ಪಠ್ಯದಿಂದ ಅಧ್ಯಾಯ ಕೈಬಿಡಿ ಅಭಿಯಾನ ಕಾಂಗ್ರೆಸ್ ಉಪಕೃತರ ನಾಟಕ: ಪ್ರತಾಪ್ ಸಿಂಹ
ಮೈಸೂರು, ಜೂನ್ 1: "ಸರಕಾರಕ್ಕೆ ತಮ್ಮ ಅಧ್ಯಾಯವನ್ನು ಪಠ್ಯದಿಂದ ಕೈಬಿಡಿ ಎಂದು ಕೆಲವು ಲೇಖಕರು ಪತ್ರ ಬರೆಯುತ್ತಿರುವುದು ಕಾಂಗ್ರೆಸ್ನವರಿಂದ ಉಪಕೃತರಾದ ಕೆಲವರ ನಾಟಕ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಒಂದೆರಡು ವಾರಗಳಿಂದ ಕರ್ನಾಟಕದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದೆ. ದೇವನೂರು ಮಹಾದೇವ, ಡಾ. ಸರಜೂ ಕಾಟ್ಕರ್, ರೂಪ ಹಾಸನ, ಕವಿ ಚಂದ್ರಶೇಖರ್ ತಾಳ್ಯ, ಸಾಹಿತಿ ಈರಮ್ಮ ಎಂ. ಕಂಬಳಿ ಸೇರಿದಂತೆ ಕೆಲುವ ಲೇಖಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ನ್ಯಾಯಬದ್ಧವಾಗಿಲ್ಲ. ಇಂತಹ ಸಮಿತಿ ಮಾಡಿರುವ ಬಗ್ಗೆ ಬಹಿರಂಗ ಮಾಹಿತಿ ಇಲ್ಲ. ಈ ಹಿಂದೆ ಬರಗೂರು ಸಮಿತಿ ಪೆರಿಷ್ಕರಣೆ ವೇಳೆ ಮಾಹಿತಿ ನೀಡಲಾಗಿತ್ತು ಮತ್ತು ಪರಿಷ್ಕರಣೆ ಏಕೆ ಮಾಡಲಾಗಿದೆ ಎಂತಲೂ ತಿಳಿಸಲಾಗಿತ್ತು ಎಂದು ಪತ್ರದಲ್ಲಿ ಕೆಲವು ಸಾಹಿತಿಗಳು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, "ಭಗತ್ ಸಿಂಗ್ ಹಾಗೂ ನಾರಾಯಣಗುರು ಪಠ್ಯ ಕೈಬಿಟ್ಟ ವಿಚಾರವಾಗಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರೂ ಯಾರು ಬರಲಿಲ್ಲ, ವಿಚಾರಹೀನರಾಗಿಲ್ಲದಿದ್ದರೆ ಅವರು ಚರ್ಚೆಗೆ ಬರುತ್ತಿದ್ದರು" ಎಂದು ಅಸಮಧಾನ ಹೊರಹಾಕಿದರು.

ಕುವೆಂಪು ಪಠ್ಯದಲ್ಲಿ ಏರಿಕೆ
ರಾಷ್ಟ್ರಕವಿ ಕುವೆಂಪುಗೆ ಅಗೌರವ ತೋರಿದ್ದಾರೆ ಎಂದು ಪಠ್ಯ ಪರಿಷ್ಕರಣೆ ಸಮಿತಿ ನೇತೃತ್ವವಹಿಸಿದ್ದ ರೋಹಿತ್ ಚಕ್ರತೀರ್ಥ ವಿರುದ್ಧ ರಾಜ್ಯದ ಕೆಲವೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, "ಬಿಜೆಪಿ ಸರ್ಕಾರದಲ್ಲಿ ಕುವೆಂಪುಗೆ ಹೆಚ್ಚು ಗೌರವ ಕೊಡಲಾಗಿದೆ. 7 ಇದ್ದ ಪಠ್ಯವನ್ನು 10ಕ್ಕೇ ಏರಿಸಿದ್ದೇವೆ. ಸದಾನಂದ ಗೌಡರು ಮುಖ್ಯ ಮಂತ್ರಿಯಾಗಿದ್ದಾಗ ನಾಡಗೀತೆ ಆಯ್ತು, ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಪ್ರಶಸ್ತಿ ವಾಪಸ್ ನೀಡಿದರು, ಇದೀಗ ಪಠ್ಯದ ಲೇಖನ ವಾಪಸ್ ಪಡೆಯಲು ಪತ್ರ ಬರೆಯುತ್ತಿದ್ದಾರೆ. ಕೆಲವರ ಪಠ್ಯಗಳನ್ನು ಕೈಬಿಟ್ಟ ಮೇಲೆ ನಮ್ಮ ಗದ್ಯವನ್ನು ಕೈಬಿಡಿ ಎಂದೂ ಕೆಲವು ಲೇಖಕರು ಪತ್ರಬರೆಯುತ್ತಿದ್ದಾರೆ" ಎಂದು ತಿಳಿಸಿದರು.

