ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣದಲ್ಲಿಲ್ಲ ಮೈಸೂರು ಮೇಯರ್ ಹೆಸರು!
ಮೈಸೂರು, ನವೆಂಬರ್ 14 : 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಮಹಾಪೌರ ಎಂ.ಜೆ.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸಮ್ಮೇಳನದ ಸಮಿತಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಸಮ್ಮೇಳನದ ಮೊದಲ ದಿನದ ಪ್ರಥಮ ಕಾರ್ಯಕ್ರಮವಾದ ಧ್ವಜಾರೋಹಣ ಕಾರ್ಯಕ್ರಮಮಕ್ಕೆ ಆಹ್ವಾನ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅವರು ಆಕ್ಷೇಪಿಸಿದರು.

ನ.24ರಂದು ಬೆಳಿಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಪರಿಷತ್ ಧ್ವಜ, ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಗರದ ಪ್ರಥಮ ಪ್ರಜೆಯಾದ ಮಹಾಪೌರರು ಹಾಜರಿದ್ದು ಧ್ವಜಗಳಿಗೆ ಗೌರವ ಸೂಚಿಸಬೇಕು. ಆದರೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಿಸದೆ ಉಪೇಕ್ಷಿಸಲಾಗಿದೆ ಎಂದು ರವಿಕುಮಾರ್ ಕಿಡಿಕಾರಿದರು.
ಆಗ ಮಧ್ಯಪ್ರವೇಶಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ ಅವರು ರವಿಕುಮಾರ್ ಅವರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳಲ್ಲಿ ಧ್ವಜಾರೋಹಣ ನೆರವೇರಿಸುವವರ ಹೆಸರುಗಳನ್ನು ಮಾತ ಮುದ್ರಿಸಲಾಗುತ್ತದೆ ಎಂದು ಹೇಳಿದರು.
ಆದರೆ, ಎಲ್ಲ ಗಣ್ಯರು ಭಾಗವಹಿಸಲು ಅವಕಾಶ ಇರುತ್ತದೆ. ಹಾಗಾಗಿ ತಾವು ಕೂಡ ಪಾಲ್ಗೊಳ್ಳಬಹುದು. ನಿಮ್ಮ ಹೆಸರನ್ನು ಮುಖ್ಯ ವೇದಿಕೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭ ವಿಭಾಗದಲ್ಲಿ ಮುದ್ರಿಸಲಾಗಿದೆ. ವಸ್ತುಸ್ಥಿತಿ ಅರಿತು ಸಹಕರಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಒಪ್ಪದ ರವಿಕುಮಾರ್ ಸಭೆಯಿಂದ ನಿರ್ಗಮಿಸಿದರು.
ಮೆರವಣಿಗೆ ಸಮಿತಿ ಪಟ್ಟಿಯಲ್ಲೂ ಹೆಸರಿಲ್ಲ:
ರವಿಕುಮಾರ್ ಮೆರವಣಿಗೆ ಸಮಿತಿ ಅಧ್ಯಕ್ಷರಾಗಿದ್ದು, ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲೂ ಅವರ ಹೆಸರಿಲ್ಲದಿರುವುದು ಸದ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.












Click it and Unblock the Notifications