ವರ್ಷ ಕಳೆದರೂ ಶುರುವಾಗಿಲ್ಲ ಮೈಸೂರಿನ ನೂತನ ಜಿಲ್ಲಾಧಿಕಾರಿ ಕಚೇರಿ
ಮೈಸೂರು, ಜುಲೈ 13: ಕೋಟಿ ಕೋಟಿ ಹಣ ಖರ್ಚು ಮಾಡಿ, ಮೈಸೂರಿನ ಪ್ರಾಚೀನ ಕಟ್ಟಡಗಳಲ್ಲೊಂದಾದ ಲಲಿತ ಮಹಲ್ ಮಾದರಿಯಲ್ಲಿಯೇ ನಿರ್ಮಾಣಗೊಂಡಿರುವ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಕಳೆದ ಒಂದೂವರೆ ವರ್ಷದಿಂದಲೂ ಖಾಲಿ ಬಿದ್ದಿದೆ.
ಮೈಸೂರು ವಿವಿ ಬಳಿ ಇರುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ತೀರಾ ಇಕ್ಕಟ್ಟಾಗಿದೆ ಎಂಬ ಕಾರಣಕ್ಕೆ ಅದನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಸಿದ್ದಾರ್ಥ ನಗರದಲ್ಲಿ ಬರೋಬ್ಬರಿ 59 ಕೋಟಿ ವ್ಯಯಿಸಿ ಭವ್ಯವಾದ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕೆ ಜಿಲ್ಲಾ ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸೂರಿನಲ್ಲಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಯನ್ನು ನಿರ್ಮಿಸಲಾಗಿತ್ತು.
ಈ ಕಟ್ಟಡದಲ್ಲಿ ವಿವಿಧ ಇಲಾಖೆಗಳ ಕಚೇರಿಯಿದ್ದು, 200 ಜನ ಕುಳಿತುಕೊಳ್ಳಬಹುದಾದ 6 ಸಭಾಂಗಣಗಳಿವೆ. ತಳಮಹಡಿಯಲ್ಲಿ ವಾಹನ ನಿಲುಗಡೆ, ಕೆಳ ನೆಲಮಹಡಿಯಲ್ಲಿ ಜಿಲ್ಲಾ ಖಜಾನೆ ಮತ್ತು ಮುಜರಾಯಿ ಇಲಾಖೆ, ಒಂದನೇ ಮಹಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾನೂನು ಮಾಪನ ಶಾಸ್ತ್ರ, ಮೀನುಗಾರಿಕಾ ಇಲಾಖೆ, ಅಬಕಾರಿ ಇಲಾಖೆ, ಜಿಲ್ಲಾ ಯುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಗಳಿಗೆ ಸ್ಥಳಾವಕಾಶ ನೀಡಲಾಗಿದೆ.

ಆದರೆ ಇದೀಗ ಕಟ್ಟಡಗಳ ಸುತ್ತಮುತ್ತಲೂ ಗಿಡ-ಗಂಟಿಗಳು ಯಥೇಚ್ಛವಾಗಿ ಬೆಳೆದು ನಿಂತಿವೆ. ಕಟ್ಟಡದ ಅನೇಕ ಕಿಟಕಿ ಬಾಗಿಲುಗಳು ತೆಗೆದುಕೊಂಡಿವೆ. ಇಬ್ಬರು ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
ಇಂಥ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆದರೂ ಕಾರ್ಯಾರಂಭ ಮಾಡದೆ ಇರುವುದು ಆಡಳಿತ ವರ್ಗದ ಬೇಜವಾಬ್ದಾರಿಗೆ ಹಿಡಿದ ಕನ್ನಡಿ ಎನ್ನುತ್ತಿದ್ದಾರೆ ಜನರು.
ಈ ಕುರಿತು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿ, ಜೂನ್ ಕೊನೆ ವಾರದಲ್ಲಿಯೇ ಸಂಬಂಧಪಟ್ಟ ಇಲಾಖೆಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಿದ್ದೆವು. ಆದರೆ ಕಟ್ಟಡದಲ್ಲಿ ಕೆಲವೊಂದು ಕಾಮಗಾರಿ ನಡೆಯುತ್ತಿರುವುದರಿಂದ ಸ್ಥಳಾಂತರ ಸಾಧ್ಯವಾಗಿಲ್ಲ. ಸಭೆ ಕರೆದು ಈ ಕುರಿತಾಗಿ ತೀರ್ಮಾನಕೈಗೊಳ್ಳುವುದಾಗಿ ತಿಳಿಸಿದ್ದಾರೆ.












Click it and Unblock the Notifications