ಲಾಕ್ ಡೌನ್ ಲೆಕ್ಕಿಸದವರ ಮೇಲೆ ಮುಲಾಜಿಲ್ಲದೇ ಕೇಸ್; ಮೈಸೂರು ಕಮಿಷನರ್
ಮೈಸೂರು, ಏಪ್ರಿಲ್ 16: ಕರ್ನಾಟಕದಲ್ಲಿ ಕೊರೊನಾ ಸೋಂಕು ಹೊಂದಿರುವ ಎರಡನೇ ನಗರ ಮೈಸೂರಾಗಿದ್ದು, ಲಾಕ್ ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸುವುದಕ್ಕೆ ಪೊಲೀಸರು ಮುಂದಾಗಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಬೆಳಿಗ್ಗೆ 6 ರಿಂದ ಮಧ್ಯಾಹ್ನ12 ಗಂಟೆವರೆಗೆ ಲಾಕ್ಡೌನ್ ನಡುವೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಸವಾರನಿಗೆ ಮಾತ್ರ ಅವಕಾಶ. ನಾಲ್ಕು ಚಕ್ರದ ವಾಹನದಲ್ಲಿ ಚಾಲಕ ಒಳಗೊಂಡಂತೆ ಇಬ್ಬರಿಗೆ ಮಾತ್ರ ಅವಕಾಶವಿದೆ. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕರು ತಮ್ಮ ಮನೆಯಿಂದ 2 ಕಿ.ಮೀ ವ್ಯಾಪ್ತಿಗಿಂತ ದೂರಕ್ಕೆ ಪ್ರಯಾಣಿಸಲು ಅವಕಾಶವಿಲ್ಲ. ತಮ್ಮ ಮನೆಯ ಹತ್ತಿರದ ಮಳಿಗೆಗಳಲ್ಲೇ ಅಗತ್ಯ ವಸ್ತುಗಳನ್ನು ಪಡೆಯಬೇಕು. ಮಳಿಗೆದಾರರು ದಾಸ್ತಾನು ಲಭ್ಯವಿರುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮಧ್ಯಾಹ್ನ 12ರಿಂದ ಸಂಜೆ 6 ಗಂಟೆ ಸಮಯದಲ್ಲಿ ಎಲ್ಲ ಅಗತ್ಯ ವಸ್ತು ಮತ್ತು ಸೇವೆಗಳ ಮಳಿಗೆಗಳನ್ನು ತೆರೆದಿರಲು ಅವಕಾಶವಿರುತ್ತದೆ. ಆದರೆ ಅವುಗಳನ್ನು ಪಡೆಯ ಬಯಸುವ ಸಾರ್ವಜನಿಕರು ಕಾಲ್ನಡಿಗೆಯಲ್ಲಿಯೇ ಹೊರಗೆ ಓಡಾಡಬೇಕಾಗುತ್ತದೆ. ಈ ಸಮಯದಲ್ಲಿ ವಾಹನಗಳನ್ನು ಉಪಯೋಗಿಸಲು ಅವಕಾಶವಿರುವುದಿಲ್ಲ ಎಂದರು.

ಹಾಲು, ಔಷಧಿ ಮಳಿಗೆ ಮತ್ತು ಆಸ್ಪತ್ರೆ ಹೊರತುಪಡಿಸಿ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ. ಮನೆಯಿಂದ ಹೊರಬರುವ ಎಲ್ಲ ಸಾರ್ವಜನಿಕರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು ಎಂದು ತಿಳಿಸಿದರು.
ವೈದ್ಯಕೀಯ ಸೇವೆ ಬಯಸುವ ಸಾರ್ವಜನಿಕರು ಕಡ್ಡಾಯವಾಗಿ ವೈದ್ಯರಿಂದ ಪಡೆದ ವೈದ್ಯಕೀಯ ಸಲಹಾ ಚೀಟಿ/ರಶೀದಿ ಹೊಂದಿದ್ದು ತಪಾಸಣೆ ವೇಳೆ ತೋರಿಸಬೇಕು. ಈ ಆದೇಶ ತುರ್ತು ವೈದ್ಯಕೀಯ ಸೇವೆಗಳು, ಎಲ್ಲಾ ರೀತಿಯ ಸರಕು ಸಾಗಿಸುವ ವಾಹನಗಳು, ಅಗತ್ಯ ಸೇವೆಗಳ ಪೂರೈಕೆಯಲ್ಲಿ ನಿರತವಾಗಿರುವ ಪಾಸ್ ಹೊಂದಿರುವ ಖಾಸಗಿ ವಾಹನಗಳು, ಸರ್ಕಾರಿ ವಾಹನಗಳು, ಕರ್ತವ್ಯ ನಿರತ ಸರ್ಕಾರಿ ನೌಕರರ ವಾಹನಗಳು, ಹಾಪ್ ಕಾಮ್ಸ್, ಪಡಿತರ, ಆಹಾರ ಪದಾರ್ಥಗಳು, ಹೋಂ ಡೆಲಿವರಿ ಹಾಗೂ ಕಿಚನ್ ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು. ಈ ಆದೇಶವು ಇಂದಿನಿಂದಲೇ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಜನರು ಸುಮ್ಮನೆ ಓಡಾಡುವುದು, ವಾಹನಗಳಲ್ಲಿ ತಿರುಗಾಡುವುದು ಕಾಣಿಸಿಕೊಂಡರೆ ಮುಲಾಜಿಲ್ಲದೆ ಸೀಜ್ ಮಾಡಿ, ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.











Click it and Unblock the Notifications