್ಯ ವ್ಯಸನಿಗಳನ್ನು ಸಂಪೂರ್ಣ ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಹೊರವರ್ತುಲ ರಸ್ತೆಯಲ್ಲಿ ಕುಡುಕರ ಹಾವಳಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಗಸ್ತನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕವಾಗಿ ಮದ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮೈಸೂರು ಉಪ ಪೊಲೀಸ್ ಆಯುಕ್ತ ಮುತ್ತರಾಜ್ ಅವರು ಆಯಾ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ರಿಂಗ್ರಸ್ತೆಯ ಆಸುಪಾಸಿನಲ್ಲಿ ಬಿಗಿಭದ್ರತೆ ಕೈಗೊಂಡಿದ್ದಾರೆ. ಮದ್ಯದಂಗಡಿಗಳ ಮೇಲೆ ವಿಶೇಷ ನಿಗಾ ಇರಿಸಿ ಅವು ನಿಗದಿತ ಸಮಯದೊಳಗೆ ಬಾಗಿಲು ಮುಚ್ಚುವಂತೆ ನೋಡಿಕೊಳ್ಳುತ್ತಿದ್ದಾರೆ. ರಸ್ತೆಬದಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವವರನ್ನು 8 ಗಂಟೆಯ ಒಳಗೆ ಬಾಗಿಲು ಮುಚ್ಚಿಸುತ್ತಿದ್ದಾರೆ.
ರಸ್ತೆ ಬದಿ ಮದ್ಯ ಸೇವಿಸುವವರನ್ನು ವಶಕ್ಕೆ ತೆಗೆದುಕೊಂಡು ಎಚ್ಚರಿಕೆ ನೀಡಲಾಗುತ್ತಿದೆ. ಅನುಮಾನಾಸ್ಪದವಾಗಿ ಓಡಾಡುವವರ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಸಂಜೆಯ ನಂತರ ಅರ್ಧಗಂಟೆಗೆ ಒಮ್ಮೆಯಂತೆ ಗಸ್ತು ವಾಹನಗಳು ಸಂಚರಿಸುತ್ತಿವೆ. ಎಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ.












Click it and Unblock the Notifications