ಚಂಪಾರಿಗೆ 2000 ಪತ್ರ ಬರೆದು ಸಮ್ಮೇಳನಕ್ಕೆ ಸ್ವಾಗತ ಕೋರಿದ ವಿದ್ಯಾರ್ಥಿಗಳು
ಮೈಸೂರು, ನವೆಂಬರ್ 24: 83ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವ ಸಾಹಿತಿ ಚಂದ್ರಶೇಖರ್ ಪಾಟೀಲರಿಗೆ 2000 ಶುಭಾಶಯ ಪತ್ರವನ್ನು ಅಂಚೆ ಮೂಲಕ ಕಳುಹಿಸುವುದರೊಂದಿಗೆ ನಗರದ ಮಹರ್ಷಿ ವಿದ್ಯಾಸಂಸ್ಥೆಯ ಮಕ್ಕಳು ಗಮನಸೆಳೆದಿದ್ದಾರೆ.
ಇಂದಿನ ಆಧುನಿಕ ಯುಗದಲ್ಲಿ ಪತ್ರ ಬರೆಯುವ ಅಭ್ಯಾಸ ಮರೆಯಾಗಿದೆ. ಶುಭಾಶಯಗಳನ್ನು ಪತ್ರಗಳಲ್ಲೇ ತಿಳಿಸುವ ಕಾಲವೊಂದಿತ್ತು. ಅದು ತೆರೆಗೆ ಸರಿದಿದೆ. ಆದರೆ, ಪತ್ರ ನೀಡುತ್ತಿದ್ದ ಸುಖ ಸಂತೋಷ ಇಂದಿಗೂ ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿದಿದೆ. ಈ ಪತ್ರದ ರವಾನೆಯ ಮೂಲಕ ಆ ಕಾಲವನ್ನು ಮತ್ತೊಮ್ಮೆ ನೆನಪಿಸುವ ಮತ್ತು ಅಂಚೆಯ ಮಹತ್ವವನ್ನು ವಿದ್ಯಾರ್ಥಿಗಳು ಸಾರಿದರು.
ಚಿತ್ರಗಳು : ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರ ಜಾತ್ರೆ

ಒಂದಾನೊಂದು ಕಾಲದಲ್ಲಿ ಪತ್ರಗಳು ಮಾನವರ ಅವಿಭಾಜ್ಯ ಅಂಗಗಳಾಗಿದ್ದವು. ಪರಸ್ವರ ವಿಚಾರ ವಿನಿಮಯಕ್ಕಾಗಿಯೇ ಇದ್ದ ಪತ್ರಗಳು ಭಾವನಾತ್ಮಕ ಸಂಬಂಧ ಹೊಂದಿದ್ದವು. ಕೆಲವೊಮ್ಮೆ ಸಾಹಿತ್ಯದ ಪ್ರಕಾರವಾಗಿಯೂ, ಪುಟ್ಟಪುಟ್ಟ ಕಾವ್ಯಗಳಾಗಿಯೂ, ಇತಿಹಾಸದ ಆಕಾರಗಳಾಗಿಯೂ ಗಮನಸೆಳೆಯುತ್ತಿದ್ದವು.
ಇಂದಿನ ವಾಟ್ಸಪ್, ಫೇಸ್ಬುಕ್ ಗಳಂತಹ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇಂತಹ ಪತ್ರಗಳು ನೆಲೆ ಕಳೆದುಕೊಂಡಿವೆ. ಹೀಗಾಗಿ ಅಂದಿನ ಆ ಪತ್ರ ವೈಭವ ನೆನಪಿಸುವ ಮತ್ತು ಮಕ್ಕಳಿಗೆ ಪತ್ರದ ಮಹತ್ವ ಅರಿಯುವಂತೆ ಮಾಡುವ ಸಲುವಾಗಿ ವಿದ್ಯಾಸಂಸ್ಥೆಯ ಸುಮಾರು 2000 ಮಕ್ಕಳು ಅಂಚೆ ಕಾರ್ಡಿನ ಮೂಲಕ ಸಮ್ಮೇಳನಾಧ್ಯಕ್ಷರಿಗೆ ಶುಭಾಶಯ ತಿಳಿಸಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ.
ಈ ಸಂದರ್ಭ ಮಹರ್ಷಿ ವಿದ್ಯಾಸಂಸ್ಥೆಯ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥರಾದ ಭವಾನಿಶಂಕರ್, ವಿಶ್ವಸ್ಥರಾದ ಕೇದಾರ್ ನಾಥ್, ಪ್ರಾಚಾರ್ಯರುಗಳಾದ ಕೆ.ಆರ್. ಗೋಪಾಲಸ್ವಾಮಿ, ವಿ. ಗಿರೀಶ್, ಲಕ್ಷ್ಮಿ, ಮಹಾದೇವಸ್ವಾಮಿ, ಉಷಾಸಿಂಗ್, ವಾಣಿಶ್ರೀ ಹಾಗೂ ಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು ಇದ್ದರು.












Click it and Unblock the Notifications