ಬರಗೂರು ಬರೆಯುವುದನ್ನು ನಿಲ್ಲಿಸಿ 10 ವರ್ಷ
"ಕಾಂಗ್ರೆಸ್ ರಾಜ್ಯದಲ್ಲಿ ನೆಲ ಕಚ್ಚಿದೆ. ಆದರೆ ಕಾಂಗ್ರೆಸ್ನಿಂದ ಉಪಕೃತರಾದ ಸಾಹಿತಿಗಳು ಪಠ್ಯ ಪರಿಷ್ಕರಣೆ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ. ಕಮಲ ಹಂಪನಾ, ಬರಗೂರು ರಾಮಚಂದ್ರಪ್ಪರಲ್ಲಿ ಯಾರು ಕಲೆದ 10 ವರ್ಷಗಳಲ್ಲಿ ಜನರಲ್ಲಿ ನೆನಪಿಡುವ ಕೃತಿ ರಚಿಸಿದ್ದಾರೆ ಹೇಳಿ?. ಎಲ್ಲಾ ವಾದಗಳಲ್ಲಿ ಸೋಲು ಕಂಡ ಬಳಿಕ 2017ರಲ್ಲಿ ಸಿದ್ದರಾಮಯ್ಯರ ಆಡಳಿತವನ್ನು ವ್ಯಂಗ್ಯ ಮಾಡಲು ಚಕ್ರತಿರ್ಥ ಫಾರ್ವರ್ಡ್ ಮಾಡಿದ್ದ ಸಂದೇಶವನ್ನಿಟ್ಟುಕೊಂಡು ವಿವಾದ ಎಬ್ಬಿಸುತ್ತಿದ್ದಾರೆ" ಎಂದು ಪ್ರತಾಪ್ ಸಿಂಹ ದೂರಿದರು.

ವಿವಾದದ ಒಂದು ಪಠ್ಯ ವಾಪಸ್ ಚಳುವಳಿ
"ರಾಜ್ಯದಲ್ಲಿ ವಿವಾದ ಎಬ್ಬಿಸಲು ಸಾಹಿತಿಗಳ ಪಠ್ಯ ವಾಪಸ್ ಚಳುವಳಿ ಟೂಲ್ ಕಿಟ್ ನಾ ಒಂದು ಭಾಗ. ದೇವನೂರು ಮಹಾದೇವಾ ಸೇರಿದಂತೆ ಹಲವರ ಪಠ್ಯವನ್ನು 10 ಮತ್ತು 15ವರ್ಷಗಳಿಂದ ವಿದ್ಯಾರ್ಥಿಗಳು ಓದಿದ್ದಾರೆ. ಕೆಲವರ ಪಠ್ಯವನ್ನು ನಾವೇ ಕೈಬಿಟ್ಟಿದ್ದರೂ, ನಮ್ಮ ಪಠ್ಯವನ್ನು ವಾಪಸ್ ಪಡೆದಿದ್ದೇವೆ ಎಂದು ಪತ್ರ ಬರೆಯುತ್ತಿದ್ದಾರೆ, ಇದರಲ್ಲಿ ಏನಾದರೂ ಅರ್ಥವಿದಿಯೇ? ಎಂದು ಪ್ರಶ್ನಿಸಿದರು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪನಾ ನಾಗರಾಜಯ್ಯ ರಾಜೀನಾಮೆ ನೀಡಿದ್ದಾರೆ, ಆದರೆ ಅವರ ಪತ್ನಿ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ. ಅಂದರೆ ಅವರ ನಿರ್ಧಾರಕ್ಕೆ ಮನೆಯಲ್ಲೇ ಸಮ್ಮತಿಯಿಲ್ಲ ಎಂದರ್ಥ ಅಲ್ಲವೆ?" ಎಂದು ಸಂಸದರು ಪ್ರಶ್ನಿಸಿದರು.

ಸಾಂಸ್ಕೃತಿಕ ನಗರದಲ್ಲಿ ಯೋಗದಿನಕ್ಕೆ ಸಿದ್ಧತೆ
"ಜೂನ್ 21ರಲ್ಲಿ ಮೈಸೂರಿನಲ್ಲಿ ಯೋಗ ದಿನಾಚಾರಣೆ ಆಯೋಜನೆಯಾಗಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಹಾಗಾಗಿ ಸಾಂಸ್ಕೃತಿಕ ನಗರಿಯಲ್ಲಿ ಸಿದ್ಧತಾ ಕಾರ್ಯಕ್ರಮಗಳು ಭರದಿಂದ ಸಾಗುತ್ತಿದೆ. ಇಡೀ ನಗರದಲ್ಲಿ ಸ್ವಚ್ಛತಾ ಕೆಲಸ ನಡೆಯುತ್ತಿದೆ" ಎಂದು ಪ್ರತಾಪ್ ಸಿಂಹ ತಿಳಿಸಿದರು. ಪ್ರಸಿದ್ಧ ಅಂಬಾ ವಿಲಾಸ ಅರಮನೆ ಮುಂಭಾಗ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.












Click it and Unblock the Notifications